‘ಅಂಬರ್ ಕ್ಯಾಟರರ್ಸ್’ತುಳು ಚಿತ್ರದ ಆಡಿಯೊ ಬಿಡುಗಡೆ

ಕೊಣಾಜೆ, ಸೆ. 30: ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ‘ಅಂಬರ್ ಕೇಟರರ್ಸ್’ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂತಸ ತಂದಿದೆ. ಚಿತ್ರ ಸಮಸ್ತ ಜನತೆಗೆ ಮನೋರಂಜನೆಯ ಜೊತೆಗೆ ನೀತಿಬಾಳ್ವೆಯನ್ನು ಉಣ ಬಡಿಸಲಿ. ರಾಜಕೀಯ ನಟರಿಗಿಂತ ಚಿತ್ರನಟರು ಒಳ್ಳೆಯವರು ಅವರಿಗೆ ಕಲಾಭಿಮಾನಿಗಳು ಪ್ರೋತ್ಸ್ಸಹ ನೀಡಬೇಕಾಗಿದೆ. ಎಲ್ಲರೂ ನೋಡುವಂತಹ ಚಿತ್ರವಾಗಿ ಹೊರಹೊಮ್ಮಲಿ ಮತ್ತು ಚಿತ್ರದ ನಾಯಕನಟ ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ನಾಯಕನಟನಾಗಿ ಭವಿಷ್ಯ ರೂಪಿಸುವಂತಾಗಲಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯ ಪಟ್ಟರು.
ಅವರು ಅಸೈಗೋಳಿಯ ಅಭಯಾಶ್ರಯದಲ್ಲಿ ಮುಂಬೈ ಮಹಾನಗರದ ಭಂಡಾರಿ ಸಮಾಜದ ಮುತ್ಸದ್ಧಿ ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕಂಬೈನ್ಸ್ ಇವರ ಮೊದಲ ತುಳು ಚಲನಚಿತ್ರ ಅಂಬರ್ ಕ್ಯಾಟರರ್ಸ್ ಇದರ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಕಳದ ಮಾಜಿ ಶಾಸಕ ಹೆಚ್.ಗೊಪಾಲ ಭಂಡಾರಿ ಮಾತನಾಡಿ, ಹೆಚ್ಚಿನ ಸಿನಿಮಾದ ಆಡಿಯೊ ಬಿಡುಗಡೆದಂತಹ ಕಾರ್ಯಕ್ರಮವು ಪಂಚತಾರಾ ಹೊಟೇಲುಗಳಲ್ಲಿ ನಡೆಯುತ್ತದೆ. ಆದರೆ ಇದಕ್ಕೆ ವಿಭಿನ್ನವಾಗಿ ಅಂಬರ್ಸ್ ಕ್ಯಾಟರರ್ಸ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ವೃದ್ಧಾಶ್ರಮದಲ್ಲಿ ನಡೆಸಿರುವುದು ಮಾದರಿಯಾಗಿದೆ. ಕಲ್ಮಶವಿಲ್ಲದಂತೆ ಆಶ್ರಮದಲ್ಲಿ ಇರುವ ಹಿರಿಯ ಚೇತನರ ಮಧ್ಯೆ ಕಾರ್ಯಕ್ರಮ ಆಯೋಜಿಸಿದ್ದು ಅರ್ಥಪೂರ್ಣ. ಚಿತ್ರ ತಂಡ ಪ್ರತಿಭಾವಂತರಾಗಿದ್ದು, ಭವಿಷ್ಯದಲ್ಲಿ ಗೆಲುವು ಖಚಿತ. ತುಳು ಚಲನಚಿತ್ರಗಳ ರಚನೆಯ ಮೂಲಕ ವಿಶ್ವದಾದ್ಯಂತ ಇರುವ ತುಳು ಅಭಿಮಾನಿಗಳ ಗಮನ ಸೆಳೆಯಲಿ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಚಿತ್ರದ ನಿರ್ಮಾಪಕರು ಸಾಮಾಜಿಕ ಕಳಕಳಿಯ ವ್ಯಕ್ತಿತ್ವ ಹೊಂದಿದವರು. ಇಂತಹ ಮನೋಭಾವದವರು ಕೈ ಹಾಕುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ಚಿತ್ರವೂ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ಹಾರೈಸಿದರು.
ತುಳು ಚಲನಚಿತ್ರ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ ಮಾತನಾಡಿ ನಿರ್ಮಾಪಕರಿಗೆ ಸಿನೆಮಾ ಎಂದರೆ ಗ್ಯಾಂಬ್ಲಿಂಗ್ ಇದ್ದಂತೆ, ಹಾಕಿರುವ ಹಣ ಬರಲೂ ಬಹುದು, ಹೋಗಲುಬಹುದು. ಆದರೂ ಆತ್ಮವಿಶ್ವಾಸದ ಜತೆಗೆ ಚಿತ್ರ ನಿರ್ಮಿಸುವ ಮೂಲಕ ತುಳುಚಿತ್ರವನ್ನು ಬೆಳೆಸಲು ಮುಂದಾಗಿರುವ ತಂಡಕ್ಕೆ ಶುಭಾರೈಸಿದರು.
ಈ ಚಿತ್ರದಲ್ಲಿ ವಿಜಯಕುಮಾರ್ ಕೊಡಿಯಾಲ್ಬೈಲ್ ಸಾಹಿತ್ಯದ ರಾಮಧೂತ ಹನುಮಂತ ಮ ಹಾಡನ್ನು ಶಂಕರ್ ಮಹಾದೇವ್ ಹಾಡಿದ್ದು, ಈ ಹಾಡಿಗೆ ಸುಮಾರು 17 ಲಕ್ಷ ರೂ. ಖರ್ಚು ಮಾಡಲಾಗಿದೆ. ಶ್ರೀರಾಮ ಮತ್ತು ಹನುಮ ಭಕ್ತರು ಕೇಳಲೇ ಬೇಕಾದ ಹಾಡು. ತುಳು ಚಿತ್ರ ಅಂಬರ್ ಕ್ಯಾಟರರ್ಸ್ ವಿಜಯಕುಮಾರ್ ಕೊಡಿಯಾಲ್ಬೈಲ್ ಬರೆದ ಸಾಹಿತ್ಯಕ್ಕೆ ಭಾರತ ಪ್ರಖ್ಯಾತ ಗಾಯಕ ಶಂಕರ್ಮಹಾದೇವನ್ ಹಾಡಿದ್ದಾರೆ. ಕದ್ರಿ ಮಣಿಕಾಂತ್ ಸ್ವರಸಂಯೋಜನೆ ಮಾಡಿದ್ದಾರೆ ಎಂದರು.
ತುಳು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ, ಚಿತ್ರನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ ಡಾ ಶಿವರಾಮ ಕೆ. ಭಂಡಾರಿ, ಅಭಯಾಶ್ರಮದ ನಿರ್ದೇಶಕ ಶ್ರೀನಾಥ್ ಹೆಗ್ಡೆ, ನಾಡಿನ ಪ್ರಸಿದ್ಧ ಜಾನಪದ ವಿದ್ವಾಂಸ, ವಾಗ್ಮಿ ದಯಾನಂದ ಕತ್ತಲಸಾರ್, ಉದ್ಯಮಿ ಮಹಾವೀರ ಜೈನ್ , ಸೋಮಶೇಖರ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಗೌರವ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ, ತುಳು ಚಲನಚಿತ್ರ ನಿರ್ಮಾಪಕ ಸಚಿನ್ ಉಪ್ಪಿನಂಗಡಿ, ಕರ್ನೂರು ಮೋಹನರೈ, ಹರೀಶ್ ಕಟಪಾಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಸಿನೇಮಾಕ್ಕೆ ಯಶ ಕೋರಿದರು.
ಚಿತ್ರದ ನಿರ್ದೇಶಕ ಜಯಪ್ರಸಾದ್ ಬಜಾಲ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರದ ಅಭಿನೇತ್ರರಾದ ಆಶಿಕ್ ಶೆಟ್ಟಿ, ಶ್ರೇಯಸ್ ಎಸ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಕಡಂದಲೆ ಸುರೇಶ್ ಭಂಡಾರಿ ಸ್ವಾಗತಿಸಿ ನಟ ಮಂಜು ರೈ ಮುಳೂರು ಮತ್ತು ವಿನೀತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸೌರಭ್ ಭಂಡಾರಿ ವಂದಿಸಿದರು.







