ಉಜಿರೆ ಉಪವಲಯ ಅರಣ್ಯಾಧಿಕಾರಿಯ ಅಮಾನತು ಒತ್ತಾಯಿಸಿ ಧರಣಿ
ಕೂಲಿ ಕಾರ್ಮಿಕನಿಗೆ ಹಲ್ಲೆ ಪ್ರಕರಣ

ಬೆಳ್ತಂಗಡಿ, ಅ. 3: ಪುದುವೆಟ್ಟಿನ ಕೂಲಿ ಕಾರ್ಮಿಕ ಕಮಲ್ದಾಸ್ ಎಂಬುವರ ಮೇಲೆ ಸೆ. 26ರಂದು ಉಜಿರೆ ಉಪ ವಲಯ ಅರಣ್ಯಾಧಿಕಾರಿ ಕೀರ್ತನ್ ಶೆಟ್ಟಿ ದೈಹಿಕ ದೌರ್ಜನ್ಯ ವೆಸಗಿರುವುದುನ್ನು ವಿರೋಧಿಸಿ ಹಾಗೂ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂಬ ಬೇಡಿಕೆಯೊಂದಿಗೆ ಮಂಗಳವಾರ ಬೆಳ್ತಂಗಡಿಯ ವಲಯ ಅರಣ್ಯ ಕಚೇರಿಯ ಗೇಟಿನ ಬಳಿ ಸಾರ್ವಜನಿಕರು ಧರಣಿ ನಡೆಸಿದರು.
ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜಾತ್ಯಾತೀತ ಜನತಾದಳ, ಕಮ್ಯುನಿಸ್ಟ್ ಪಕ್ಷದ ಮುಖಂಡರುಗಳು, ವಿವಿಧ ಜಾತಿ, ಸಂಘಟನೆಗಳ ನಾಯಕರುಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ ಕೀರ್ತನ್ ಶೆಟ್ಟಿ ಅವರನ್ನು ಅ.7 ರ ಒಳಗೆ ಅಮಾನತು ಮಾಡಬೇಕು ಇಲ್ಲವಾದಲ್ಲಿ ಬೆಳ್ತಂಗಡಿ ಪಟ್ಟಣ ಬಂದ್ ನಡೆಸಲಾಗುವುದು ಎಂದು ಎಚ್ಚರಿಸಿದರು.
ಧರಣಿ ಆರಂಭದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದಾಗ ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿಗೆ ಮಾತು ಬೆಳೆಯಿತು ಅದು ಘರ್ಷಣೆಯ ಹಂತಕ್ಕೂ ಬೆಳೆಯಿತು ಕೊನೆಗೂ ಮುಖಂಡರುಗಳು ಮದ್ಯಪ್ರವೇಶಿಸಿ ಜನರನ್ನು ಶಾಂತಗೊಳಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಕೆ. ವಸಂತ ಬಂಗೇರ, ಓರ್ವ ಅಮಾಯಕನ ಮೇಲೆ ಈ ರೀತಿಯ ದೌರ್ಜನ್ಯ ನಡೆಸುವುದು ತಪ್ಪು. ಹೊಡೆಯುವ ಅಧಿಕಾರಯಾರಿಗೂ ಇಲ್ಲ. ಈ ಬಗ್ಗೆ ಉಸ್ತುವಾರಿ ಸಚಿವರಲ್ಲಿ ಹಾಗೂ ಅರಣ್ಯ ಇಲಾಖೆಯ ವರಿಷ್ಠಾಧಿಕಾರಿಯಲ್ಲಿ ಮಾತನಾಡಿದ್ದೇನೆ. ಆರೋಪ ಎದುರಿ ಸುತ್ತಿರುವ ಅಧಿಕಾರಿಯನ್ನು ತಾತ್ಕಾಲಿಕವಾಗಿ ಬೇರೇಡೆ ನಿಯೋಜನೆ ಮಾಡುವಂತೆ ಸೂಚಿಸಿದ್ದೇನೆ. ವಾರದೊಳಗೆ ಅವರನ್ನು ಬೆಳ್ತಂಗಡಿಯಿಂದ ಕಳುಹಿಸುತ್ತೇನೆ. ಈ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಘಟನೆಯಲ್ಲಿ ಎಲ್ಲಾ ಪಕ್ಷದವರು ಒಂದಾಗಿ ಪ್ರತಿಭಟಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದು ಮುಂದೆಯೂ ಮುಂದುವರಿಯಬೇಕು. ಕಮಲ್ದಾಸ್ ಚಿಕಿತ್ಸೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೀಡುತ್ತೇನೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿಯ ತಾಲೂಕು ಅಧ್ಯಕ್ಷ ರಂಜನ್ ಜಿ ಗೌಡ, ಬಿಜೆಪಿ ಯುವ ಮೋರ್ಛಾ ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಸಾಹುಲ್ ಹಮೀದ್, ಕರ್ನಾಟಕ ರಾಜ್ಯ ಸೀರೋಮಲಬಾರ್ ಕಥೋಲಿಕ್ ಅಸೋಸಿಯೇಶನ್ನ ರಾಜ್ಯಾಧ್ಯಕ್ಷ ಸೇವಿಯರ್ ಪಾಲೇಲಿ, ಮಲಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ನ ರಾಜ್ಯಾಧ್ಯಕ್ಷ ಎ.ಸಿ ಜಯರಾಜ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಚಾಲಕ ಚಂದು ಎಲ್, ಸಿಪಿಐಎಂ ಮುಖಂಡ ಶೇಖರ ಲಾಯಿಲ, ಜಾತ್ಯಾತೀತ ಜನತಾದಳದ ತಾಲೂಕು ಅಧ್ಯಕ್ಷ ಪ್ರವೀಣ ಚಂದ್ರ ಜೈನ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್, ನ್ಯಾಯವಾದಿ ಕೇಶವ ಬೆಳಾಲು ಮಾತನಾಡಿ ಅಮಾನುಷವಾಗಿ ಹಲ್ಲೆ ನಡೆಸಿರುವ ಕೀರ್ತನ್ ಶೆಟ್ಟಿ ಅವರ ವರ್ತನೆಯನ್ನು ಖಂಡಿಸಿ ಅವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಧರ್ಮಗುರುಗಳಾದ ಫಾ, ಬಿನೋಯಿ ಜೋಸೆಫ್, ತಾ. ಪಂ ಸದಸ್ಯರುಗಳಾದ ವಿ.ಟಿ ಸೆಬಾಸ್ಟಿಯನ್, ಪ್ರವೀಣ್, ಶಶಿಧರ ಕಲ್ಮಂಜ, ಸುಧೀರ್ ಸುವರ್ಣ, ವಿಜಯಗೌಡ, ಜಯರಾಮ ಮಿತ್ತಬಾಗಿಲು, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ರೀನಿವಾಸ ವಿ ಕಿಣಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ದಸಂಸ (ಅಂಬೇಡ್ಕರ್ವಾದ) ತಾಲೂಕು ಸಂಚಾಲಕ ವೆಂಕಣ್ಣಕೊಯ್ಯೂರು, ಮಲಯಾಳಿ ಎಸೋಸಿಯೇಶನ್ನ ತಾಲೂಕು ಅಧ್ಯಕ್ಷ ಎ.ಜೆಅಜೇಯ, ಬೆಜೆಪಿಯ ಮುಖಂಡರುಗಳಾದ ಜಯಂತ್ ಕೋಟ್ಯಾನ್, ರತ್ಕುಮಾರ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜಗದೀಶ್ ಡಿ, ಪ್ರಭಾಕರ ಪೂಜಾರಿ, ಅಬ್ದುಲ್ ಗಫೂರ್, ವಸಂತ ಪುದುವೆಟ್ಟು, ಅಝೀಝ್ ಮುಂಡಾಜಿ, ಅಬ್ದುಲ್ ಶುಕೂರ್ ಚಾರ್ಮಾಡಿ ಹಸನಬ್ಬ, ಮಲಯಾಳಿ ಎಸೋಸಿಯೇಶನ್ ಮುಖಂಡರಾದ ವಿನ್ಸಿ ಬಂಗಾಡಿ, ಎ.ಸಿ. ಮ್ಯಾಥ್ಯೂ, ಎ.ಸಿ.ಕುರಿಯನ್, ಸಿರೋ ಮಲಬಾರ್ ಅಸೋಸಿಯೇಶನ್ನ ಕೆ.ಕೆ.ಸೆಬಾಸ್ಟಿಯನ್, ಕಮಲ್ದಾಸ್ ತಾಯಿ ಮೇರಿಯಮ್ಮ, ಸಹೋದರ ಡೇನಿಸ್, ಮಕ್ಕಳಾದ ದೀಪ್ಸನ್, ದೀಪ್ಸಲಿ ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಿ.ಕೆ. ವಸಂತ್ ಕಾರ್ಯಕ್ರಮ ನಿರೂಪಿಸಿದರು.
ಕೀರ್ತನ್ ಶೆಟ್ಟ ಯನ್ನು ಅಮಾನತುಗೊಳಿಸಬೇಕು, ಕಮಲ್ದಾಸ್ ಅವರ ಚಿಕಿತ್ಸೆಯ ಪೂರ್ಣ ವೆಚ್ಚವನ್ನುಅರಣ್ಯ ಇಲಾಖೆ ಭರಿಸಬೇಕು. ಸಂಶಯದ ಆಧಾರದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿ, ಸುಳ್ಳು ಕೇಸು ಜಡಿಯುವ ಇಲಾಖೆಯ ಪ್ರವೃತ್ತಿಯನ್ನು ಕೈ ಬಿಡಬೇಕು. ಆರೋಪಿತ ಕೀರ್ತನ ಶೆಟ್ಟಿಯನ್ನು ಬೆಂಬಲಿಸುತ್ತಿರುವ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ಅವರನ್ನು ತಕ್ಷಣ ವರ್ಗಾವಣೆಗೊಳಿಸಬೇಕು ಎಂಬ ಬೇಡಿಕೆಯನ್ನು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಈ ಸಂದರ್ಭ ಸಲ್ಲಿಸಲಾಯಿತು.







