‘ರತ್ನಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಪ್ರಮೋದ್
ಕ್ರಿಶ್ಚಿಯನ್ ಸಹಿತ ಎಲ್ಲ ಸಮುದಾಯದ ರಕ್ಷಣೆಗೆ ಸರಕಾರ ಬದ್ಧ

ಉಡುಪಿ, ಅ.2: ಕಾನೂನು ಸುವ್ಯವಸ್ಥೆಯಲ್ಲಿ ಉಡುಪಿ ಜಿಲ್ಲೆ ಇಡೀ ರಾಜ್ಯ ದಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿರುವ ಎಲ್ಲ ಸಮುದಾಯದವರ ರಕ್ಷಣೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯ. ದೇವರ ಅನುಗ್ರಹ ಹಾಗೂ ಸರಕಾರದ ಶಕ್ತಿ ಕ್ರಿಶ್ಚಿಯನ್ ಸಮುದಾಯದ ಮೇಲೆ ಸದಾ ಇರುತ್ತದೆ ಎಂದು ರಾಜ್ಯ ಮೀನು ಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟ(ಇಫ್ಕಾ) ಉಡುಪಿ ಹಾಗೂ ಬಿಗ್ಜೆ ಮೀಡಿಯಾ ನೆಟ್ವರ್ಕ್ನ ಮಿಶನ್ ಕಂಪೌಂಡ್ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿ ಬಾಸೆಲ್ ಮಿಶನರಿ ಮೆಮೋರಿಯಲ್ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಕ್ರೈಸ್ತ ಸಮುದಾಯದ 10 ಮಂದಿ ಸಾಧಕರಿಗೆ ‘ರತ್ನಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಸಮಾಜ ಸೇವೆಯಲ್ಲಿ ತೊಡ ಗಿಸಿಕೊಂಡಿದ್ದು, ಶಿಕ್ಷಣ, ಆರೋಗ್ಯದ ಮೂಲಕ ಬಡವರ ಕಣ್ಣೋರೆಸುವ ಕೆಲಸ ವನ್ನು ಮಾಡುತ್ತಿದೆ ಎಂದ ಅವರು, ಇಂದು ಸನ್ಮಾನಗೊಳ್ಳುವ ಸಾಧಕರು ಇತರ ರಿಗೆ ಸ್ಪೂರ್ತಿಯಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಾಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ದೇಶದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇ.1.8ರಷ್ಟಿದ್ದರೂ ಶಿಕ್ಷಣ, ಆರೋಗ್ಯ, ಸಮಾಜ ಸೇವೆಯಲ್ಲಿ ನಮ್ಮ ಕೊಡುಗೆ ಶೇ.20ಕ್ಕೂ ಅಧಿಕ. ಇದು ಇಡೀ ದೇಶದಲ್ಲಿ ಪ್ರಶಂಸನೆಗೆ ಪಾತ್ರವಾಗಿದೆ. ಆದರೆ ನಾವು ಇದನ್ನು ಪ್ರಶಂಸನೆಗಾಗಿ ಮಾಡುತ್ತಿಲ್ಲ. ಇದು ದೇವರ ಸೇವೆ ಯಾಗಿದೆ ಎಂದು ತಿಳಿಸಿದರು.
ಸಾಧಕರಾದ ವಾಲೇಟ್ ಬಾರೆಟ್ಟೊ, ಜೋಸೆಫ್ ಜಿ.ಎಂ.ರೆಬೆಲ್ಲೊ, ಸಿಸ್ಟರ್ ರೋಸ್ ಆಗ್ನೆಸ್ ಎ.ಸಿ., ಡಾ.ಸುಶೀಲ್ ಜತ್ತನ್ನ, ರ್ಯಾನ್ಸಿ ಕರ್ಕಡ, ಫಾ.ಚೇತನ್ ಲೋಬೊ ಕಾಪುಚಿನ್, ಜೋನ್ ಆರ್.ಡಿಸಿಲ್ವ, ಸರಳ ಲಿಲ್ಲಿಯನ್ ಸೋನ್ಸ್, ಮಾಸ್ಟರ್ ಲಾರೆನ್ ಪಿಂಟೋ, ದೋನಾತ್ ಡಿ ಅಲ್ಮೇಡಾ ತೊಟ್ಟಂ ಅವರಿೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಯುಬಿಎಂ ಚರ್ಚ್ ಬೋರ್ಡ್ನ ಅಧ್ಯಕ್ಷ ಪ್ರಕಾಶ್ ಸೈಮನ್, ಕೊಳಲಗಿರಿ ಸಿರಿಯನ್ ಚರ್ಚ್ನ ಧರ್ಮಗುರು ವಂ.ಲಾರೆನ್ಸ್ ಡೇವಿಡ್ ಕ್ರಾಸ್ತ, ಇಫ್ತಾ ಸಂಚಾಲಕ ಡೆನ್ನಿಸ್ ಡಿಸಿಲ್ವ, ಸಿಎಸ್ಐಯ ಜಿಲ್ಲಾ ಏರಿಯ ಅಧ್ಯಕ್ಷ ಸ್ಟೀವನ್ ಸರ್ವೊತ್ತಮ ಉಪಸ್ಥಿತರಿದ್ದರು.
ಇಫ್ಕಾ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಪ್ರಶಸ್ತಿ ಸಮಿತಿಯ ಸಂಚಾಲಕ ಲೂವಿಸ್ ಲೋಬೊ, ಇಫ್ಕಾ ಕಾರ್ಯದರ್ಶಿ ಡಾ.ನೇರಿ ಕರ್ನೆಲಿಯೊ ಉಪಸ್ಥಿತರಿದ್ದರು. ಬಳಿಕ ಬಿಗ್ ಜೆ ಪ್ರಾಯೋಜಕತ್ವದಲ್ಲಿ ಕ್ರಿಶ್ಚಿಯನ್ ಗೋಸ್ಪೆಲ್ ಸಿಂಗಿಂಗ್ ಟಾಲೆಂಟ್ ಹಂಟ್ ಇದರ ಪ್ರಶಸ್ತಿ ಪ್ರದಾನ ಸಮಾರಂಭ ‘ಆವಾರ್ಡ್ ನೈಟ್’ ನಡೆಯಿತು.







