ಡಾರ್ಜಿಲಿಂಗ್: 104 ದಿನಗಳ ಬಳಿಕ ಅಂತ್ಯಗೊಂಡ ಮುಷ್ಕರ

ಕೋಲ್ಕತಾ, ಸೆ.27: ಭಾರತದ ಅತ್ಯಂತ ಆಕರ್ಷಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದೆನಿಸಿರುವ ಡಾರ್ಜಿಲಿಂಗ್ನ ಪ್ರವಾಸೋದ್ಯಮಕ್ಕೆ ತೊಡಕಾಗಿ ಪರಿಣಮಿಸಿದ್ದ , ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಮುಷ್ಕರ 104 ದಿನಗಳ ಬಳಿಕ ಅಂತ್ಯಗೊಂಡಿದೆ.
ಪಶ್ಚಿಮಬಂಗಾಲದ ಗೂರ್ಖಾ ಜನಾಂಗದವರಿಗಾಗಿ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಆಗ್ರಹಿಸಿ ಗೂರ್ಖಾ ಜನಮುಕ್ತಿ ಮೋರ್ಛಾ(ಜಿಜೆಎಂ) ಸಂಘಟನೆಯ ನೇತೃತ್ವದಲ್ಲಿ ಕಳೆದ 104 ದಿನಗಳಿಂದ ಮುಷ್ಕರ ನಡೆಯುತ್ತಿದ್ದು ಚಹಾ ಉತ್ಪಾದನೆಗೆ ಹೆಸರಾಗಿರುವ ಡಾರ್ಜಿಲಿಂಗ್ನ ವಾಣಿಜ್ಯ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿತ್ತು ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿತ್ತು.
‘ಕೇಂದ್ರದ ಗೃಹಸಚಿವ ರಾಜನಾಥ್ ಸಿಂಗ್ ಅವರ ಕೋರಿಕೆ ಮೇರೆಗೆ, ಸಂಘಟನೆಯ ಹಿರಿಯ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ, ಬುಧವಾರ(ಸೆ.27)ದಿಂದ ಮುಷ್ಕರ ಕೈಬಿಡಲು ನಿರ್ಧರಿಸಲಾಗಿದೆ’ ಎಂದು ಜಿಜೆಎಂನ ಜ್ಯೋತಿ ರಾಯ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಡಾರ್ಜಿಲಿಂಗ್ನ ಜನರ ತ್ಯಾಗವನ್ನು ಗಮನದಲ್ಲಿಟ್ಟುಕೊಂಡು ಮಾತುಕತೆಗೆ ತೆರಳುತ್ತಿದ್ದೇವೆ. ಮಾತುಕತೆಯ ಫಲಿತಾಂಶವನ್ನು ಎದುರುನೋಡುತ್ತಿದ್ದೇವೆ ಎಂದವರು ತಿಳಿಸಿದ್ದಾರೆ. ಇದೀಗ ಮುಷ್ಕರ ಅಂತ್ಯಗೊಂಡಿರುವ ಕಾರಣ ಡಾರ್ಜಿಲಿಂಗ್ನಲ್ಲಿ ಇಂಟರ್ನೆಟ್ಗೆ ವಿಧಿಸಲಾಗಿದ್ದ ನಿರ್ಬಂಧವನ್ನು ರದ್ದುಗೊಳಿಸುವುದಾಗಿ ಸ್ಥಳೀಯಾಡಳಿತ ತಿಳಿಸಿದೆ. ಕಳೆದ ಜೂನ್ನಿಂದ ಇಲ್ಲಿ ಇಂಟರ್ನೆಟ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.
ಆದರೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ ಸುದ್ದಿ, ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ ಎಂದು ದಾರ್ಜಿಲಿಂಗ್ ಜಿಲ್ಲಾಧಿಕಾರಿ ಜೊಯೊಷಿ ದಾಸ್ಗುಪ್ತ ತಿಳಿಸಿದ್ದಾರೆ.
ಈ ಮಧ್ಯೆ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಲದ ಪ್ರವಾಸೋದ್ಯಮ ಸಚಿವ ಗೌತಮ್ ದೇವ್, ಮುಷ್ಕರ ಹಿಂಪಡೆಯುವ ಮೊದಲೇ, ಮುಷ್ಕರದ ಕರೆಯನ್ನು ತಿರಸ್ಕರಿಸಿದ್ದ ಶೇ.80ರಷ್ಟು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆರೆದಿದ್ದರು ಎಂದಿದ್ದಾರೆ. ಪಶ್ಚಿಮ ಬಂಗಾಲ ಸರಕಾರ ಜಿಜೆಎಂನ ಬೇಡಿಕೆಯನ್ನು ವಿರೋಧಿಸುತ್ತಿದೆ. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವಿನ ಸಂಘರ್ಷದ ಕಾರಣ ಕಳೆದ ಮೂರು ತಿಂಗಳಿಗೂ ಹೆಚ್ಚಿನ ಕಾಲ ದಾರ್ಜಿಲಿಂಗ್ನಲ್ಲಿ ಶಾಲಾ ಕಾಲೇಜು ಹಾಗೂ ಅಂಗಡಿಗಳು ಬಾಗಿಲು ಮುಚ್ಚಿದ್ದು ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಗಿತ್ತು.
ಸ್ಥಳೀಯ ಶಾಲೆಗಳಲ್ಲಿ ಬಂಗಾಳಿ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಳೆದ ಜೂನ್ನಲ್ಲಿ ಪಶ್ಚಿಮ ಬಂಗಾಳ ಸರಕಾರ ಘೋಷಿಸಿದ್ದು ಗೂರ್ಖಾ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಗೂರ್ಖಾ ಸಮುದಾಯದವರು ನೇಪಾಳಿ ಭಾಷೆ ಮಾತನಾಡುತ್ತಾರೆ.
ಗೂರ್ಖಾ ಸಮುದಾಯದವರು ಕಳೆದ ಹತ್ತು ವರ್ಷದಿಂದ ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯದ ಸ್ಥಾಪನೆಗೆ ಆಗ್ರಹಿಸುತ್ತಿದ್ದು, ಪ.ಬಂಗಾಲ ಸರಕಾರದ ಈ ಘೋಷಣೆಯ ಬಳಿಕ ಮತ್ತೆ ತಮ್ಮ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದರು.







