ನಗರಸಭೆ ಎದುರು ಬಿಜೆಪಿ ಪ್ರತಿಭಟನೆ; ಮುತ್ತಿಗೆಗೆ ಯತ್ನ
ಭ್ರಷ್ಟ ಪೌರಾಯುಕ್ತ ಮಂಜುನಾಥಯ್ಯ ವರ್ಗಾವಣೆಗೆ ಪಟ್ಟು
ಉಡುಪಿ, ಅ.6: ಕಳೆದ ಮೂರು ವರ್ಷಗಳಿಂದ ಉಡುಪಿ ನಗರಸಭೆಯಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಡಿ.ಮಂಜುನಾಥಯ್ಯ ಅವರು ಮಹಾ ಭ್ರಷ್ಟರಾಗಿದ್ದು, ಅವರನ್ನು ಕೂಡಲೇ ಇಲ್ಲಿಂದ ವರ್ಗಾಯಿಸುವಂತೆ ಆಗ್ರಹಿಸಿ ಉಡುಪಿ ನಗರ ಬಿಜೆಪಿಯ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಇಂದು ಕಡಿಯಾಳಿಯಿಂದ ನಗರಸಭೆಯವರೆಗೆ ಪಾದಯಾತ್ರೆ ನಡೆಸಿ ನಗರಸಭೆ ಎದುರು ತೀವ್ರ ಪ್ರತಿಭಟನೆ ನಡೆಸಿತು.
ಪೌರಾಯುಕ್ತ ಮಂಜುನಾಥಯ್ಯ ಅವರ ನೇತೃತ್ವದಲ್ಲಿ ನಗರಸಭೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತಿದೆ ಎಂದು ಆರೋಪಿ ಪ್ರತಿಭಟನಕಾರರು ಪೌರಾಯುಕ್ತರ ಅಣಕು ಶವಯಾತ್ರೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಗರಸಭೆಗೆ ಮುತ್ತಿಗೆ ಹಾಕಲು ನಡೆಸಿದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
ನಗರಸಭೆ ಎದುರು ಭಾರೀ ಸಂಖ್ಯೆಯಲ್ಲಿ ನೆರೆದ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ.ರಘುಪತಿ ಭಟ್, ಮಂಜುನಾಥಯ್ಯ ಕಳೆದ ಹತ್ತು ವರ್ಷಗಳಿಗೂ ಅಧಿಕ ಕಾಲ ಉಡುಪಿ ಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತಿದ್ದು, ಮೂರು ವರ್ಷಗಳಿಂದ ಪೌರಾಯುಕ್ತರಾಗಿದ್ದಾರೆ. ಶಿಕ್ಷಣ ಇಲಾಖೆಯ ಬಿಇಒ ಆಗಿದ್ದ ಅವರನ್ನು ಅರ್ಹತೆ ಇಲ್ಲದಿದ್ದರೂ ಪೌರಾಯುಕ್ತರನ್ನಾಗಿ ನೇಮಿಸಲಾಗಿದೆ ಎಂದರು.
ತನ್ನ ರಾಜಕೀಯ ಪ್ರಭಾವ ಬಳಸಿ ಅಧಿಕಾರ ಗಿಟ್ಟಿಸಿರುವ ಪೌರಾಯುಕ್ತರು ನಗರಸಭೆಯ ಅಸಮರ್ಪಕ ಕಾರ್ಯನಿರ್ವಹಣೆ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಾರಣೀಭೂತರಾಗಿದ್ದಾರೆ. ನಗರಸಭೆಯ ಮಾಸಿಕ ಸಭೆಯನ್ನು ಸಹ ಸರಿಯಾಗಿ ನಡೆಸದ ಇವರಿಂದ ನಗರದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ರಾಜ್ಯ ಶಿಕ್ಷಣ ಸಚಿವ ತನ್ವೀರ್ ಸೇಟ್ ಅವರು ಶಿಕ್ಷಣ ಇಲಾಖೆ ಯಲ್ಲಿದ್ದು, ಬೇರೆ ಇಲಾಖೆಗೆ ನಿಯೋಜನೆಗೊಂಡ ಎಲ್ಲರನ್ನೂ ಮರಳಿ ಮಾತೃ ಇಲಾಖೆಗೆ ಕರೆಸುವ ಬಗ್ಗೆ ಘೋಷಣೆ ಮಾಡಿದ್ದು, ಡಿ.ಮಂಜುನಾಥಯ್ಯ ಅವರನ್ನು ತಕ್ಷಣವೇ ಮಾತೃ ಇಲಾಖೆಗೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿ ದರು. ಈ ಬಗ್ಗೆ ತಾವು ತನ್ವೀರ್ ಸೇಟ್ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆುುವುದಾಗಿ ತಿಳಿಸಿದರು.
ಕೂಡಲೇ ಪೌರಾಯುಕ್ತರನ್ನು ಇಲ್ಲಿಂದ ವರ್ಗಾಯಿಸದಿದ್ದರೆ, ಬಿಜೆಪಿ ಶೀಘ್ರವೇ ಇನ್ನಷ್ಟು ತೀವ್ರ ರೀತಿಯ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರಲ್ಲದೇ, ಮಂಜುನಾಥಯ್ಯ ಅವರನ್ನು ಪೌರಾಯುಕ್ತ ಸ್ಥಾನದಿಂದ ಇಳಿಸದೇ ಬಿಜೆಪಿ ವಿರಮಿಸದು ಎಂದು ಘೋಷಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆಯ ಮಾಜಿ ಅಧ್ಯಕ್ಷ ಕಿರಣ್ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಯಶ್ಪಾಲ್ ಸುವರ್ಣ ಸೇರಿದಂತೆ ನಗರಸಭೆಯ ಬಿಜೆಪಿ ಸದಸ್ಯರು, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಕ್ಷದ ಮುಖಂಡರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಸ್ಥಳಕ್ಕೆ ಆಗಮಿಸಿದ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧನ ಬನ್ನಂಜೆ ಅವರಿಗೆ ಈ ಕುರಿತು ಮನವಿ ಅರ್ಪಿಸಿದ ರಘುಪತಿ ಭಟ್ ಹಾಗೂ ಮಟ್ಟಾರು, ಮಂಜುನಾಥಯ್ಯ ಅವರನ್ನು ತಕ್ಷಣವೇ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಳುಹಿಸಿ, ನಗರಸಭೆಗೆ ಕೆಎಂಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿಕೊಂಡರು.