ಮೋದಿಯ ಆರ್ಥಿಕ ನೀತಿಯಿಂದ ದೇಶ ದುಸ್ಥಿತಿಯತ್ತ: ಪಿ.ವಿ.ಮೋಹನ್
ಮಂಗಳೂರು, ಸೆ.30: ಪ್ರಧಾನಿ ನರೇಂದ್ರ ಮೋದಿಯ ಆರ್ಥಿಕ ನೀತಿಯಿಂದ ದೇಶವು ದುಸ್ಥಿತಿಯತ್ತ ಸಾಗಿದೆ. ಇದನ್ನು ಮರೆಮಾಚಲು ಕೇಂದ್ರ ಸರಕಾರವು ಹೊಸ ಹೊಸ ಭರವಸೆಗಳನ್ನು ನಿಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ಆರೋಪಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಹಿರಿಯ ನಾಯಕರಾದ ಯಶವಂತ ಸಿನ್ಹಾ, ಸುಬ್ರಹ್ಮಣ್ಯ ಸ್ವಾಮಿಯಂತಹವರೇ ಆರ್ಥಿಕ ಸ್ಥಿತಿಯ ಬಗ್ಗೆ ಟೀಕಿಸಿದ್ದಾರೆ. ಜನರಲ್ಲೂ ಕೂಡ ಈ ಬಗ್ಗೆ ಆತಂಕ ಮನೆ ಮಾಡಿದೆ. ಆದರೆ, ಮೋದಿ ಸಹಿತ ಇತರ ಸಚಿವರು ಏನೂ ಆಗಿಲ್ಲ ಎಂಬಂತಿದ್ದಾರೆ. ಬಿಜೆಪಿಯ ಬಹುತೇಕ ಸಂಸದರಿಗೆ ವಸ್ತುಸ್ಥಿತಿ ಚೆನ್ನಾಗಿ ತಿಳಿದಿದ್ದರೂ ಧ್ವನಿ ಎತ್ತಲಾರದಂತಹ ವಾತಾವರಣ ಆ ಪಕ್ಷದಲ್ಲಿದೆ ಎಂದರು.
ಹಿರಿಯ ಆರ್ಥಿಕ ತಜ್ಞ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ನೋಟು ಅಪವೌಲ್ಯದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಮಧ್ಯೆ ದೇಶದ ಆರ್ಥಿಕ ನೀತಿ ಕುರಿತು ಸಲಹಾ ಸಮಿತಿಯನ್ನೂ ಮೋದಿ ರಚಿಸಿದ್ದಾರೆ. ಆರ್ಥಿಕ ಸ್ಥಿತಿ ಚೆನ್ನಾಗಿದ್ದರೆ ಸಮಿತಿ ರಚಿಸುವ ಔಚಿತ್ಯವೇನು ಎಂದು ಪ್ರಶ್ನಿಸಿದ ಪಿ.ವಿ.ಮೋಹನ್ ಕೇಂದ್ರ ಸರಕಾರದ ಪಂಚೇಂದ್ರಿಯ ಸ್ತಬ್ಧಗೊಂಡಿದೆ. ಅದರ ಕಿವಿ ಕೇಳುತ್ತಿಲ್ಲ, ಕಣ್ಣು ಕಾಣಿಸುತ್ತಿಲ್ಲ. ಚಲನೆಯೇ ಇಲ್ಲದ ಈ ಸರಕಾರವು ನೋಟು ಅಪವೌಲ್ಯದ ಹೆಸರಿನಲ್ಲಿ ಬೆಟ್ಟ ಅಗೆದು ಇಲಿ ಬಿಡಿ, ಜಿರಳೆಯನ್ನೂ ಹಿಡಿಯದ ಸ್ಥಿತಿಗೆ ತಲುಪಿದೆ ಎಂದು ಟೀಕಿಸಿದರು.
ಪ್ರಧಾನಿ ಮೋದಿಯ ಬಗ್ಗೆ ಯುವ ಜನತೆ ಭಾರೀ ನಿರೀಕ್ಷೆಯಲ್ಲಿದ್ದರು. ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, ಅದನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಯುವ ಜನತೆ ಪ್ರಶ್ನಿಸುವ ಮುನ್ನ ಮುಂದಿನ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಹೊಸ ಘೋಷಣೆಗಳನ್ನು ನೀಡುತ್ತಿದ್ದಾರೆ. ಜಿಎಸ್ಟಿಯಂತೂ ಆರ್ಥಿಕ ನೀತಿಯ ದಿಕ್ಕು ತಪ್ಪಿಸಿದೆ. ಸಣ್ಣ ಸಣ್ಣ ಉದ್ಯಮ, ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ಕೃಷಿ-ಹೈನುಗಾರಿಕೆ ಸಂಪೂರ್ಣ ಕುಸಿದಿದೆ ಎಂದು ಪಿ.ವಿ.ಮೋಹನ್ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಬಲರಾಜ ರೈ, ಅಬ್ದುಲ್ ಸಲೀಂ, ಲುಕ್ಮಾನ್, ಶಿಪಲ್ರಾಜ್, ಶೈಲೇಶ್ ಕೊಟ್ಟಾರಿ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.