ಬಿಜೆಪಿಯದು ಭಾವನೆಗೆ ಸಂಬಂಧಿಸಿದ ಯೋಜನೆಗಳು,ಕಾಂಗ್ರೆಸ್ಸಿನದು ಬದುಕಿಗೆ ಸಂಬಂಧಿಸಿದ ಯೋಜನೆಗಳು: ಡಾ|ಬಿ.ಎಲ್ ಶಂಕರ್

ಚಿಕ್ಕಮಗಳೂರು, ಅ.4:ಬಿಜೆಪಿಯವರು ಕೇವಲ ಭಾವನೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುತ್ತಾರೆ ಆದರೆ ಕಾಂಗ್ರೆಸ್ ಬದುಕಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಡಾ|| ಬಿ.ಎಲ್ ಶಂಕರ್ ತಿಳಿಸಿದರು.
ಅವರು ಬುಧವಾರ ಎಐಟಿ ವೃತ್ತದ ಒಕ್ಕಲಿಗರ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮತಗಟ್ಟೆ ಅಧ್ಯಕ್ಷರು ಹಾಗು ಮತಗಟ್ಟೆ ಸಹಾಯಕರ ತರಬೇತಿ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸ, ದೇಶ ನಿರ್ಮಾಣಕ್ಕೆ ಕಾಂಗ್ರೆಸ್ ಕೊಡುಗೆ ಮತ್ತು ಪ್ರಸ್ತುತ ರಾಜಕಾರಣ, ರಾಜ್ಯ ಸರ್ಕಾರದ ಸಾಧನೆಗಳ ಕುರಿತಾಗಿ ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕೆಲವು ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಒಂದು ಮತಕ್ಕೆ ಇಂತಿಷ್ಟು ಹಣವೆಂದು ನೀಡಬಹುದು ಆದರೆ ಅದು ತಾತ್ಕಾಲಿಕವಾಗಿ ಮಾತ್ರ ಉಪಯೋಗವಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಬಡ ಜನರಿಗೆ ಈಗ ನೀಡುತ್ತಿರುವ ಸವಲತ್ತುಗಳ ಲೆಕ್ಕಾಚಾರ ಮಾಡಿದರೆ ವರ್ಷಕ್ಕೆ ಅಂದಾಜು ಒಂದುವರೆ ಲಕ್ಷ ಹಣ ಖರ್ಚು ಮಾಡುತ್ತಿದೆ ಎಂದರು.
ಚಿಕ್ಕಮಗಳೂರಿನಲ್ಲಿ ಈ ಬಾರಿ 5 ಕ್ಷೇತ್ರಗಳು ಕಾಂಗ್ರೆಸ್ ವಶವಾಗಲು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಅಲ್ಲದೆ ಮನೆ ಮನೆಗಳಿಗೆ ತೆರಳಿ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ತಿಳಿಸಬೇಕು ಅದೇ ರೀತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನ್ಯೂನ್ಯತೆಗಳನ್ನು ಸಹ ತಿಳಿಸಬೇಕೆಂದ ಅವರು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಉತ್ತಮ ಸಂಘಟನೆಯನ್ನು ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ರವರೆ ಶ್ಲಾಘಿಸಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್ ತರಬೆತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿದರು. ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ ಸಂದೀಪ್ ಅಧಿಕಾರ ವಿಕೇಂದ್ರೀಕರಣದಲ್ಲಿ ಕಾಂಗ್ರೆಸ್ ಕೊಡುಗೆ ಏನು ಎಂದು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು. ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ.ಶಿವಾನಂದಸ್ವಾಮಿ ಮತಗಟ್ಟೆ ಅಧ್ಯಕ್ಷರು ಹಾಗೂ ಬಿಎಲ್ಎ2ಗಳ ಚಟುವಟಿಕೆಗಳು ಹಾಗು ಜವಬ್ದಾರಿಗಳ ಕುರಿತಾಗಿ ಉಪನ್ಯಾಸ ನೀಡಿದರು.
ಸುಧೀರ್ ಕುಮಾರ್ ಮುರೊಳ್ಳಿ ಅವರು ಅಪಾಯಕಾರಿ ಬಿಜೆಪಿ, ಆರ್.ಎಸ್.ಎಸ್ ಎದುರಿಸುವ ಬಗ್ಗೆ ಉಪನ್ಯಾಸ ನೀಡಿದರು ಅಲ್ಲದೆ ರಾಜಕೀಯ ಹಾಗೂ ಅಧಿಕಾರದಲ್ಲಿ ಮಹಿಳೆಯರ ಪಾತ್ರವೆನು ಎಂಬುದರ ಕುರಿತಾಗಿ ಸಾಗರ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ಜ್ಯೋತಿ ಮುರುಳೀಧರ್ ಉಪನ್ಯಾಸ ನೀಡಿದರು. ಶಿಬಿರದಲ್ಲಿ 250ಕ್ಕು ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್.ಪಿ ಮಂಜೇಗೌಡ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಅರಣ್ಯ ವಸತಿ ನಿಗಮದ ಅಧ್ಯಕ್ಷರಾದ ಎ.ಎನ್.ಮಹೇಶ್, ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್, ಸಿಡಿಎ ಅಧ್ಯಕ್ಷ ಸೈಯದ್ ಹನೀಫ್, ಕೆಪಿಸಿಸಿ ಸದಸ್ಯ ಮಂಜಣ್ಣ,ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ನಿಸಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಐಟಿ ಸೆಲ್ನ ಜಿಲ್ಲಾಧ್ಯಕ್ಷÀ ಕಾರ್ತಿಕ್ ಜಿ.ಚೆಟ್ಟಿಯಾರ್, ಸೇವಾದಳದ ಜಿಲ್ಲಾಧ್ಯಕ್ಷರಾದ ಆನಂದ್, ಪ್ರೊಫೇಷನಲ್ ಸೆಲ್ನ ಅಧ್ಯಕ್ಷರಾದ ಯದುಕುಮಾರ್, ಎಸ್ಸಿ.ಎಸ್ಟಿ ಘಟಕದ ಹೂವಪ್ಪ, ಉಪಸ್ತಿತರಿದ್ದರು. ಮಂಜೇಗೌಡ ಸ್ವಾಗತಿಸಿ ನಗರಸಭಾ ಸದಸ್ಯ ರೂಬೆನ್ ಮೊಸಸ್ ವಂದಿಸಿದರು.







