ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ ರೂ. ಮಂಜೂರು: ಶಾಸಕ ಲೋಬೊ
ಮಂಗಳೂರು, ಅ.2: ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲುದಾರಿಕೆಯಲ್ಲಿ ಮಂಗಳೂರಿನ ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ ರೂ.ಗಳ ಯೋಜನೆ ಮಂಜೂರಾಗಿದೆ ಎಂದು ಶಾಸಕ ಜೆ.ಆರ್. ಲೋಬೆ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಅನುದಾನದಲ್ಲಿ ಕೇಂದ್ರದಿಂದ 25 ಕೋಟಿ ರೂ. ಹಾಗೂ ಉಳಿಕೆ ಹಣ ರಾಜ್ಯ ಸರಕಾರದಿಂದ ದೊರಕಲಿದೆ. ಇದರಿಂದ ಹಳೆ ಬಂದರು ವಾಣಿಜ್ಯಾತ್ಮಕವಾಗಿ ಅಭಿವೃದ್ಧಿ ಹೊಂದುವ ಜತೆಗೆ ಪ್ರವಾಸೋದ್ಯಮವೂ ಬೆಳೆಯಲಿದೆ ಎಂದವರು ಹೇಳಿದರು.
ಹಿಂದೆ ಲಕ್ಷದ್ವೀಪದ ಜತೆ ಹಳೆ ಬಂದರಿನ ಮೂಲಕ ವ್ಯಾಪಾರದಿಂದ ನಗರ ವಾಣಿಜ್ಯ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿತ್ತು. ಆದರೆ ತದನಂತರ ಹೆಚ್ಚಿನ ಒತ್ತು ನೀಡದ ಕಾರಣ ಶೇ. 75ರಷ್ಟು ವ್ಯಾಪಾರ ವಹಿವಾಟು ಕೇರಳಕ್ಕೆ ಮುಖ ಮಾಡಿದೆ. ಇದೀಗ ಮತ್ತೆ ಲಕ್ಷದ್ವೀಪದ ಜತೆಗಿನ ನಂಟನ್ನು ಉತ್ತಮ ಪಡಿಸುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ಸುಮಾರು ಮೂರು ವರ್ಷಗಳ ಹಿಂದೆ ಲಕ್ಷದ್ವೀಪದ ಬಂದರು ಇಲಾಖೆಯ ಮುಖ್ಯಸ್ಥರೊಂದಿಗೆ ನಡೆದಿರುವ ಒಪ್ಪಂದಕ್ಕೆ ಪುನಶ್ಚೇತನ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಉನ್ನತ ಮಟ್ಟದ ನಿಯೋಗವೊಂದು ಶೀಘ್ರದಲ್ಲೇ ಲಕ್ಷದ್ವೀಪದ ಆಡಳಿತದ ಜತೆ ಮಾತುಕತೆ ನಡೆಸಲಿದೆ. ಆ ಮೂಲಕ 68 ಕೋಟಿ ರೂ. ವೆಚ್ಚದ ಯೋಜನೆಗೆ ಲಕ್ಷದ್ವೀಪ ಮುಂದಾಗಲಿದೆ. ಇದೇ ವೇಳೆ ಬಂದರಿನಲ್ಲಿ 4 ಮೀಟರ್ನಿಂದ 7 ಮೀಟರ್ ಆಳಕ್ಕೆ ಚಾನೆಲ್ ಅಭಿವೃದ್ಧಿ ಕಾರ್ಯ ನೆಯಲಿದೆ ಎಂದು ಅವರು ವಿವರಿಸಿದರು.
ಮೀನುಗಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದ ಜಂಟಿ ಪಾಲುದಾರಿಕೆಗೆಯ 29 ಕೋಟಿ ರೂ.ಗಳ ಯೋಜನೆ ಮಂಜೂ ರಾಗಿದೆ. ಬೆಂಗ್ರೆಯಲ್ಲಿ ಒಣ ಮೀನು ಸಂಸ್ಕರಣೆಗೆ ಸಂಬಂಧಿಸಿ ಮಹಿಳೆಯರಿಗೆ ಶೆಡ್ ನಿರ್ಮಾಣಕ್ಕೆ 47 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್ ಆಗಿದೆ. ನಾಡದೋಣಿ ತಂಗುದಾಣ ನಿರ್ಮಾಣಕ್ಕಾಗಿ 2.82 ಕೋಟಿ ರೂ.ಗಳ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸ ಲಾಗುತ್ತಿದ್ದು, ತಾತ್ವಿಕ ಒಪ್ಪಿಗೆ ದೊರಕಿದೆ. ಕಳೆದ ಬಜೆಟ್ನಲ್ಲಿ ಮೀನುಗಾರಿಕಾ ದೋಣಿಗಳ ತಂಗುದಾಣಕ್ಕೆ ಬರ್ತ್ ನಿರ್ಮಾಣ ಮಾಡಲು 2.5 ಕೋಟಿ ರೂ. ರಾಜ್ಯ ಸರಕಾರ ಘೆಷಿಸಿದೆ ಎಂದು ಅವರು ವಿವರಿಸಿದರು.
ಹಿಂದಿನಂತೆ ಕೇಂದ್ರದಿಂದ ಅನುದಾನ ನೀಡಲು ಒತ್ತಾಯ
ಮೀನುಗಾರಿಕೆಯ 3ನೆ ಹಂತದ ವಿಸ್ತರಣಾ ಯೋಜನೆಗೆ ಸಂಬಂಧಿಸಿ 2010ರಲ್ಲಿ 60:40 (ಕೇಂದ್ರ ಸರಕಾರದ ಶೇ. 60) ಅನುಪಾತದಲ್ಲಿ 57.60 ಕೋಟಿ ರೂ. ಯೋಜನೆ ಮಂಜೂರಾಗಿತ್ತು. ಆದರೆ, ಈ ಯೋಜನೆ ಹಸಿರು ಪೀಠದ ಮೆಟ್ಟಿಲೇರಿದ ಕಾರಣ ಕಾಮಗಾರಿ ವಿಳಂಬವಾಯಿತು. ಮಾತ್ರವಲ್ಲದೆ ಪ್ರಸ್ತುತ ಯೋಜನಾ ವೆಚ್ಚ 83.55 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈವರೆಗೆ 55.50 ಕೋಟಿ ರೂ. ಕಾಮಗಾರಿ ಮುಗಿದಿದ್ದು, 52.60 ಕೋಟಿ ರೂ. ಪಾವತಿಯಾಗಿದೆ. ಇದರಲ್ಲಿ ಕೇಂದ್ರವು 30.30 ಕೋಟಿ ರೂ. ಹಾಗೂ ರಾಜ್ಯ ಸರಕಾರ 22.20 ಕೋಟಿ ರೂ. ಒದಗಿಸಬೇಕಾಗಿತ್ತು. ಆದರೆ ಕೇಂದ್ರದಿಂದ ಕೇವಲ 13 ಕೋಟಿ ರೂ. ಮಾತ್ರ ಬಂದಿದೆ. ಉಳಿದಂತೆ 39.60 ಕೋಟಿ ರೂ.ಗಲನ್ನು ರಾಜ್ಯ ಸರಕಾರ ಪಾವತಿಸಿದ್ದು, ಇದರಿಂದ ರಾಜ್ಯ ಸರಕಾರದ ಮೇಲೆ ಹೆಚ್ಚುವರಿ ಹೊರೆ ಹೊರಿಸಿದಂತಾಗಿದೆ. ಇದೀಗ ಮತ್ತೆ ಕಾಮಗಾರಿ ಅವಧಿ ಮುಗಿದಿದ್ದು, ಮತ್ತೆ ಹಸಿರು ಪೀಠದಿಂದ ಅನುಮತಿ ದೊರಕಬೇಕಿದೆ. ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಸಿಗದೆ ಯೋಜನೆ ವಿಳಂಬವಾಗಿ, ಯೋಜನಾ ವೆಚ್ಚದಲ್ಲೂ ಹೆಚ್ಚಳವಾಗುತ್ತಿದೆ. ಆದ್ದರಿಂದ ಕೇಂದ್ರ ಸರಕಾರ ಹಿಂದಿನಂತೆಯೇ ಶೇ. 60:40 ಅನುಪಾತದಲ್ಲಿಯೇ ಅನುದಾನ ಮುಂದುವರಿಸಬೇಕು ಎಂದು ಶಾಸಕ ಜೆ.ಆರ್. ಲೋಬೋ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸ್ಲಂ, ಮೋಹನ್ ಬೆಂಗ್ರೆ, ಚೇತನ್, ಚೇತನ್ ಸುವರ್ಣ ಉಪಸ್ಥಿತರಿದ್ದರು.