ರಸ್ತೆ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು; ಇಬ್ಬರಿಗೆ ಗಾಯ

ಭಟ್ಕಳ, ಸೆ. 27: ಮಿನಿ ಟ್ರಕ್ಕೊಂದು ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಬಂದರ್ ರಸ್ತೆಯ ಡೋಂಗರ್ ಪಳ್ಳಿ ಕ್ರಾಸ್ನಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತಲಗೋಡ್ ನಿವಾಸಿ ನಾಗಪ್ಪ ಈರಪ್ಪ ನಾಯ್ಕ(45) ಎಂದು ಗುರುತಿಸಿದ್ದು, ಗಾಯಗೊಂಡವರನ್ನು ಮಗ್ದೂಮ್ ಕಾಲನಿಯ ಮರ್ವಾನ್ ಜಾಫ್ರಾನ್ (22) ಹಾಗೂ ಆಸಾರಕೇರಿ ನಿವಾಸಿ ಸವೂದ್ ಜಾಫರ್ ತಾಹಿರಾ (22) ಎಂದು ಗುರುತಿಸಲಾಗಿದೆ.
ಗಾಯಗೊಂಡ ಯುವಕರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ವಿವರ: ಮೃತ ನಾಗಪ್ಪ ನಾಯ್ಕ ಎಂಬವರು ಕೆಲಸ ಮುಗಿಸಿಕೊಂಡು ಬಂದರ್ ನಿಂದ ತಮ್ಮ ನಿವಾಸ ತಲಗೋಡಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಬಂದರ್ ಕಡೆಯಿಂದ ಭಟ್ಕಳಕ್ಕೆ ಅತಿವೇಗದಿಂದ ಬಂದ ಮಿನಿ ಟ್ರಕ್ ಮೊದಲು ನಾಗಪ್ಪ ನಾಯ್ಕರ ಬೈಕ್ ಢಿಕ್ಕಿ ಹೊಡಿಯಿತು ಎಂದು ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಟ್ರಕ್ ಬೈಕ್ ಅನ್ನು ದೂರಕ್ಕೆ ಎಳೆದುಕೊಂಡು ಹೋಗಿ ನಂತರ ಡೋಂಗರ್ ಪಳ್ಳಿಯ ಕಡೆಗೆ ಹೋಗುತ್ತಿದ್ದ ಯುವಕರ ಮತ್ತೊಂದು ಬೈಕ್ ಗೆ ಢಿಕ್ಕಿ ಹೊಡೆಯಿತು. ಈ ಘಟನೆಯಲ್ಲಿ ನಾಗಪ್ಪ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕು ಗಂಭೀರವಾಗಿ ಗಾಯಗೊಂಡರು.
ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







