ಪಟಾಕಿ ಹಚ್ಚುವಾಗ ಮುಂಜಾಗರೂಕತೆ ವಹಿಸಲು ಸೂಚನೆ

ಬೆಂಗಳೂರು, ಅ.7: ಪ್ರಸಕ್ತ ಸಾಲಿನಲ್ಲಿ ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸುವ ದಿಸೆಯಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಹಲವು ಕ್ರಮಗಳನ್ನು ಸೂಚಿಸಿದೆ.
ಮಕ್ಕಳಿಗೆ ದೊಡ್ಡವರ ಸಮ್ಮುಖದಲ್ಲೆ ಪಟಾಕಿ ಹಚ್ಚಲು ತಿಳಿಸಬೇಕು. ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸುರಕ್ಷಿತ. ಯಾವುದೆ ಸಂದರ್ಭದಲ್ಲಿ ಮನೆಯೊಳಗೆ ಪಟಾಕಿ ಹಚ್ಚಬಾರದು. ಆದಷ್ಟು ಮಟ್ಟಿಗೆ ಶರೀರಕ್ಕೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಧರಿಸಬೇಕು. ದೊಗಲೆ ಬಟ್ಟೆಗಳನ್ನು ಧರಿಸಬಾರದು. ಸುರ ಸುರ ಬತ್ತಿ ಇತ್ಯಾದಿಗಳನ್ನು ಶರೀರದಿಂದ ಆದಷ್ಟು ದೂರ ಹಿಡಿಯಬೇಕು.
ಪಟಾಕಿ ಹಚ್ಚುವಾಗ ಅದರ ಮೇಲೆ ಬಾಗಬಾರದು. ಸಾಧ್ಯವಾದಷ್ಟು ಮಟ್ಟಿಗೆ ಪಕ್ಕದಿಂದ ಹಚ್ಚತಕ್ಕದ್ದು. ಯಾವುದೇ ಪಾತ್ರೆ ಒಳಗೆ ಅಥವಾ ಇಕ್ಕಟ್ಟಾದ ಸ್ಥಳಗಳಲ್ಲಿ ಪಟಾಕಿ ಹಚ್ಚಬಾರದು. ಪಟಾಕಿಗಳನ್ನು ಜೇಬಿನಲ್ಲಿಡಬಾರದು. ಯಾವುದೇ ಸಂದರ್ಭದಲ್ಲಿ ಪಟಾಕಿಗಳನ್ನು ಬೆಂಕಿಯ ಅಥವಾ ಆ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಇಡಬಾರದು ಹಾಗೂ ಪೊಟ್ಟಣಗಳನ್ನು ತೆರೆಯಬಾರದು. ಹಚ್ಚಿರುವ ಪಟಾಕಿ ಸಿಡಿಯದಿದ್ದರೆ ಅದನ್ನು ಪುನರ್ ಪರೀಕ್ಷಿಸಲು ಪ್ರಯತ್ನಿಸಬಾರದು. ಹೂ ಕುಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚಬಾರದು. ರಾಕೆಟ್ಗಳನ್ನು ಬಳಸುವುದನ್ನು ಪೂರ್ಣವಾಗಿ ತಪ್ಪಿಸುವುದು ಉತ್ತಮ. ಬೇರೆಯವರಿಗೆ ತೋರಿಸಿಕೊಳ್ಳಲು ಪಟಾಕಿ ಹಚ್ಚುವಾಗ ಅಪಾಯಕ್ಕೆ ಅವಕಾಶ ಕೊಡಬಾರದು.
ಪಟಾಕಿ ಹಚ್ಚುವಾಗ ಯಾವಾಗಲೂ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವುದು ಸುರಕ್ಷಿತ ಆಕಸ್ಮಿಕವಾಗಿ ಸುಟ್ಟಗಾಯಗಳಾದರೆ ಕೂಡಲೆ ತಣ್ಣೀರನ್ನು ಸುರಿಯಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸ್ನೇಹಿತರ ಜೊತೆ ಸೇರಿ ಸಾರ್ವಜನಿಕ ತೆರೆದ ಪ್ರದೇಶಗಳಲ್ಲಿ ಪಟಾಕಿ ಹಚ್ಚುವುದು ಸೂಕ್ತ. ಇದರಿಂದ ಎಲ್ಲರೂ ಸಂತೋಷಪಡಬುದು ಹಾಗೂ ಸುರಕ್ಷಿತವಾಗಿರುತ್ತದೆ.
ಪಟಾಕಿ ಹಚ್ಚುವಾಗ ಮಕ್ಕಳು, ವಯಸ್ಸಾದವರು, ಕಾಯಿಲೆ ಇರುವವರು ಹಾಗೂ ಪ್ರಾಣಿಗಳನ್ನು ಗಮನಿಸಿ ಅವರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಪ್ರಯತ್ನಿಸಿ. ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ಶಬ್ದ ಬರುವ ಪಟಾಕಿಗಳನ್ನು ಆಸ್ಪತ್ರೆ ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಬಳಸುವುದನ್ನು ತಪ್ಪಿಸಿ ಎಂದು ಪ್ರಕಟನೆ ತಿಳಿಸಿದೆ.







