ಅವಿಭಕ್ತ ಕುಟುಂಬಗಳಿಂದ ಸಮಸ್ಯೆ ಕಡಿಮೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಅ.1: ಅವಿಭಕ್ತ ಕುಟುಂಬವಿಂದು ಅಪರೂಪವಾಗುತ್ತಿದೆ. ಒಟ್ಟು ಕುಟುಂಬ ಇರುವವರೆಗೆ ದೇಶದಲ್ಲಿ ಸಮಸ್ಯೆ ಇರುವುದಿಲ್ಲ. ಮಕ್ಕಳು ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಅವರ ಜವಾಬ್ದಾರಿ ಎಂಬುದನ್ನು ಅರಿಯಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರು ತಮ್ಮ ತಂದೆ-ತಾಯಿಯನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸೇರಿಸುವ ಮೊದಲು ತಮಗೂ ವಯಸ್ಸಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
ರಾಜ್ಯ ಸರಕಾರ ಹಿರಿಯರ ಸರಕಾರ. ಅನೇಕ ಕಾರ್ಯಕ್ರಮಗಳನ್ನು ಹಿರಿಯ ನಾಗರಿಕರಿಗೋಸ್ಕರ ಜಾರಿಗೆ ತಂದಿದೆ. ಸರಕಾರ, ಸಂಘ-ಸಂಸ್ಥೆಗಳು ಎಷ್ಟೇ ಸಹಾಯ ಮಾಡಿದರೂ, ಮಕ್ಕಳು ತಂದೆ-ತಾಯಿಗಳನ್ನು ಆಶ್ರಮಕ್ಕೆ ಸೇರಿಸದೆ ತಾವೇ ನೋಡಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ನಾಗರಿಕರನ್ನು ಗೌರಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಸರಕಾರ ಹಿರಿಯ ನಾಗರಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಹಿರಿಯ ನಾಗರಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು 1ಲಕ್ಷ ರೂ.ಗೆ ಏರಿಸಿದೆ. ಹಿರಿಯ ನಾಗರಿಕರಿಗಾಗಿ ಪ್ರತೀ ಜಿಲ್ಲೆಯಲ್ಲೂ ಹಿರಿಯರ ಯೋಗಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಎನ್ಜಿಒಗಳಿಗೆ ನೀಡುತ್ತಿದ್ದ ಅನುದಾನವನ್ನು 8ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ವೃದ್ಧಾಶ್ರಮಗಳಲ್ಲಿ ವಾಸಿಸುವ ಹಿರಿಯ ನಾಗರಿಕರ ಏಕತಾನತೆಯನ್ನು ನೀಗಲು ಹಿರಿಯ ಕಲಾದರಿಂದಲೇ ಸಾಂಸ್ಕೃತಿಕ ಕಾಯರ್ಕ್ರಮಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹಿರಿಯ ನಾಗರಿಕರಿಗಾಗಿಯೇ ದೂ.ಸಂಖ್ಯೆ-1090ಯ ಸಹಾಯವಾಣಿಯನ್ನು ತೆರೆಯಲಾಗಿದೆ. ನ.1ರಿಂದ ಆರೋಗ್ಯಭಾಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದ ಅವರು, ನಿಮ್ಹಾನ್ಸ್ ಸಂಸ್ಥೆ ಹಿರಿಯ ನಾಗರಿಕರ ಸಮಸ್ಯೆಗಳ ಬಗ್ಗೆ ಅಧ್ಯಯನವೂ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸೇವೆಗಾಗಿ ಕೇಂದ್ರ ಸರಕಾರದ ರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದರು.
ಈ ವೇಳೆ ರಾಷ್ಟ್ರೀಯ ಮಾನಸಿಕ ಆರೋಗ್ಯ-ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಕಾನೂನು ಕ್ಷೇತ್ರದಿಂದ ವಿಶ್ರಾಂತ ನ್ಯಾ.ಅರಳಿ ನಾಗರಾಜ, ಶಿಕ್ಷಣ ಕ್ಷೇತ್ರದ ಡಾ.ಬಿ.ಜಿ. ಸುಧಾ, ಕ್ರೀಡೆ ಎಚ್.ರಾಮೇಗೌಡ, ಸಾಹಿತ್ಯ ಕೆ.ಎ.ನಾಗೇಶ್, ಕಲಾಕ್ಷೇತ್ರದಿಂದ ಲಕ್ಷ್ಮಿಬಾಯಿ ಕಿಷನ್ ರಾವ್, ಸಮಾಜ ಸೇವೆಗಾಗಿ ದಾನಯ್ಯ ದುಂಡಯ್ಯ ಮಠದ ಇವರಿಗೆ ಹಿರಿಯ ನಾಗರಿಕ ಪ್ರಶಸ್ತಿ ನೀಡಿ ಗೌರಸಲಾಯಿತು. ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಅವರನ್ನು ಗೌರಸಲಾಯಿತು.
ಸಮಾರಂಭದಲ್ಲಿ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.







