ಬುಲೆಟ್ ರೈಲಿಗಾಗಿ 30 ಸಾವಿರ ಕೋಟಿ ರೂ. ನೀಡುವ ಸರಕಾರಕ್ಕೆ ಸೇತುವೆ ದುರಸ್ತಿಗೆ ಹಣವಿಲ್ಲ
ಕೇಂದ್ರ ಸರಕಾರವನ್ನು ಟೀಕಿಸಿದ ಶಿವಸೇನೆ

ಹೊಸದಿಲ್ಲಿ. ಸೆ.29: ಮುಂಬೈ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಕೇಂದ್ರ ಸರಕಾವರನ್ನು ಟೀಕಿಸಿರುವ ಶಿವಸೇನೆ, “ಒಂದೇ ದಿನದಲ್ಲಿ ಬುಲೆಟ್ ಟ್ರೈನ್ ಗಾಗಿ 30 ಸಾವಿರ ಕೋಟಿ ರೂ. ನೀಡಲಾಗುತ್ತದೆ, ಆದರೆ ಬಡ ಪ್ರಯಾಣಿಕರು ಉಪಯೋಗಿಸುವ ಸೇತುವೆ ದುರಸ್ತಿಗೆ ಸರಕಾರದ ಬಳಿ ಹಣವಿಲ್ಲ” ಎಂದಿದೆ.
“ದುರಸ್ತಿಗೆ ಸಂಬಂಧಿಸಿ ಶಿವಸೇನೆಯ ನಾಯಕರು ಹಲವು ಬಾರಿ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು. ಬುಲೆಟ್ ಟ್ರೈನ್ ಗೆ ನಿಮ್ಮ ಬಳಿ ಹಣವಿದೆ, ಆದರೆ ಸೇತುವೆಯನ್ನು ದುರಸ್ತಿ ಮಾಡಲು ನಿಮ್ಮಲ್ಲಿ ಹಣವಿಲ್ಲ” ಎಂದು ಶಿವಸೇನೆಯ ಶಾಸಕ ಸಂಜಯ್ ರೌತ್ ಹೇಳಿದ್ದಾರೆ.
ಬುಲೆಟ್ ಟ್ರೈನ್ ವಿಚಾರಕ್ಕೆ ಸಂಬಂಧಿಸಿ ಆರಂಭದಿಂದಲೂ ಶಿವಸೇನೆ ಸರಕಾರವನ್ನು ಟೀಕಿಸುತ್ತಿದೆ. ಅಹ್ಮದಾಬಾದ್ ನಿಂದ ಮುಂಬೈ ನಡುವೆ ಓಡಲಿರುವ ಬುಲೆಟ್ ಟ್ರೈನ್ ಭಾರತದ ನಿಜವಾದ ಅವಶ್ಯಕತೆಯಲ್ಲ ಎಂದು ಈ ಹಿಂದೆ ಶಿವಸೇನೆ ಹೇಳಿತ್ತು.
“ನೀವು ಬಡ ಪ್ರಯಾಣಿಕರನ್ನು ಸಾಯಲು ಬಿಟ್ಟಿದ್ದೀರಿ, ಹಣವಂತರಿಗಾಗಿ ನೀವು ಬುಲೆಟ್ ರೈಲಿನ ಬಗ್ಗೆ ಮಾತನಾಡುತ್ತೀರಿ”’ ಎಂದಿರುವ ಸಂಜಯ್ ರೌತ್. ಈ ದುರಂತವನ್ನು ‘ಹತ್ಯಾಕಾಂಡ’ ಎಂದಿದ್ದಾರೆ.





