ಬಂಟರ ಸಂಘ ಬಂಟವಾಳ, ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್: ವಿದ್ಯಾರ್ಥಿವೇತನ ವಿತರಣೆ

ಬಂಟ್ವಾಳ, ಅ. 1: ಬಂಟರ ಸಂಘ ಬಂಟವಾಳ ಮತ್ತು ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ ಆಶ್ರಯದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಯಡಿ ಎಲ್ಲಾ ಧರ್ಮ ಹಾಗೂ ಸಮಾಜದ ಆಯ್ದ ಒಟ್ಟು 1,200 ವಿದ್ಯಾರ್ಥಿಗಳಿಗೆ ಸುಮಾರು 30 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನವನ್ನು ಬ್ರಹ್ಮರಕೂಟ್ಲುನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮವನ್ನು ನಿಟ್ಟೆ ವಿವಿ ಕುಲಪತಿ ಎನ್. ವಿನಯ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯನ್ನು ಕಲಿಯುವುದಷ್ಟೇ ಅಲ್ಲ, ಮಾನವೀಯತೆಯನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಮಾರ್ಗದರ್ಶಕರಾಗಿ ಮುನ್ನಡೆಯಬೇಕು ಎಂದರು.
ಮಾದಕ ವ್ಯಸನಕ್ಕೆ ಬಲಿಯಾಗದಂತೆ ಪ್ರಬುದ್ಧ ನಾಗರಿಕರಾಗಿ ಬೆಳೆಯಬೇಕು. ಭವಿಷ್ಯದ ತಾಯಂದಿರಾಗಿರುವ ಇಂದಿನ ವಿದ್ಯಾರ್ಥಿನಿಯರು, ಇತರರಲ್ಲೂ ಒಳ್ಳೆಯತನವನ್ನು ಕಾಣುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಮಾತನಾಡಿ, ಮುಂದಿನ ಹಂತದಲ್ಲಿ ಬಂಟರ ಸಂಘವು 100 ಮಕ್ಕಳ ಸಂಪೂರ್ಣ ಶೈಕ್ಷಣಿಕ ಹೊಣೆಯನ್ನು ಸ್ವೀಕರಿಸುವ ಉದ್ದೇಶ ಹೊಂದಿದೆ. ಸಮಾಜದಲ್ಲಿ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕೆ ನೀಡುವ ಸಹಾಯವೇ ಅತ್ಯಂತ ಶ್ರೇಷ್ಟವಾದ ಸಹಕಾರ ಎಂದರು.
ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ಅರ್ಹ ವಿದ್ಯಾರ್ಥಿಗಳಿಗೆ ಇನ್ನಷ್ಟು ಶಿಕ್ಷಣ ಪಡೆಯಲು ಸಹಕಾರಿಯಾಗಲಿಯೆಂದು ಪ್ರೋತ್ಸಾಹಿಸುವುದು ವಿದ್ಯಾರ್ಥಿವೇತನ ನೀಡುವ ಹಿಂದಿರುವ ಉದ್ದೇಶ. ಎಲ್ಲಾ ಧರ್ಮಿಯ ವಿದ್ಯಾರ್ಥಿಗಳನ್ನು ಸೇರಿಸಿ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಿಜವಾದ ಜಾತ್ಯಾತೀತತೆ. ಬಂಟವಾಳದ ಬಂಟರ ಸಂಘದ ಕಟ್ಟಡವನ್ನು ಕನಿಷ್ಟ ಅವಧಿಯಲ್ಲಿ ನಿರ್ಮಾಣ ಮಾಡಿರುವುದು ವಿವೇಕ್ ಶೆಟ್ಟಿ ಮತ್ತು ಬಳಗದ ಸಾಧನೆಯಾಗಿದೆ. ಇತರೆಲ್ಲಾ ಬಂಟ ಸಂಘಗಳಿಗೆ ಇದೊಂದೇ ಮಾದರಿ ಆಗುವುದು ಎಂದರು.
ಮುಂಬೈ ಆಲ್ಕಾರ್ಗೊ ನಿರ್ದೇಶಕ, ನಿವೃತ್ತ ಪೊಲೀಸ್ ಅಧಿಕಾರಿ ಕೆ. ಎಲ್.ಪ್ರಸಾದ್ ಮಾತನಾಡಿ, ಸ್ತೀ ಶಿಕ್ಷಣ ಕಡ್ಡಾಯವಾಗಬೇಕು. ಮಹಿಳೆಯೊಬ್ಬಳು ಶಿಕ್ಷಣ ಪಡೆದಾಗ ಕುಟುಂಬ ಶೈಕ್ಷಣಿಕ ಅರ್ಹತೆ ಪಡೆಯುತ್ತದೆ. ಹೆತ್ತವರನ್ನು ದೇವರೆಂದು ಹೇಳುವ ನಮ್ಮ ಧರ್ಮದ ತಿರುಳು ಸರ್ವಶ್ರೇಷ್ಟವಾಗಿದೆ. ವೃದ್ಧರನ್ನು ಪ್ರೀತಿಸಿ ಗೌರವಿಸಿ, ಅವರ ಅನುಭವ ದೊಡ್ಡದು. ವಿದ್ಯಾರ್ಥಿಗಳು ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗದೆ ಸುಂದರ ಸಮಾಜ ಕಟ್ಟಿಕೊಳ್ಳಿ ಎಂದು ಹಾರೈಸಿದರು.
ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಜೊತೆ ಕಾರ್ಯದರ್ಶಿ ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ವಿದ್ಯಾರ್ಥಿವೇತನ ಪಡೆದವರ ಹೆಸರನ್ನು ವಾಚಿಸಿದರು. ವೇದಿಕೆಯಲ್ಲಿ ಸಾಂಕೇತಿಕವಾಗಿ ಇಪ್ಪತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸಮಾರಂಭದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಆಶಾಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.







