ವೈಜ್ಞಾನಿಕ ಜೇನುಗಾರಿ: ಜಿಲ್ಲಾ ಮಟ್ಟದ ವಿಚಾರ ಸಂಕಿರಣ
ಪುತ್ತೂರು, ಸೆ. 27: ಜೇನು ಕೃಷಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಹಾಗೂ ಗುಣಮಟ್ಟದ ಇಳುವರಿಯನ್ನು ಪಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು
ಅವರು ಬುಧವಾರ ಪುತ್ತೂರು ಪುರಭವನದಲ್ಲಿ ನಡೆದ ವೈಜ್ಞಾನಿಕ ಜೇನುಗಾರಿ ಎಂಬ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಜೇನು ಕೃಷಿಯಲ್ಲಿ ಪರಿಮಾಣದ ಜೊತೆಗೆ ಗುಣಮಟ್ಟವೂ ಮಖ್ಯವಾಗಿದೆ. ಸರ್ಕಾರದಿಂದ ಜೇನು ಪೆಟ್ಟಿಗೆ ಮತ್ತು ಜೇನು ಕುಟುಂಬ ಖರೀದಿಗೆ ಸಕಾಷ್ಟು ಸಹಾಯಧನ ದೊರಕುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 90 ರಷ್ಟು ಸಹಾಯಧನ ದೊರೆಯುತ್ತಿದೆ. ಜೇನು ಕೃಷಿಗೆ ಹೆಚ್ಚಿನ ಜಾಗ ಬೇಕಾಗಿಲ್ಲ. ಅಲ್ಪಸ್ವಲ್ಪ ಜಾಗದಲ್ಲಿಯೂ ಈ ಕೃಷಿ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಜೇನು ಕೃಷಿ ಇತರ ಕೃಷಿಗಳಂತೆ ಕಷ್ಟದಾಯಕವಲ್ಲ. ಮಹಿಳೆಯರೂ ಇದರಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಪಡೆಯಲು ಸಾಧ್ಯ ಎಂದು ಹೇಳಿದರು. ಪೊನ್ನಂಪೇಟೆ ಕಾಲೇಜ್ನ ಸಹಪ್ರಾದ್ಯಾಪಕ ಕೆಂಚಾರೆಡ್ಡಿ, ಬೆಂಗಳೂರು ವಿಶ್ವವಿದ್ಯಾನಿಲಯದ ಸಹಪ್ರಧ್ಯಾಪಕ ಡಾ. ಭಾರ್ಗವ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ತಾ.ಪಂ. ಅಧ್ಕಕ್ಷೆ ಭವಾನಿ ಚಿದಾನಂದ, ದ.ಕ.ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ದ.ಕ. ಜಿಲ್ಲಾ ಜೇನು ವ್ಯವಸಾಯಗಾರರ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರು ಉಪಸ್ಥಿತರಿದ್ದರು. ಜಿ.ಪಂ. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಪ್ರದೀಪ್ ಡಿ’ಸೋಜ ಸ್ವಾಗತಿಸಿದರು. ಹಿರಿಯ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.