ವಿಜೃಂಭಣೆಯಿಂದ ನಡೆದ ಮಂಡ್ಯ ದಸರಾ : ಗಮನ ಸೆಳೆದ ಸ್ತಬ್ಧಚಿತ್ರ ಮೆರವಣಿಗೆ

ಮಂಡ್ಯ, ಸೆ.30: ಮಂಡ್ಯ ಯೂತ್ ಗ್ರೂಪ್ ಸಂಘಟನೆಯು ಶನಿವಾರ ಆಯೋಜಿಸಿದ್ದ ನಾಲ್ಕನೆ ಮಂಡ್ಯ ದಸರಾ ವಿಜೃಂಭಣೆಯಿಂದ ನೆರವೇರಿತು. ರಾಷ್ಟ್ರಪಕ್ಷಿ ನವಿಲು, ವೃಕ್ಷ ಮಾತೆಯ ಅರಣ್ಯರೋಧನ, ರಣರಂಗದಲ್ಲಿ ಶತ್ರುಗಳ ಸೆದೆಬಡಿಯುತ್ತಿರುವ ಸೇನೆ, ಬಂಗಾರ ಮಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಕೆಆರ್ಎಸ್ ಅಣೆಕಟ್ಟು, ಮಹಿಳೆಯ ಪ್ರಗತಿಯನ್ನು ಬಿಂಬಿಸುವ ಮಾದರಿಗಳು, ಮಾಟ-ಮಂತ್ರ ಸೇರಿದಂತೆ ಮೌಢ್ಯ ವಿರೋಧಿ ನಿಲುವು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು.
ಕಾಳಿಕಾಂಬ ದೇವಾಲಯ ಸಮೀಪವಿರುವ ಗಜೇಂದ್ರ ಮೋಕ್ಷ ಕೊಳದ ಬಳಿಯ ಬನ್ನಿಮರಕ್ಕೆ ಸಂಸದ ಸಿ.ಎಸ್.ಪುಟ್ಟರಾಜು ಪೂಜೆ ಸಲ್ಲಿಸುವ ಮೂಲಕ `ಮಂಡ್ಯ ದಸರೆ ಮೆರವಣಿಗೆಗೆ ಚಾಲನೆ ನೀಡಿದರು. ಗ್ರೂಪ್ನ ಅಧ್ಯಕ್ಷ ಡಾ.ಅನಿಲ್ ಆನಂದ್, ಉಪಾಧ್ಯಕ್ಷ ಎಚ್.ಎಸ್.ಮಂಜು, ¸ ನಿವೃತ್ತ ಪ್ರಾಂಶುಪಾಲ ಎ.ಬಿ.ಶಂಕರ್ ಮತ್ತಿತರ ಗಣ್ಯರು ಹಾಜರಿದ್ದರು.
ನಂತರ, ಸಾಂಸ್ಕøತಿಕ ಕಲಾ ತಂಡಗಳ ಮೆರವಣಿಗೆ ಸಾಗಿತು. ರಾಷ್ಟ್ರಪಕ್ಷಿ ನವಿಲು ಸ್ತಬ್ಧ ಚಿತ್ರ ದಸರಾ ಮೆರವಣಿಗೆ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿತು. `ಮರ ಬೆಳೆಸಿ ಪರಿಸರ ರಕ್ಷಿಸಿ' ಎಂಬ ಸಂದೇಶವುಳ ವೃಕ್ಷಗಳ ರಕ್ಷಣೆಯ ಜಾಗೃತಿ ಚಿತ್ರ, ಮಹಿಳೆಯರು ಪ್ರಗತಿಯ ಚಿತ್ರಣಗಳನ್ನು ಒಳಗೊಂಡ ಸ್ತಬ್ಧಚಿತ್ರ, ಶತ್ರುಗಳನ್ನು ಸೆದೆಬಡಿಯುವ ಸರ್ಜಿಕಲ್ ಸ್ಟ್ರೈಕ್, ಸಮಗ್ರ ಕೃಷಿ ಅಭಿಯಾನ, ಮೌಢ್ಯ ವಿರೋಧಿ ಹಾಗು ಕೃಷ್ಣರಾಜಸಾಗರ ಅಣೆಕಟ್ಟು ಸ್ತಬ್ಧಚಿತ್ರಗಳು ಒಂದರ ಹಿಂದೆ ಒಂದರಂತೆ ಮೆರವಣಿಗೆಯಲ್ಲಿ ಸಾಗಿ ಬಂದವು.
ಹೆಗ್ಗಡಹಳ್ಳಿ ಹೊನ್ನೇಗೌಡರ ಪಟಕುಣಿತ, ಕೃಷ್ಣೇಗೌಡ ತಂಡದಿಂದ ಚಿಲಿಪಿಲಿ ಗೊಂಬೆ, ಕೆ.ಬೆಟ್ಟಹಳ್ಳಿ ನಾಗಣ್ಣ ತಂಡದ ವೀರ ಮಕ್ಕಳ ಕುಣಿತ, ಕೊತ್ತತ್ತಿ ಸಿದ್ದಯ್ಯ ತಂಡದ ಕೊಂಬು-ಕಹಳೆ, ಕಲ್ಲಾರೆಪುರ ಮಹೇಶ್ ತಂಡದ ಕಂಸಾಳೆ, ಲಕ್ಷ್ಮೀಸಾಗರ ಕೆಂಪಣ್ಣ ತಂಡದಿಂದ ನಾಸಿಕ್ ಡೊಳ್ಳು, ಮಂಡ್ಯದ ರಾಜೇಶ್ ತಂಡ ಲಗಾನ್ ಟೀಮ್, ಹೊಸಹಳ್ಳಿಯ ವಸಂತಕುಮಾರ್ ತಂಡದಿಂದ ನಂದಿಧ್ವಜ, ಕಾರಸವಾಡಿ ದೇವರಾಜು ತಂಡದಿಂದ ಪೂಜಾ ಕುಣಿತ ಮೆರವಣಿಗೆಗೆ ಮೆರಗು ನೀಡಿದವರು.
ಅನಿಲ್ಕುಮಾರ್ ತಂಡದ ಸೋಮನ ಕುಣಿತ, ಮೇಲುಕೋಟೆಯ ರಾಮು ತಂಡದ ಡೊಳ್ಳು ಕುಣಿತ, ಹರಿಧರ್ ತಂಡದಿಂದ ನಾದಸ್ವರ, ದೊಣ್ಣೆವರಸೆ, ಉಮ್ಮಡಹಳ್ಳಿ ಬೋರಯ್ಯ ತಂಡದ ಜೋಡಿ ನಗಾರಿ, ಅನಂತು ಅವರ ರೋಲರ್ ಡ್ರಮ್ ಸೆಲ್, ಮಂಜು ಜಡೆ ಕೋಲಾಟ, ಕೋಲಾಟ, ಸೇರಿದಂತೆ ಇನ್ನಿತರ ಸಾಂಸ್ಕøತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಗಮನಸೆಳೆದವು.
ಸಿದ್ಧಿ ಜನಾಂಗದವರ ವೇಷಭೂಷಣ, ಅವರ ಕುಣಿತ ಹಾಗು ಪುಟ್ಟ ಗಾತ್ರದ ಬಂಡೂರು ಕುರಿ ತಳಿಗಳು, ಮರದ ಎಲೆಗಳನ್ನು ಮೈಗೆ ಸುತ್ತಿಕೊಂಡು ನೃತ್ಯ ಮಾಡುತ್ತಾ ಸಾಗಿದ ಸಿದ್ಧಿ ಮಹಿಳೆಯರು ಮೆರವಣಿಗೆಗೆ ವಿಶೇಷ ಮೆರಗು ನೀಡಿತ್ತು.
ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಸಿ.ಎಸ್.ಪುಟ್ಟರಾಜು, ತಡವಾಗಿಯಾದರೂ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ರೈತರ ಸಂಕಷ್ಟ ದೂರಾಗುವಂತೆ ಮಾಡಿದೆ. ಕೆರೆಕಟ್ಟೆಗಳು ಭರ್ತಿಯಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾಲ್ಕು ವರ್ಷದಿಂದ ಮಂಡ್ಯ ಯೂತ್ ಗ್ರೂಪ್ ಯಾರ ನೆರವನ್ನೂ ಬಯಸದೆ ಉತ್ತಮವಾಗಿ ಮಂಡ್ಯ ದಸರೆಯನ್ನು ಆಚರಿಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ದಸರೆ ಇನ್ನಷ್ಟು ವೈಭವದಿಂದ ನಡೆಯಲು ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.







