ಮಲ್ಲಾರಿನಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ
ಎಸ್ಕೆಪಿಯ ಮಾದರಿ ಸೇವೆಗೆ ಪ್ರಶಂಸೆ
ಕಾಪು, ಅ. 5: ಮಲ್ಲಾರಿನಲ್ಲಿ ನೂತನವಾಗಿ ಆರಂಭಗೊಂಡ ಸರಕಾರಿ ಆಯುರ್ವೇದ ಚಿಕಿತ್ಸಾಲಯನ್ನು ತಾಲ್ಲೂಕು ಆಯುರ್ವೇದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಮೂಲಕ ಇತರ ಆಯುರ್ವೇದ ಆಸ್ಪತ್ರೆಗೆ ಕೇಂದ್ರ ಸ್ಥಾನವಾಗಬೇಕು ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಗುರುವಾರ ಕರ್ನಾಟಕ ಸರಕಾರದ ಬೆಂಗಳೂರು ಆಯುಷ್ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ಎಸ್ಕೆಪಿ ಹೆಲ್ತ್ ಸೆಂಟರ್ ಮಲ್ಲಾರ್ ಇದರ ವತಿಯಿಂದ ಆರಂಭಗೊಂಡ ಸರರ್ಕಾರಿ ಆಯುರ್ವೇದ ಆಸ್ಪತ್ರೆಯ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ಮೂಲಭೂತ ಸೌಲಭ್ಯಕ್ಕಾಗಿ ಮನವಿ ಸಲ್ಲಿಸುವ ದಿನಗಳಲ್ಲಿ ಎಸ್ಕೆಪಿ ಹೆಲ್ತ್ ಸೆಂಟರ್ ಸಂಸ್ಥೆಯ ವತಿಯಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಸರಕಾರ ಸೇವೆಗೆ ಅವಕಾಶ ಮಾಡಿಕೊಟ್ಟಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಾಗಿ ಆಸ್ಪತ್ರೆಯಾದ ಬಳಿಕ ಕಾಪುವಿನ ಆಸ್ಪತ್ರೆಯನ್ನು ಕಾಪುವಿನ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಹಾಗೂ ಮಲ್ಲಾರಿನ ಸರಕಾರಿ ಆಸ್ಪತ್ರೆಯನ್ನು ತಾಲ್ಲೂಕು ಆಯುರ್ವೇದಿಕ್ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಅನುಮತಿ ಸಿಗಲಿದೆ ಎಂದು ಸೊರಕೆ ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲಾರಿಗೆ ವಸತಿ ಶಾಲೆ: ಮೌಲಾನಾ ಅಝಾದ್ ವಸತಿ ಶಾಲೆಯನ್ನು ಮಲ್ಲಾರಿನಲ್ಲಿ ಆರಂಭಿಸಲು ಈಗಾಗಲೇ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಚಿವರಿಂದ ಮಂಜೂರಾತಿಗೆ ಈಗಾಗಲೇ ಭರವಸೆ ಸಿಕ್ಕಿದೆ. ಇಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಆದಷ್ಟು ಶೀಘ್ರದಲ್ಲಿ ಈ ವಸತಿ ಶಾಲೆಯನ್ನು ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಸೊರಕೆ ಹೇಳಿದರು.
ಮಾದರಿ ಸಂಸ್ಥೆ: ಕಾಪು ಸಮೀಪದ ಮಲ್ಲಾರಿನ ಸೈಯದ್ ಖ್ವಾಜಾ ಪೀರನ್ ಶಿಕ್ಷಣ ಸಂಸ್ಥೆಯು ಮಲ್ಲಾರು ಸರ್ಕಾರಿ ಉರ್ದು ಶಾಲೆಯ ಬಳಿ ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡವನ್ನು ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಗೆ ಹಸ್ತಾಂತರಿಸಿದೆ. ಆರು ಸೆಂಟ್ಸ್ ಜಮೀನಿನಲ್ಲಿ 9 ಕೊಠಡಿಗಳಿರುವ 2500 ಚದರ ಅಡಿ ವಿಸ್ತೀರ್ಣ ಈ ಕಟ್ಟಡ ಹೊಂದಿದೆ. ಈ ಕಟ್ಟಡ ನಿರ್ಮಿಸುವ ಮೂಲಕ ಮಾದರಿ ಸಂಸ್ಥೆಯಾಗಿ ರೂಪುಗೊಂಡಿದೆ.
ಏನೆಲ್ಲಾ ಲಭ್ಯ: ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಲಭ್ಯವಿರುತ್ತಾರೆ. 9 ಕೊಠಡಿಗಳಲ್ಲಿ ಸ್ವಾಗತ ಕೊಠಡಿ, ಔಷಧ ವಿಭಾಗ, ತಪಾಸಣೆ, ಮಹಿಳೆಯರು, ಪುರು ಷರ ಪ್ರತ್ಯೇಕ ಕೊಠಡಿ, ಶಸ್ತ್ರಚಿಕಿತ್ಸೆ, ಪಂಚಕರ್ಮ ಚಕಿತ್ಸೆಗಾಗಿ ಕೊಠಡಿಗಳಿವೆ. ಇದರಲ್ಲಿ ಒಂದು ಕೊಠಡಿ ಸಂಸ್ಥೆಯ ಸಭೆಗಾಗಿ ಇವೆ. ಈ ಸಂದರ್ಭದಲ್ಲಿ ಎಸ್ಕೆಪಿ ಹೆಲ್ತ್ ಸೆಂಟರ್ನ ಅಧ್ಯಕ್ಷ ಶಭಿ ಅಹ್ಮದ್ ಕಾಝಿ, ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ ರಾವ್ ಅವರಿಗೆ ಕಟ್ಟಡದ ಕೀಲಿ ಕೈ ಹಾಗೂ ದಾಖಲೆಗಳನ್ನು ಹಸ್ತಾಂತರಿಸಿದರು.
ಸಚಿವ ಯು.ಟಿ.ಖಾದರ್ ಅವರು ಶುಭಹಾರೈಸಿ ಸಂಸ್ಥೆಯ ಕಾರ್ಯವನ್ನು ಮೆಚ್ಚುಗೆ ಸೂಚಿಸಿದರು. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಪಂ. ಉಪಾಧ್ಯಕ್ಷ ಶೀಲಾ ಕೆ.ಶೆಟ್ಟಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಡುಪಿ ಜಿಲ್ಲಾ ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾಪು ಪುರಸಭಾ ಉಪಾಧ್ಯಕ್ಷ ಎಚ್.ಉಸ್ಮಾನ್, ವಿಜಯಲಕ್ಷ್ಮೀ, ಕಾಪು ದಿವಾಕರ ಶೆಟ್ಟಿ, ಡಾ.ಕೆ.ಪ್ರಶಾಂತ್ ಶೆಟ್ಟಿ, ಶಾಬು ಸಾಹೇಬ್, ಹಿದಾಯತುಲ್ಲಾ ಕಾಝಿ ಉಪಸ್ಥಿತರಿದ್ದರು.
ಎಸ್ಕೆಪಿ ಹೆಲ್ತ್ ಸೆಂಟರ್ನ ಜತೆ ಕಾರ್ಯದರ್ಶಿ ಶಫಿ ಅಹ್ಮದ್, ಸಂಸ್ಥೆಯನ್ನು ಪರಿಚಯಿಸಿದರು. ಕೊಂಬಗುಡ್ಡೆಯ ಜಾಮಿಯಾ ಮಸ್ಜಿದ್ನ ಮೌಲಾನಾ ಮುಹಮ್ಮದ್ ಫರ್ವೇಝ್ ಆಲಮ್ ಪ್ರಾರ್ಥಿಸಿದರು. ಎಸ್ಕೆಪಿ ಹೆಲ್ತ್ ಸೆಂಟರ್ನ ಅನ್ವರ್ ಆಲಿ ಕಾರ್ಯಕ್ರಮ ನಿರ್ವಹಿಸಿದರು.