ಉಡುಪಿ: ಕಾಂಗ್ರೆಸ್ ಭವನದಲ್ಲಿ ಗಾಂಧಿಜೀ, ಶಾಸ್ತ್ರಿಗಳ ಜಯಂತಿ
ಉಡುಪಿ, ಅ.2: ದೇಶದ ಕಟ್ಟಕಡೆಯ ಬಡವನಿಗೆ ಸ್ವಾವಲಂಬನೆ ಹಾಗೂ ಆರ್ಥಿಕ ದೃಡತೆ ನೀಡಬೇಕೆಂಬುವುದೇ ಗಾಂಧಿಜೀಯವರ ಕನಸಾಗಿತ್ತು. ಭಾರತಕ್ಕೆ ಸ್ವಾತಂತ್ರ ತಂದು ಕೊಡುವಲ್ಲಿ ಗಾಂಧೀಜಿ ಅವರ ಕೊಡುಗೆ ಅಪಾರ. ಇದರೊಂದಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವಲೂ ಗಾಂಧೀಜಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗಾಂಧೀಜಿ ಹಾಗೂ ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಎರಡು ಮಹಾ ಚೇತನಗಳಾದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಕರ್ಷಕ ವ್ಯಕ್ತಿತ್ವದೊಂದಿಗೆ ದೇಶದಲ್ಲಿ ಹಲವಾರು ಯೋಜನೆಗಳು ಕಾರ್ಯಗತಗೊಂಡಿವೆ. ದೇಶದ ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಯುಪಿಎ ಸರಕಾರ ಆಹಾರ ಭದ್ರತೆ ಕಾಯಿದೆ ಅನುಷ್ಟಾನಗೊಳಿಸಿತ್ತು. ಅದರಂತೆ ರಾಜ್ಯ ಸರಕಾರವೂ ಗಾಂಧೀಜಿ ಕಲ್ಪನೆಯ ಹಸಿವು ಮುಕ್ತ ಕರ್ನಾಟಕದತ್ತ ಸಾಗುತ್ತಿದೆ ಎಂದು ಪ್ರಮೋದ್ ನುಡಿದರು.
ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಸತ್ಯಾಗ್ರಹ ಹಾಗೂ ಅಹಿಂಸೆಯ ದಾರಿ ಅದೆಷ್ಟು ಶಕ್ತಿಪೂರ್ಣ ಎಂಬುದನ್ನು ಗಾಂಧೀಜಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಗಾಂಧೀಜಿ ಸಿದ್ದಾಂತಗಳು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ‘ಜೈ ಜವಾನ್ ಜೈ ಕಿಸಾನ್’ ಘೋಷ ವಾಕ್ಯಗಳು ಈಗಲೂ ಪ್ರಸ್ತುತ. ಸರಳ ಜೀವನ, ಸಾದಾ ಉಡುಪುಗಳಿಂದ ಗಾಂಧೀಜಿ ಹಾಗೂ ಶಾಸ್ತ್ರಿ ಮೇಲ್ಪಂಕ್ತಿಯಾದರೆ, ಈಗಿನ ಪ್ರಧಾನಿಗಳು ಲಕ್ಷಾಂತರ ರೂ. ವೌಲ್ಯದ ವಿದೇಶಿ ಉಡುಪುಗಳನ್ನು ಧರಿಸುತ್ತಿರುವುದು ಆಡಳಿತರೂಢ ವ್ಯಕ್ತಿಗಳು ಎತ್ತ ಸಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ಪ್ರಖ್ಯಾತ್ ಶೆಟ್ಟಿ, ಕೇಶವ ಎಂ. ಕೋಟ್ಯಾನ್, ಮುರಳಿ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಹರೀಶ್ ಕಿಣಿ, ಗಣೇಶ್ ಕೋಟ್ಯಾನ್, ಮೀನಾಕ್ಷಿ ಮಾಧವ ಬನ್ನಂಜೆ, ಜ್ಯೋತಿ ಹೆಬ್ಬಾರ್, ಭಾಸ್ಕರ್ ರಾವ್ ಕಿದಿಯೂರು, ಪೃಥ್ವಿರಾಜ್ ಶೆಟ್ಟಿ, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಚಂದ್ರಿಕಾ ಶೆಟ್ಟ, ಗಣೇಶ್ ನೆರ್ಗಿ, ಅನಂತ ನಾಯಕ್, ಕೀರ್ತಿ ಶೆಟ್ಟಿ, ಸುಜಯ ಪೂಜಾರಿ, ಗಣಪತಿ ಶೆಟ್ಟಿಗಾರ್, ಸುರೇಶ್ ಮೆಂಡನ್, ಯುವರಾಜ್, ಅಣ್ಣಯ್ಯ ಶೇರಿಗಾರ್, ಪೀರು ಸಾಹೇಬ್, ಸತೀಶ್ ಕೊಡವೂರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜನಾರ್ದನ್ ಭಂಡಾರ್ಕಾರ್ ಕಾರ್ಯಕ್ರಮ ನಿರೂಪಿಸಿದರು.