ಮಡಿಕೇರಿ: ಕ್ರೀಡಾಕೂಟ ಸಮಿತಿಯ ಪೂರ್ವಭಾವಿ ಸಭೆ
ಮಡಿಕೇರಿ, ಅ.3: ಕೊಡವ ಸಮಾಜಗಳ ಒಕ್ಕೂಟದ 6ನೆ ವರ್ಷದ ಕೊಡವ ನಮ್ಮೆಯು ಅ.26,27 ಮತ್ತು 28ರಂದು ಬಾಳುಗೋಡಿನಲ್ಲಿ ನಡೆಯಲಿದ್ದು, ಕ್ರೀಡಾಕೂಟ ಸಮಿತಿಯ ಪೂರ್ವಭಾವಿ ಸಭೆಯು ಮಂಗಳವಾರ ಬಾಳುಗೋಡಿನಲ್ಲಿ ನಡೆಯಿತು.
ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಈ. ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಕಿ, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ,ಭಾರದ ಗುಂಡು ಎಸೆಯುವ ಸ್ಪರ್ಧೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ಅ.14ರೊಳಗೆ ಎಲ್ಲ ಕೊಡವ ಸಮಾಜಗಳ ಅಧ್ಯಕ್ಷರು ತಮ್ಮ ತಮ್ಮ ತಂಡದ ಭಾಗವಹಿಸುವಿಕೆ ಮತ್ತು ತಂಡದ ಆಟಗಾರರ ಪಟ್ಟಿಯನ್ನು 2,000 ರೂ. ಪ್ರವೇಶ ಶುಲ್ಕದೊಂದಿಗೆ ಅಧ್ಯಕ್ಷರು, ಕ್ರೀಡಾ ಸಮಿತಿ,ಕೊಡವ ಸಮಾಜಗಳ ಒಕ್ಕೂಟ ಬಾಳುಗೋಡು, ವೀರಾಜಪೇಟೆ ಇವರಿಗೆ ತಲುಪಿಸುವಂತೆ ತೀರ್ಮಾನಿಸಲಾಯಿತು.
ಪಾವತಿಸಿದ ಪ್ರವೇಶ ಶುಲ್ಕ 2,000 ರೂ.ವನ್ನು ಕ್ರೀಡಾಕೂಟಕ್ಕೆ ಬಂದು ಆಡಿದ ತಂಡಕ್ಕೆ ಮರುಪಾವತಿಸಲಾಗುವುದು. ಗೈರು ಹಾಜರಾಗುವ ತಂಡಗಳ ಪ್ರವೇಶ ಶುಲ್ಕವನ್ನು ನೀಡಲಾಗುವುದಿಲ್ಲ ಎಂದು ತೀರ್ಮಾನವನ್ನು ಕೈಗೊಳ್ಳಲಾಯಿತು.





