ಉಡುಪಿಯಲ್ಲಿ ಪ್ರಾಚೀನ ಬೌದ್ಧ ಸಂಪ್ರದಾಯದಂತೆ ವಿವಾಹ
ಉಡುಪಿ, ಅ.1: ಉಡುಪಿ ಜಿಲ್ಲಾ ಬೌದ್ಧ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಸಮಾಜ ಪರಿವರ್ತನಾ ಚಳವಳಿಯ ಮುಖಂಡ ಮಂಜುನಾಥ್ ವಿ. ಮತ್ತು ಅಂಬಿಕಾ ಎಸ್. ಅವರು ಪ್ರಾಚೀನ ಬೌದ್ಧ ಸಂಪ್ರದಾಯದಂತೆ ವಿವಾಹ ಆಗುವ ಮೂಲಕ ದಾಪಂತ್ಯ ಜೀವನಕ್ಕೆ ಇಂದು ಕಾಲಿರಿಸಿದರು.
ಉಡುಪಿ ಕಿದಿಯೂರು ಹೊಟೇಲಿನ ಶೇಷಶಯನ ಹಾಲ್ನಲ್ಲಿ ಇಂದು ನಡೆದ ವಿಶಿಷ್ಟ ವಿವಾಹ ಮಹೋತ್ಸವದಲ್ಲಿ ಉಡುಪಿ ಕೆಳಾರ್ಕಳಬೆಟ್ಟು ವಿಷ್ಣು ಮೂರ್ತಿ ನಗರದ ವಾಸು ಮೇಸ್ತ್ರಿ ಹಾಗೂ ಸುಶೀಲಾ ದಂಪತಿಯ ಪುತ್ರ ಮಂಜುನಾಥ್ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುರೇಶ್ ಹಾಗೂ ಪಾರ್ವತಿ ದಂಪತಿಯ ಪುತ್ರಿ ಅಂಬಿಕಾ ಸತಿಪತಿಗಳಾದರು. ಈ ವಿವಾಹಕ್ಕೆ ನೂರಾರು ಮಂದಿ ಸಾಕ್ಷಿಗಳಾಗಿ ವಧುವರರನ್ನು ಅರಸಿದರು.
ಹಲವು ವರ್ಷಗಳಿಂದ ದಲಿತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಮಂಜುನಾಥ್ ಉಡುಪಿಯಲ್ಲಿ ನ್ಯಾಯವಾದಿಯಾಗಿದ್ದಾರೆ. ಇವರು 2014 ರಲ್ಲಿ ಬೌದ್ಧ ದೀಕ್ಷೆಯನ್ನು ಸ್ವೀಕರಿಸಿದ್ದರು. ಆದರೆ ಮದುಮಗಳು ಹಾಗೂ ಅವರ ಮನೆಯವರು ಇಂದು ಬೌದ್ಧ ದೀಕ್ಷೆ ಪಡೆದರು. ಬಳಿಕ ಬೌದ್ಧ ಧರ್ಮದ ಪದ್ಧತಿಯಂತೆ ವಿವಾಹ ನೆರವೇರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾದ ಬ್ರಹ್ಮಚಾರಿ ಎಸ್.ಆರ್.ಲಕ್ಷ್ಮಣ್ ಪೌರೋಹಿತ್ಯದಲ್ಲಿ ಧಮ್ಮಚಕ್ರ ಹೊಂದಿರುವ ತಾಳಿಯನ್ನು ಕಟ್ಟಿ, ಹಾರ ಬದಲಾ ಯಿಸಿಕೊಂಡು ವಿವಾಹ ನೆರವೇರಿಸಿದರು. ಈ ಸಮಾರಂಭದಲ್ಲಿ ಮೈಸೂರಿನ ಅಷ್ಠಾಂಗ ಮಾರ್ಗ ಜ್ಞಾನಪೀಠದ ಬೋಧಿದತ್ತಿ ಭಂತೇಜಿ ಬುದ್ಧನ ಸಂದೇಶ ನೀಡಿ ಆಶೀರ್ವಚಿಸಿದರು. ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ಶಂಭು ಸುವರ್ಣ, ಪದಾಧಿಕಾರಿಗಳಾದ ವಿಶ್ವನಾಥ ಪೇತ್ರಿ, ಪ್ರಶಾಂತ್ ತೊಟ್ಟಂ, ದಲಿತ ಮುಖಂಡರು ಹಾಜರಿದ್ದರು.