ಎಲ್ಲದರಲ್ಲಿಯೂ ಕಲೆಯ ಬೇರುಗಳು ಅಡಗಿವೆ: ಶಶಿಕಾಂತ್ ಶೆಟ್ಟಿ
ಮಣಿಪಾಲ, ಅ.1: ವಿಜ್ಞಾನ, ಸಂಸ್ಕೃತಿ, ಸಾಹಿತ್ಯ, ಪೌರಾಣಿಕ, ನಮ್ಮ ಕನಸು ಗಳು ಸೇರಿದಂತೆ ಎಲ್ಲದರಲ್ಲೂ ಕಲೆಯ ಬೇರುಗಳು ಅಡಗಿವೆ. ನಿರಾಕರ ದೇವರಿಗೆ ಕಲಾವಿದ ತನ್ನ ಕಲ್ಪನೆಯ ಆಕಾರವನ್ನು ನೀಡಿದ್ದಾನೆ ಎಂದು ಕೋಟ ಆಶ್ರಿತ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಕಾಂತ್ ಎಸ್.ಶೆಟ್ಟಿ ಹೇಳಿದ್ದಾರೆ.
ಮಣಿಪಾಲದ ಹರೀಶ್ ಸಾಗ ಅವರ ತ್ರಿವರ್ಣ ಕಲಾ ಕೇಂದ್ರದಲ್ಲಿ ರವಿವಾರ ಕಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಮಾಗಮ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರೌಢ ಶಿಕ್ಷಣ ಪಡೆಯುವ ಮಕ್ಕಳು ತಮ್ಮ ಶೈಕ್ಷಣಿಕೇತರ ಸಮಯವನ್ನು ಸಂಗೀತ ಸಾಹಿತ್ಯ ಚಿತ್ರಕಲೆ ಹಾಗೂ ಇತರ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರೆ ಭವಿಷ್ಯದಲ್ಲಿ ಅವರಲ್ಲಿ ಓರ್ವ ಸುಸಂಸ್ಕ್ರತ ನಾಗರಿಕನನ್ನು ಕಾಣ ಬಹುದು. ಈಮಕ್ಕಳು ಎಂದೂ ತಮ್ಮ ಜೀವಿತ ಕಾಲದಲ್ಲಿ ಹೆತ್ತವರನ್ನು ಕಡೆಗಣಿಸ ಲಾರರು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ದೊಡ್ಡಣಗುಡ್ಡೆಯ ಎ.ವಿ.ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರುಮನೆ ಮಾತನಾಡಿ, ಮಕ್ಕಳ ಮಾನಸಿಕ ವಿಕಸನಕ್ಕೆ ಕಲೆಯು ಸಹಕಾರಿಯಾಗಿದೆ. ಅವರ ಕ್ರಿಯಾಶೀಲತೆಗೆ ಹೆತ್ತವರು ಪ್ರೊತ್ಸಾಹ ನೀಡಬೇಕು ಮತ್ತು ಅವರ ತಪ್ಪುಗಳನ್ನು ವಿಮರ್ಶಿಸಿ ಅವರ ಆತ್ಮ ವಿಶ್ವಾಸದ ಮಟ್ಟವನ್ನು ಕುಂದಿಸದೆ ಅವರ ಸ್ವಂತಿಕೆಯನ್ನು ಕಾಪಾಡಲು ಸಹಕರಿಸ ಬೇಕು ಎಂದರು.
ಕುಂದಾಪುರ ಕೋಣಿಯ ಮಾತಾ ಮೊಂಟೆಸ್ಸರಿ ಶಾಲೆಯ ಶಿಕ್ಷಕಿ ಭಾರತಿ ಪ್ರಕಾಶ್ ಶೆಟ್ಟಿ, ಕರ್ನಾಟಕ ಬ್ಯಾಂಕ್ನ ಮಾರುಕಟ್ಟೆ ವಿಭಾಗದ ಪ್ರಾದೇಶಿಕ ಅಧಿಕಾರಿ ವಿಶ್ವಾಸ್ ಬಿ.ಗೊರವಂಕರ್ ಉಪಸ್ಥಿತರಿದ್ದರು. ತ್ರಿವರ್ಣ ಕಲಾ ಕೇಂದ್ರದ ಸಂಚಾಲಕ ಹರೀಶ್ ಸಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಷಾರ್ ಕೆ. ಸ್ವಾಗತಿಸಿದರು. ಹರಿತ ವಂದಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಕಲಾ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಸಾನ್ವಿ ಡಿ.ರಾವ್ ವರ್ಣ ಪ್ರಾತಕ್ಷಿತೆಯನ್ನು ಚಿತ್ರ ಬಿಡಿಸುವ ಮೂಲಕ ಪ್ರದರ್ಶಿಸಿದರು.