ಕಾಡು ಪ್ರಾಣಿಗಳ ಹಾವಳಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥಕ್ಕೆ ಸರಕಾರ ಬದ್ಧ: ರಮಾನಾಥ ರೈ

ಮೂಡಿಗೆರೆ, ಆ.3: ಅನಾದಿ ಕಾಲದಿಂದಲೂ ಜೀವಂತವಾಗಿರುವ ರೈತರ ಒತ್ತುವರಿ, ಕಾಡು ಪ್ರಾಣಿಗಳ ಹಾವಳಿ, ಡೀಮ್ಡ್ ಫಾರೆಸ್ಟ್ ಜಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬದ್ಧವಾಗಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಅವರು ಪಟ್ಟಣದ ರೈತ ಭವನದಲ್ಲಿ ಮಂಗಳವಾರ ತಾಲೂಕು ಬೆಳೆಗಾರರ ಸಂಘದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಕಾಫಿ ಉತ್ಸವ ಹಾಗೂ ರೈತ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮತನಾಡಿದರು.
22 ಜಾತಿಯ ಮರ ಕಡಿತಲೆಗೆ ಈ ಹಿಂದೆ ಕಾನೂನು ಜಾರಿಯಲ್ಲಿತ್ತು. ತಮ್ಮ ಸರಕಾರ ಬಂದ ನಂತರ ವಿವಿಧ ಜಾತಿಯ 42 ಮರಗಳ ಕಡಿತಲೆಗೆ ಅನುಮತಿ ನೀಡಲಾಗಿದೆ. ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿರುವ ಸಾಂಕ್ರಾಮಿಕ ರೋಗಗಳಿಗೆ ಸರಕಾರದ ಮಟ್ಟದಲ್ಲಿ ಉನ್ನತ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಮುಂದಿನ ಪೀಳಿಗೆಗೆ ಅರಣ್ಯದಂಚಿನಲ್ಲಿ ಉಳಿಸಿಕೊಂಡಿರುವ ಭೂಮಿಯನ್ನು ಮಾತ್ರ ಬಿಟ್ಟು ಕೊಡಲು ಸಾಧ್ಯ. ಕಾಡಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಮಳೆ ಮತ್ತು ಬೆಳೆ ಬೇಕೆಂದರೆ ಅರಣ್ಯ ಬೇಕು. ಅರಣ್ಯ ನಾಶದಿಂದಾಗಿ ರಾಜ್ಯದಲ್ಲಿ ಬರಗಾಲ ಪ್ರಾರಂಭವಾಗಿದೆ. ನದಿ ಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಕುಸಿತಕ್ಕೊಳಗಾಗಿದೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಜನರ ಬದುಕು ನಾಶವಾಗುವ ಅಂಚಿನಲ್ಲಿದೆ. ಸರಕಾರ ಜನರ ಬದುಕನ್ನು ಕಟ್ಟಿಕೊಡಬೇಗಿದೆ ಎಂದರು.
ಆದ್ದರಿಂದ ಅರಣ್ಯ ಉಳಿವಿಗೆ ಸರಕಾರ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಈ ಭಾಗದಲ್ಲಿ ಆನೆಗಳ ಸಹಿತ ಇತರ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಬೆಳೆಗಾರರು ಇದರಿಂದ ಭಯಭೀತರಾಗಿದ್ದಾರೆ. ಆನೆಗಳ ನಿಯಂತ್ರಣಕ್ಕೆ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಬ್ಯಾರಿಕೆಟ್ ನಿರ್ಮಿಸಿ ಯಶಸ್ವಿಯಾಗಿದ್ದೇವೆ. ಆದರೆ ಇಲ್ಲಿ ಛಿದ್ರಛಿದ್ರ ಅರಣ್ಯ ಪ್ರದೇಶಗಳಿರುವುದರಿಂದ ಪರ್ಯಾಯ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷದಿಂದ ಮಡಿದವರಿಗೆ ಹಾಗೂ ಗಾಯಗೊಂಡ ಸಂತ್ರಸ್ತರಿಗೆ ಪರಿಹಾರವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. ರೈತರ ಬೆಳೆ ನಾಶಕ್ಕೂ ಎರಡು ಪಟ್ಟು ಪರಿಹಾರ ಹೆಚ್ಚಿಸಲಾಗಿದೆ ಎಂದು ನುಡಿದರು.
ಮಸಗಲಿ ಅರಣ್ಯ ಭೂಮಿ ಸಮಸ್ಯೆ ನ್ಯಾಯಾಲಯದಲ್ಲಿದ್ದು, ಅದರ ತೀರ್ಪು ಹೊರ ಬೀಳುವರಗೆ ಅಲ್ಲಿ ವಾಸವಾಗಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ. ಅಲ್ಲಿನ ಜನ ವಾಸವಿರುವ ಪ್ರದೇಶವನ್ನು ಅವರಿಗೆ ಬಿಟ್ಟು ಸರಕಾರ ಪುನರ್ ವಸತಿ ಕಲ್ಪಿಸಲು ಉದ್ದೇಶಿಸಿರುವ ಜಾಗವನ್ನು ಅರಣ್ಯ ಇಲಾಖೆಗೆ ವಹಿಸಲು ಈ ಭಾಗದ ಶಾಸಕರು ಮನವಿ ಮಾಡಿದ್ದಾರೆ. ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
- ಬಿ. ರಮಾನಾಥ ರೈ,ಅರಣ್ಯ ಸಚಿವ







