ಪಡಿತರ ವ್ಯವಸ್ಥೆ ಜನಸಾಮಾನ್ಯರಿಗೆ ಸಿಗುವಂತೆ ಮಾಡಿ: ಜೆ.ಆರ್.ಲೋಬೊ
ಮಂಗಳೂರು, ಸೆ.27: ಪಡಿತರ ವ್ಯವಸ್ಥೆ ಜನಸಾಮಾನ್ಯರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸರಕಾರದ ಸೌಲಭ್ಯವನ್ನು ಜನಸಾಮಾನ್ಯರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ತನ್ನ ಕಚೇರಿಯಲ್ಲಿ ನಡೆದ ಕಂದಾಯ ಅಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಶಕ್ತಿನಗರದಲ್ಲಿ ಪಡಿತರ ಅಂಗಡಿ ಮುಚ್ಚಲಾಗಿದೆ. ಇದರಿಂದ ಜನರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಅಲ್ಲಿ ನ್ಯಾಯಬೆಲೆ ಅಂಗಡಿ ಮತ್ತೆ ಕಾರ್ಯಾರಂಭಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ ಲೋಬೊ, ಕೆಲವು ಜನರಿಗೆ ಪಡಿತರ ಚೀಟಿ ನೀಡಲಾಗಿಲ್ಲ. ಅವರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಕಂದಾಯ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಎಂದರು.
94 ಸಿಸಿಯ ಸರ್ವೇ ಕೆಲಸಗಳ ವಿವರ ಪಡೆದ ಶಾಸಕರು ವಾರದೊಳಗೆ 94 ಸಿಸಿಯ ಸರ್ವೇ ಕಾರ್ಯವನ್ನು ಮುಗಿಸಿ ಅವರಿಗೆ ಹಕ್ಕು ಪತ್ರ ಕೊಡಲು ಕ್ರಮ ತೆಗೆದುಕೊಳ್ಳುವಂತೂ ಕಂದಾಯ ನಿರೀಕ್ಷರಿಗೆ ತಾಕೀತು ಮಾಡಿದರು.