ಪರಿವಾರ ದೈವಗಳ ಗುಡಿಗಳಿಗೆ ಶಿಲಾನ್ಯಾಸ
ಕಲ್ಯಾಣಪುರ, ಸೆ.30: ಪುನರ್ ನಿರ್ಮಾಣಗೊಳ್ಳುತ್ತಿರುವ ಕಲ್ಯಾಣಪುರದ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಶ್ರೀವೀರಭದ್ರ ದೇವರ ಪರಿವಾರ ದೈವಗಳ ಗುಡಿಗಳಿಗೆ ಶಿಲಾನ್ಯಾಸವು ಕ್ಷೇತ್ರದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಅ.4ರ ಬುವಾರ ಬೆಳಿಗ್ಗೆ 9:30ಕ್ಕೆ ನಡೆಯಲಿದೆ.
ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳರು ಮಹಾಕಾಳಿ ಗುಡಿಗೆ ಶಿಲಾನ್ಯಾಸವನ್ನು ನೆರವೇರಿಸಿದರೆ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪಂಚ ಧೂಮಾವತಿ ಗುಡಿಗೆ ಶಿಲಾನ್ಯಾಸ ಹಾಗೂ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ನಂದಿಕೇಶ್ವರ ಗುಡಿಗೆ ಶಿಲಾನ್ಯಾಸ ನೆರವೇರಿಸುವರು.
ಶಿಲಾನ್ಯಾಸದ ನಂತರ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ವಹಿಸಲಿರುವರು. ಗಣ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿ ಸಾಧು ಟಿ. ಶೆಟ್ಟಿ, ಉಡುಪಿ ಜಿಲ್ಲಾ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಜೆ. ಮೆಂಡನ್, ಹರ್ಷ್ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಮುಂಬಯಿಯ ಕೃಷ್ಣಾನಂದ ಎಂ. ಶೆಟ್ಟಿಗಾರ್ ಹಾಗೂ ಮಲ್ಪೆಯ ಉದ್ಯಮಿ ಬಿ. ಸುಂದರ್ ಪಾಲ್ಗೊಳ್ಳುವರು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.