ಮಂಗಳೂರು ದಸರಾ ಮೆರವಣಿಗೆಗೆ ಚಾಲನೆ
ಹರಿದು ಬಂದ ಜನಸಾಗರ
ಮಂಗಳೂರು, ಸೆ. 30: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಂದ ಆಚರಿಸಲ್ಪಡುತ್ತಿರುವ ಮಂಗಳೂರು ದಸರಾ 2017ರ ಮೆರವಣಿಗೆ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳನ್ನು ಶನಿವಾರ ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೆರವಣಿಗೆಗೆ ದೇವಸ್ಥಾನದ ಸಭಾಂಗಣದಿಂದ ಹೊರತರುವ ಮೂಲಕ ಕುದ್ರೋಳಿ ಕ್ಷೇತ್ರದ ನವ ನಿರ್ಮಾಣದ ರೂವಾರಿ, ಮಾಜಿ ಕೇಂದ್ರ ವಿತ್ತ ಸಚಿವ ಜನಾರ್ದನ ಪೂಜಾರಿಯವರು ಚಾಲನೆ ನೀಡಿದರು.
ಕುದ್ರೋಳಿಯಿಂದ ಶನಿವಾರ ಸಂಜೆ ಮಹಾ ಗಣಪತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ, ನವದುರ್ಗೆಯರಾದ ಶೈಲಪುತ್ರಿ, ಆದಿಶಕ್ತಿ, ಸ್ಕಂದಮಾತ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಕೂಷ್ಮಾಂಡಿನಿ, ಚಂದ್ರಘಂಟ, ಬ್ರಹ್ಮಚಾರಿಣಿ ದೇವಿಯರ ವಿಗ್ರಹಗಳ ವರ್ಣರಂಜಿತ ಮೆರವಣಿಗೆ ಆರಂಭಗೊಂಡಿದೆ.
ಈ ಬಾರಿಯ ದಸರಾ ಮೆರವಣಿಗೆಗೆ ಮಳೆಯು ಬಿಡುವು ನೀಡಿದ್ದರಿಂದ ನಗರದ ವಿವಿಧ ಕಡೆಗಳಲ್ಲಿ ಕಿಕ್ಕಿರಿದ ಜನ ಸಂದಣಿ ಕಂಡು ಬಂತು. ನಗರದಲ್ಲಿ ಸುಮಾರು ಆರು ಕಿಲೋಮೀಟರ್ ದೂರದವರೆಗೆ ವಿದ್ಯುತ್ ದೀಪಗಳ ಅಲಂಕಾರ ಉತ್ಸವಕ್ಕೆ ಮೆರುಗು ನೀಡಿತ್ತು. ನಗರದ ಕಂಬ್ಳಾ ರಸ್ತೆಯ ಮೂಲಕ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್ಬಾಗ್, ಬಲ್ಲಾಳ್ ಬಾಗ್, ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಮುಂಭಾಗದಿಂದ ವಿಶ್ವವಿದ್ಯಾನಿಲಯ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಅಳಕೆ ಮಾರ್ಗವಾಗಿ ಮೆರವಣಿಗೆ ಮರಳಿ ಕುದ್ರೋಳಿಗೆ ತಲುಪಲಿದೆ. ನಗರದದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ದೂರ ಸಾಗಿ ಬಂದ ಮೆರವಣಿಗೆ ಮರಳಿ ಕುದ್ರೋಳಿಯಲ್ಲಿ ಸಮಾಪನಗೊಳ್ಳಲಿದೆ.
ಮೆರವಣಿಗೆಯಲ್ಲಿ ಪ್ರಮುಖವಾಗಿ ಪೌರಾಣಿಕ ಸನ್ನಿವೇಶಗಳ ಟ್ಯಾಬ್ಲೋಗಳು ಹಾಗೂ ವಿವಿಧ ರೀತಿಯ ಹುಲಿ ವೇಷದ ತಂಡಗಳು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾಂಸ್ಕೃತಿಕ ಕಲಾತಂಡಗಳು, ತ್ರಿಶೂರಿನ ಬಣ್ಣದ ಕೊಡೆಗಳು, ಡೊಳ್ಳು ಕೊಣಿತದ ತಂಡಗಳು, ಹುಲಿವೇಷಗಳು, ಗೊಂಬೆ ಕುಣಿತ, ಕೇರಳದ ಚೆಂಡೆವಾದನ ತಂಡ, ಭಜನಾ ತಂಡಗಳು, ಕ್ಷೇತ್ರದ ವತಿಯಿಂದ ಸಾಂಪ್ರದಾಯಿಕ ಚೆಂಡೆ ಹಾಗೂ ವಾದ್ಯಘೋಷಗಳೊಂದಿಗೆ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆಯ ಸಚಿವ ಯು.ಟಿ.ಖಾದರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹಾಗೂ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಎಚ್.ಎಸ್.ಸಾಯಿರಾಮ್, ರಾಘವೇಂದ್ರ ಕೂಳೂರು, ಬಿ.ಮಾಧವ ಸುವರ್ಣ, ಆರ್.ಪದ್ಮ ರಾಜ್, ಅಖಿಲ ಭಾರತ ಬಿಲ್ಲವರ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ, ಹರಿಕೃಷ್ಣ ಬಂಟ್ವಾಳ್ ಮೊದಲಾದವರು ಉಪಸ್ಥಿತರಿದ್ದರು.