ಎರ್ಮಾಳಿನಲ್ಲಿ ಸ್ವಚ್ಛತಾ ಅಭಿಯಾನ
ಪಡುಬಿದ್ರೆ, ಅ.1: ಸ್ವಚ್ಛತೆಯನ್ನು ಪ್ರತಿಯೋರ್ವರು ತಮ್ಮ ಪರಿಸರದವನ್ನು ಸ್ವಚ್ಛಗೊಳಿಸುವ ಮೂಲಕ ಇಡೀ ಗ್ರಾಮವೇ ಸ್ವಚ್ಛವಾಗಿರುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ಈ ಮೂಲಕ ಮನೆಮನೆಗೆ ಸಂದೇಶ ರವಾನಿಸೋಣ ಎಂದು ಜಿಲ್ಲಾ ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ ಹೇಳಿದರು.
ಅವರು ಪಡುಬಿದ್ರೆ ರೋಟರಿ ಕ್ಲಬ್, ತೆಂಕ ಗ್ರಾಮ ಪಂ. ಎರ್ಮಾಳು ತೆಂಕ, ಕರಾವಳಿ ಫ್ರೆಂಡ್ಸ್, ರೋಟರಿ ಸಮುದಾಯ ದಳ, ತೆಂಕ ಸರಕಾರಿ ಪ್ರೌಢಶಾಲಾ ಇಂಟರ್ಯಾಕ್ಟ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಗಾಂಧಿ ಜಯಂತಿ ಅಂಗವಾಗಿ ಎರ್ಮಾಳು ತೆಂಕ ಕಡಲ ಕಿನಾರೆಯಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಮಾತನಾಡಿದರು.
ಎರ್ಮಾಳು ತೆಂಕ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಸ್ವಚ್ಛತಾ ಅಭಿಯಾನದ ಪ್ರಮಾಣವಚನ ಬೋಧಿಸಲಾಯಿತು. ಬಳಿಕ ಶಾಲೆಯಿಂದ ಮೆರವಣಿಗೆ ಮುಲ್ಕಿ ಎರ್ಮಾಳು ಮೀನುಗಾರಿಕಾ ರಸ್ತೆಯಲ್ಲಿ ತೆರಳಿ ಸ್ವಚ್ಛತಾ ಅಭಿಯಾನದ ಬಗ್ಗೆ ಪ್ರಚುರಪಡಿಸಲಾಯಿತು.ಬಳಿಕ ಎಲ್ಲರೂ ಸೇರಿಕೊಂಡು ಕಡಲಕಿನಾರೆಯಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿಯರಾದ ಸುಷ್ಮಾರಾಜ್, ರಂಜಿತಾ ಶೇಟ್, ಜೆನ್ನಿಫರ್ ಸ್ನೇಹಾ ಅವರು ಭಾಗವಹಿಸ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಎರ್ಮಾಳು ಕಡಲಕಿನಾರೆ ಸ್ವಚ್ಛತೆಯಲ್ಲಿ ಸ್ಥಳೀಯರೊಂದಿಗೆ ಪಾಲ್ಗೊಂಡು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.
ರೋಟರಿ ಅಧ್ಯಕ್ಷ ರಮೀಜ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ಎರ್ಮಾಳು ತೆಂಕ ಗ್ರಾಮ ಪಂ. ಅಧ್ಯಕ್ಷೆ ಅರುಣಾ ಕುಮಾರಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಮೀನುಗಾರಿಕಾ ನಿಗಮದ ನಿರ್ದೇಶಕ ದೀಪಕ್ ಕುಮಾರ್ ವೈ., ತಾಲ್ಲೂಕು ಪಂಚಾಯ್ತಿ ಸದಸ್ಯ ಕೇಶವ ಮೊಲಿ, ಮಾಜಿ ಸದಸ್ಯೆ ಕೇಸರಿ ಯುವರಾಜ್, ರೋಟರಿ ಸಮುದಾಯ ದಳದ ಅಧ್ಯಕ್ಷ ಲೋಹಿತಾಕ್ಷ ಸುವರ್ಣ, ಕಾರ್ಯದರ್ಶಿ ಕಾಂತಿ ಆಚಾರ್ಯ, ಜಿಲ್ಲಾ ಚೇರ್ಮೇನ್ ಮಾಧವ ಸುವರ್ಣ, ವಲಯ ಸೇನಾನಿ ಕೃಷ್ಣ ಬಂಗೇರ, ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಯು., ಗ್ರಾಮ ಪಂ. ಪಿಡಿಒ ಆಶಾಲತಾ, ರೋಟರಿ ಕಾರ್ಯದರ್ಶಿ ಸಂದೀಪ್ ಪಲಿಮಾರ್, ಗಣೇಶ್ ಆಚಾರ್ಯ, ಅಶ್ರಫ್ ಪಡುಬಿದ್ರೆ ಮುಖ್ಯ ಅತಿಥಿಗಳಾಗಿದ್ದರು.
ಕರುಣಾಕರ ನಾಯಕ್ ಪ್ರಸ್ತಾವಿಸಿದರು. ಸುಧಾಕರ್ ಕಾರ್ಯಕ್ರಮ ನಿರ್ವಹಿಸಿದರು.