ಅ. 13: ಸಚಿವರ ವಿರುದ್ಧ ಪ್ರತಿಭಟನಾ ಜಾಥಾ
ಪ್ರತ್ಯೇಕ ಮರಳು ನೀತಿ ಜಾರಿಗೆ ಒತ್ತಾಯ
ಬಂಟ್ವಾಳ, ಅ. 7: ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹಾಗೂ ಅಕ್ರಮ ಮರಳುಗಾರಿಕೆ ವಿರುದ್ಧ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಅ. 13ರಂದು ಬಿ.ಸಿ.ರೋಡ್ನಲ್ಲಿ ಪ್ರತಿಭಟನಾ ಜಾಥಾ ಹಾಗೂ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಬಿಜೆಪಿ ಸಮಿತಿಯ ಅಧ್ಯಕ್ಷ ದೇವದಾಸ್ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಕೃತಕ ಮರಳಿನ ಅಭಾವ ಸೃಷ್ಠಿಯಾಗಿದೆ. ಈ ಸಮಸ್ಯೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದರು.
ತಾಲೂಕಿನ ಮೂಲರಪಟ್ಣ, ಸಂಗಬೆಟ್ಟು, ಅರಳ, ಸರಪಾಡಿ, ತಂಬೆ, ಸಜಿಪಮುನ್ನೂರು, ಕಡೇಶಿವಾಲಯ ಗ್ರಾಮಗಳ ಸಹಿತ ಹಲವಾರು ಪ್ರದೇಶಗಳಲ್ಲಿ ಮರಳುಗಾರಿಗೆ ನಡೆಯುತ್ತಿದೆ. ಆದರೆ ಬಂಟ್ವಾಳದ ಜನರಿಗೆ ಮಾತ್ರ ಮರಳು ಸಿಗುತ್ತಿಲ್ಲ ಎಂದು ಅವರು ಟೀಕಿಸಿದರು.
ಪ್ರತಿಭಟನೆಯ ಬಳಿಕವೂ ಜಿಲ್ಲಾಡಳಿತ, ಸರಕಾರ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಕಾರ್ಯಕರ್ತರೇ ಮರಳು ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸುವ ಕಾರ್ಯ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಮರಳು ದುರುಪಯೋಗ
ಮರಳು ದ.ಕ.ಜಿಲ್ಲೆಗೆ ದೇವರು ಕೊಟ್ಟ ಸಂಪತ್ತು. ಆದರೆ ಅದನ್ನು ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಪ್ರತಿ ತಿಂಗಳು 3ರಿಂದ 5 ಸಾವಿರ ಲೋಡ್ ಮರಳು ಹೊರ ಜಿಲ್ಲೆಗಳಿಗೆ ಸಾಗಾಟವಾಗುತ್ತಿದ್ದು, ಸಾಕಷ್ಟು ರಾಜಧನವನ್ನು ಸಂಪಾದಿಸಬಹುದು. ಮರಳಿನ ರಾಜಧನದಿಂದಲೇ ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧಿಸಬಹುದು. ಆದರೆ ಈ ಅವಕಾಶವನ್ನು ಜಿಲ್ಲಾಡಳಿತ ಕಳೆದುಕೊಂಡಿದ್ದು, ಭ್ರಷ್ಟಾಚಾರದ ಮೂಲಕ ರಾಜಧನವನ್ನು ಹಂಚಿಕೊಳ್ಳಲಾಗುತ್ತಿದೆ
ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕಾ ಉಳೇಪಾಡಿಗುತ್ತು ಈ ಸಂದರ್ಭದಲ್ಲಿ ಆರೋಪಿಸಿದರು.
ದ.ಕ.ಜಿಲ್ಲೆಯಲ್ಲಿ ಗಾಂಜಾ ಮಾರಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಂದಾಗಿ ಅಶಾಂತಿ ಉಂಟಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ ಕೇರಳದಿಂದ ಕರಾವಳಿ ಪ್ರದೇಶಕ್ಕೆ ಉಗ್ರರು ನುಸುಳುತ್ತಿರುವ ಬಗ್ಗೆ ಕಳೆದ ಹಲವು ಸಮಯಗಳಿಂದ ತಾವು ಹೇಳುತ್ತಲೇ ಬಂದಿದ್ದೆವು. ಆದರೆ ಜಿಲ್ಲಾಡಳಿತ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದೀಗ ಜಿಲ್ಲೆಯಲ್ಲಿ ಉಗ್ರರು ನೆಲೆಸಿರುವ ಕುರಿತಾಗಿ ಚರ್ಚೆ ನಡೆಯುತ್ತಿದೆ. ಇನ್ನಾದರೂ ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ತುಳುನಾಡಿನ ಕೋಟಿ ಚೆನ್ನಯರ ತಾಯಿ ದೇಯಿ ಬೈದೇತಿ ವಿಗ್ರಹವನ್ನು ಅಪಮಾನಿಸಿ ಫೊಟೋ ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಮತಾಂಧ ಶಕ್ತಿಗಳ ವಿರುದ್ಧ ಹಾಗೂ ಜಿಲ್ಲೆಯ ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಅಕ್ಟೋಬರ್ 10ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ದೇಯಿ ಬೈದೇತಿ ಔಷಧವನದವರೆಗೆ ಬಿಜೆಪಿ ಪಾದಯಾತ್ರೆ ನಡೆಸಲಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋನೆಯನ್ನು ಬಿಜೆಪಿ ವಿರೋಧಿಸುತ್ತಾ ಬಂದಿದೆ. ಜನರ ಸಮಸ್ಯೆಯನ್ನು ಗಮನದಲ್ಲಿಟ್ಟು ಹೋರಾಟ ನಡೆಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಕ್ಮಯ ಪೂಜಾರಿ, ಪಕ್ಷದ ಮುಖಂಡರಾದ ಜಿ.ಆನಂದ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಸೀತರಾಮ ಪೂಜಾರಿ, ರಮಾನಾಥ ರಾಯಿ ಮತ್ತಿತರರಿದ್ದರು.