ಡಿಸೆಂಬರ್ ಒಳಗೆ ಸಾಲಗಾಮೆ ಹೋಬಳಿ ಎಲ್ಲಾ ಕೆರೆಗೆ ನೀರು ಹರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
.jpg)
ಹಾಸನ,ಅ.4: ಡಿಸೆಂಬರ್ ಒಳಗೆ ಸಾಲಗಾಮೆ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ಹರಿಸದಿದ್ದರೇ ಪ್ರತಿಭಟನೆ ನಡೆಸಿ, ಬೆಂಗಳೂರು ವರೆಗೂ ಪಾದಯಾತ್ರೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೀತಮ್ ಜೆ. ಗೌಡ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಾಲಗಾಮೆ ಹೋಬಳಿ ಸುತ್ತ ಮುತ್ತ ವರ್ಷಕ್ಕೆ ಎರಡು ಮೂರು ಬೆಳೆ ಬೆಳೆಯಬೇಕಾದರೇ ಮಳೆ ಆಧಾರಿತ ಕಷ್ಟವಾಗುತ್ತದೆ. ಇಲ್ಲಿನ ರೈತರು ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂದರು. ಹೆಚ್ಚು ಮಳೆ ಬಂದರೂ ಕೂಡ ಇಲ್ಲಿವರೆಗೂ ಕೆರೆ ತುಂಬುತ್ತಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಿಕ್ಕೆ ಬಂದಾಗ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ ಎಂದುಕೊಂಡಿದ್ದರು.
ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಇಬ್ಬರೂ ಕೂಡ ಏತ ನೀರಾವರಿ ಮೂಲಕ ಕೆರೆ ತುಂಬುತ್ತಿಲ್ಲ. ಕೆರೆಯ ಹೋಳು ತೆಗೆಸದೆ ನೀರು ನಿಲ್ಲುವುದಿಲ್ಲ. ಇದರಿಂದ ಜನ-ಜಾನುವಾರುಗಳಿಗೆ ನೀರು ಕುಡಿಯುವುದಕ್ಕೆ ಸಿಗುತ್ತಿಲ್ಲ. ಕೂಡಲೇ ಎರಡು ಪಕ್ಷಗಳು ಸಾಲಗಾಮೆ ಹೋಬಳಿ ಸುತ್ತ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಗಮನ ನೀಡಬೇಕು. ಇಲ್ಲವಾದರೇ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖಂಡ ಸಿ.ಟಿ. ರವಿ, ಜಿಲ್ಲಾಧ್ಯಕ್ಷ ಯೋಗರಮೇಶ್ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕೂಡಲೇ ತಜ್ಞರ ಸಮಿತಿ ರಚಿಸಿ ಚರ್ಚೆ ಮಾಡುವುದರ ಮೂಲಕ ನಕ್ಷೆ ಸಿದ್ಧಪಡಿಸಿ ತಕ್ಷಣದಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಾಲಗಾಮೆ ಹೋಬಳಿ ಭಾಗದಲ್ಲಿ ಒಟ್ಟು 40 ಕೆರೆಗಳು ಇದ್ದು, ಇದರ ಟೆಕ್ನಿಕಲ್ ಮಾಹಿತಿಯನ್ನು ಸರಕಾರ ಪಡೆಯಬೇಕು ಎಂದು ಸಲಹೆ ನೀಡಿದರು. ಈ ಭಾಗಕ್ಕೆ ಸೇರುವ ಶಾಸಕರು ಯಾವ ಕೆಲಸ ಮಾಡಿರುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಶಾಸಕರು ಕೆಲಸ ಮಾಡಬೇಕು. ಇಲ್ಲವಾದರೇ ಕೆರೆಗೆ ನೀರು ಹರಿಸುವಂತೆ ಶಾಸಕರ ವಿರುದ್ಧ ಪ್ರತಿಭಟನೆ ಮಾಡಲಾಗುವುದು. ಅವಶ್ಯಕವಿದ್ದರೇ ಸಾಲಗಾಮೆಯಿಂದ ಬೆಂಗಳೂರುವರೆಗೂ ಪಾದಯಾತ್ರೆ ಹಮ್ಮಿಕೊಳ್ಳಬೇಕಾಗುತ್ತದೆ. ತಾಂತ್ವಿಕ ಅಂತ್ಯ ಕಾಣುವವರೆಗೂ ನಾವು ಹೋರಾಟ ಬಿಡುವುದಿಲ್ಲ.
ಮುಂದಿನ ಅಧಿವೇಶನ ನಡೆಯುವುದರ ಒಳಗೆ ಕೆರೆಗೆ ನೀರು ತುಂಬಿಸಲು ಆಶ್ವಾಸನೆ ಕೊಡುವವರೆಗೂ ಜಲಸಂಪನ್ಮೂಲ ಸಚಿವರು ಮತ್ತು ಮುಖ್ಯಮಂತ್ರಿ ಗಮನ ಕೂಡ ಸೆಳೆಯಲಾಗುವುದು. ಜೊತೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೂ ತರುವುದಾಗಿ ಹೇಳಿದರು. ಶಾಸಕರ ಬಗ್ಗೆ ಮಾತನಾಡಿ ಅವರನ್ನು ಒತ್ತಡಕ್ಕೆ ತರಲು ನಾನು ಇಷ್ಟಪಡುವುದಿಲ್ಲ. ನಮಗೆ ಕೆಲಸ ಮಾಡಿದರೇ ಸಾಕು ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸದಸ್ಯ ಈಶ್ವರಪ್ಪ, ಗ್ರಾಪಂ ಅಧ್ಯಕ್ಷ ಲೋಕೇಶ್ ನಾಯಕ್, ನಿಟ್ಟೂರು ಗ್ರಾಪಂ ಸದಸ್ಯ ಲಕ್ಷ್ಮೀಶ್, ಸತ್ಯಕುಮಾರ್, ಯಲಗುಂದ ಗ್ರಾಪಂ ಸದಸ್ಯ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.







