ಗೌರಿ ಲಂಕೇಶ್ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಸ್ಡಿಪಿಐ ಪ್ರತಿಭಟನೆ

ಮಡಿಕೇರಿ ಅ.6 : ಹಿರಿಯ ಪತ್ರಕರ್ತರಾದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಮಡಿಕೇರಿ ನಗರ ಸಮಿತಿ ವತಿಯಿಂದ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪಂಜಿನ ಪ್ರತಿಭಟನೆ ನಡೆಯಿತು.
ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅಮಿನ್ ಮೊಹಿಸಿನ್ ಮಾತನಾಡಿ, ಹತ್ಯೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದೆ ಇರುವುದರಿಂದ ಆಡಳಿತ ವ್ಯವಸ್ಥೆಯ ಮೇಲೆ ಜನರಿಗೆ ಸಂಶಯ ಮೂಡಿ ಬಂದಿದೆ. ಕೊಲೆಗಡುಕರನ್ನು ಪತ್ತೆ ಹಚ್ಚಲು ಇಡೀ ರಾಜ್ಯ ಸರಕಾರದ ವ್ಯವಸ್ಥೆಗೆ ಸಾಧ್ಯವಿಲ್ಲ ಎಂದಾದರೆ ಇದರ ಹಿಂದೆ ಇರುವ ಸಂಚು ಯಾರದ್ದು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಗಾಂಧೀಜಿಯನ್ನು ಹತ್ಯೆ ಮಾಡಿದ ಸಿದ್ದಾಂತ ಗೌರಿಯನ್ನು ಕೊಂದಿದೆ ಎಂದು ಆರೋಪಿಸಿದರು. ಶೀಘ್ರಗತಿಯ ತನಿಖೆಯನ್ನು ನಡೆಸಿ ಮತ್ತೊಂದು ಸಂಶೋಧಕರ ಅಥವಾ ಇತಿಹಾಸಗಾರರ ಕೊಲೆ ಆಗುವುದಕ್ಕಿಂತ ಮುಂಚಿತವಾಗಿ ಗೌರಿ ಹಂತಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಗರಸಭಾ ಸದಸ್ಯರಾದ ಪೀಟರ್, ಪಿಎಫ್ಐ ಜಿಲ್ಲಾಧ್ಯಕ್ಷ ಹ್ಯಾರಿಸ್, ನಗರ ಸಮಿತಿಯ ಪ್ರಮುಖರಾದ ಹಬೀಬ್, ಮನ್ಸೂರ್, ಸನಾವುಲ್ಲಾ, ಮನ್ಸೂರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





