ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ವಿಶೇಷ ಒತ್ತು: ಸಚಿವ ಆರ್.ಬಿ. ತಿಮ್ಮಾಪುರ
ಮಂಗಳೂರು, ಸೆ. 28: ಅಬಕಾರಿ ಇಲಾಖೆ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಿ ಕಾರ್ಯಾ ಚರಿಸಲು ಸೂಚಿಸಲಾಗಿದೆ ಎಂದು ರಾಜ್ಯದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಅಬಕಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಡ್ರಗ್ಸ್ ಹಾವಳಿ ಯುವ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಮುಂದಾಗಿದೆ. ಅದಕ್ಕಾಗಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯನ್ನು ಬಲಪಡಿಸಲಾಗುತ್ತಿದೆ. ಈ ಸಮಿತಿಯವರು ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿ, ಮಾದಕ ದ್ರವ್ಯ ವ್ಯಸನಿಗಳಾಗಿರುವ ವಿದ್ಯಾರ್ಥಿಗಳನ್ನು ಅದರಿಂದ ಹೊರಬರುವಂತೆ ಹಾಗೂ ಈ ಜಾಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಇಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಅಬಕಾರಿ ಡಿಸಿ ನೇತೃತ್ವದ ಹಿಂದಿನ ಅನುಷ್ಠಾನ ಸಮಿತಿಯ ನಿಷ್ಕ್ರಿಯಗೊಂಡಿರುವುದನ್ನು ಒಪ್ಪಲೇ ಬೇಕಾಗಿದೆ.ಹಾಗಾಗಿ ಸಮಿತಿಯನ್ನು ಬಲಗೊಳಿಸುವ ಮೂಲಕ ಡ್ರಗ್ಸ್ ನಿಯಂತ್ರಣ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದರು.
ಅಬಕಾರಿ ಇಲಾಖೆ ಗುರಿ ಕೇವಲ ಆದಾಯ ಸಂಗ್ರಹ ಮಾತ್ರವಲ್ಲ, ಬದಲಿಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನೂ ನಡೆಸಲಾಗುವುದು ಎಂದವರು ಹೇಳಿದರು.
ಮದ್ಯಪಾನ ಸಂಪೂರ್ಣ ನಿಷೇಧದ ಚಿಂತನೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ಬಹಳ ಹಿಂದಿನಿಂದಲೂ ಮದ್ಯಪಾನ ಜಾರಿಯಲ್ಲಿದೆ. ಅದನ್ನು ನಿಷೇಧಿಸುವುದು ಅಷ್ಟು ಸುಲಭವಲ್ಲ. ಕುಡಿಯುವುರನ್ನು ಕುಡಿಯಬೇಡಿ ಎಂದು ಹೇಳಲೂ ಆಗುವುದಿಲ್ಲ. ಆದರೆ ನಕಲಿ ಮದ್ಯಪಾನದಿಂದ ಆರೋಗ್ಯವನ್ನು ಕೆಡಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ಅಗತ್ಯ. ಮದ್ಯಪಾನಕ್ಕಿಂತಲೂ ಇದೀಗ ಡ್ರಗ್ಸ್ ಹಾವಳಿ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ 2016-17ನೆ ಸಾಲಿನಲ್ಲಿ ಐದು ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 25.278 ಕಿ.ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಸಿಬ್ಬಂದಿ ಕೊರತೆ ನೀಗಿಸಲು ಕ್ರಮ
ದ.ಕ. ಜಿಲ್ಲೆಯ ಅಬಕಾರಿ ಇಲಾಖೆಗೆ 233 ಹುದ್ದೆಗಳು ಮಂಜೂರಾಗಿದ್ದು, ಸದ್ಯ 120 ಮಂದಿ ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದ್ಯಂತ 1200 ಗಾರ್ಡ್ಗಳು ಹಾಗೂ 250 ಎಸ್ಐಗಳ ಹುದ್ದೆಗಳ ನೇಮಕ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 18050 ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿದ್ದು, ಈಗಾಗಲೇ 9250 ಕೋಟಿ ರೂ. ಈವರೆಗೆ ಸಂಗ್ರಹವಾಗಿದೆ ಎಂದು ಅವರು ಹೇಳಿದರು.
ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಯಾಗಬೇಕು
ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳ್ಳಬೇಕು. ಇದರಿಂದ ಮೌಢ್ಯದ ಹೆಸರಿನಲ್ಲಿ ಬಡವರ ಸುಲಿಗೆ ಪ್ರಕರಣಗಳು ನಿಯಂತ್ರಣವಾಗಲಿದೆ. ಮಕ್ಕಳನ್ನು ಕೊಂದು ನಿಧಿ ಪಡೆಯುವಂತಹ ಅನಿಷ್ಠಗಳಿಗೆ ಈ ಕಾಯ್ದೆಯಿಂದ ಕಡಿವಾಣ ಬೀಳಲಿದೆ. ಪ್ರಸ್ತುತ ಕಾಯ್ದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಮಾತ್ರವೇ ದೊರಕಿದೆ. ಇದು ಮುಂದೆ ಅಸೆಂಬ್ಲಿಗೆ ಬಂದಾಗ ಮುಂದೆ ಸಲಹೆ ಸೂಚನೆಗಳನ್ನು ನೀಡುವ ಮೂಲಕ ವಿಸ್ತೃತ ಚರ್ಚೆ ನಡೆಸಬಹುದು. ಅದು ಬಿಟ್ಟು ಸಂಪೂರ್ಣ ಕಾಯ್ದೆ ಜಾರಿಯನ್ನೇ ವಿರೋಧಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.