ನಿವೇಶನ ರಹಿತರಿಂದ ಭೂಮಿಹಕ್ಕಿಗಾಗಿ ಅರ್ಜಿ ಸಲ್ಲಿಕೆ

ಬೈಂದೂರು, ಅ.3: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಬೈಂದೂರು ತಗ್ಗರ್ಸೆ ಗ್ರಾಮಗಳ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಬಡ ನಿವೇಶನ ರಹಿತರಿಂದ ಭೂಮಿ ಹಕ್ಕಿಗಾಗಿ ಪಡೆದ ಅರ್ಜಿಗಳನ್ನು ಗ್ರಾಪಂ ಕಚೇರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ತಗ್ಗರ್ಸೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ ಜಾಗ/ಖಾಸಗಿ ಜಾಗ ಗುರುತಿಸಲು ಕಂದಾಯ ನಿರೀ ಕ್ಷಕರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮತಿ ಸಭೆಯನ್ನು ಜಿಲ್ಲಾ ಯೋಜನಾ ನಿರ್ದೇಶಕರು ನೀಡಿದ ಸೂಚನೆಯಂತೆ ಕೂಡಲೇ ನಡೆಸಬೇಕು ಎಂದು ಒತ್ತಾಯಿಸಿದರು.
ಡೀಮ್ಡ್ ಅರಣ್ಯ ಪ್ರದೇಶ, ಗೋಮಾಳ ಪ್ರದೇಶದಲ್ಲಿ ವಾಸವಾಗಿರುವ ಬಡ ನಿವೇಶನ ರಹಿತರ ಕುಟುಂಬಕ್ಕೆ ಹಕ್ಕು ಪತ್ರ ಕೊಡಲು ಭೂಕಂದಾಯ ಕಾಯಿದೆ ತಿದ್ದುಪಡಿ ಮಾಡಲು ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದರು.
ಸಿಐಟಿಯು ಮುಖಂಡರಾದ ಸುರೇಶ್ ಕಲ್ಲಾಗರ, ಎಚ್.ನರಸಿಂಹ, ನಾಗರತ್ನ ನಾಡ, ಕುಶಲ, ಗಣೇಶ ತೊಂಡೆಮಕ್ಕಿ, ಗಣೇಶ ಮೊಗವೀರ, ರೋನಿ ನಜರತ್, ಗೋವಿಂದ ಪೂಜಾರಿ, ಮುತ್ತ ಮಾರ್ಕೊಡ, ಶೀಲಾವತಿ ಮೊದ ಲಾದವರು ಉಪಸ್ಥಿತರಿದ್ದರು.





