ಸಾರ್ವತ್ರಿಕ ಆರೋಗ್ಯ ಸೇವೆ ಯೋಜನೆ ಪ್ರಾರಂಭ: ರಮೇಶ್ ಕುಮಾರ್

ಬೆಂಗಳೂರು, ಅ.4: ಸಾರ್ವತ್ರಿಕ ಆರೋಗ್ಯ ಸೇವೆ ಯೋಜನೆಯು ಒಂದು ಅಪೂರ್ವ ಯೋಜನೆಯಾಗಿದ್ದು, ಇಡೀ ರಾಜ್ಯದ ಎಲ್ಲ ಜನತೆಗೂ ಆರೋಗ್ಯ ಸೇವೆ ದೊರೆಯಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಪ್ರಸ್ತುತ ಇರುವ ಪದ್ಧತಿಯಲ್ಲಿ ಕೆಲವು ವಿಭಾಗದ ಫಲಾನುಭವಿಗಳಿಗೆ ಪ್ರತ್ಯೇಕವಾಗಿ ನಿಗದಿಪಡಿಸಿರುವ ಯೋಜನೆ ಅಡಿಯಲ್ಲಿ ಸೇವೆಗಳು ದೊರೆಯುತ್ತಿವೆ. ಪ್ರಸ್ತುತ ಯಾವುದೇ ಯೋಜನೆ ಅಡಿಯಲ್ಲಿ ಸೇವೆ ವಂಚಿತ ಜನತೆ, ವೈದ್ಯಕೀಯ ಸೇವೆಯ ನೆರವಿಗಾಗಿ ಸಾಕಷ್ಟು ಕೋರಿಕೆ ಹಾಗೂ ಬೇಡಿಕೆಗಳನ್ನು ನಮ್ಮಿಂದ ಬಯಸುತ್ತಿದ್ದಾರೆ. ಆದುದರಿಂದ, ಸಾರ್ವತ್ರಿಕ ಆರೋಗ್ಯ ಸೇವೆ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಇಡೀ ಜನಸಂಖ್ಯೆ ಸುಮಾರು 6.5 ಕೋಟಿಯಷ್ಟಿದ್ದು, ಶೇ.94ರಷ್ಟು ಜನಸಂಖ್ಯೆಯನ್ನು ಆಧಾರ್ಗೆ ಹೊಂದಿಸಲಾಗಿದೆ. ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಾರ್ಡುಗಳು ಅತ್ಯವಶ್ಯಕವಾಗಿವೆ. ಕಾರ್ಡುಗಳು ಇಲ್ಲದಿದ್ದರೆ ಫಲಾನುಭವಿಗಳು ಯೋಜನೆಯ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಸುಮಾರು 32 ಸಾವಿರ ಆಶಾ ಕಾರ್ಯಕರ್ತೆಯರ ಸೇವೆಯನ್ನು ಟ್ಯಾಬ್ ಒದಗಿಸುವ ಮೂಲಕ ಅಂಕಿ ಅಂಶಗಳ ನಿರ್ವಹಣೆಗಾಗಿ ಬಳಸಿಕೊಳ್ಳಲು ಸರಕಾರದ ಉದ್ದೇಶವಾಗಿತ್ತು. ಟ್ಯಾಬ್ಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸಲು ಮತ್ತು ಟ್ಯಾಬ್ಗಳ ಖರೀದಿ ದುಬಾರಿಯಾಗಿರುವುದರಿಂದ ಟ್ಯಾಬ್ಗಳನ್ನು ಹೆಸರಾಂತ ಕಂಪನಿಗಳಿಂದ ಬಾಡಿಗೆಗೆ ಪಡೆದು ಆಶಾ ಕಾರ್ಯಕರ್ತೆಯರಿಗೆ ನೀಡಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಎಲ್ಲ ನಾಗರಿಕರಿಗೂ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ತ್ವರಿತವಾಗಿ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸಾರ್ವತ್ರಿಕ ಆರೋಗ್ಯ ಸೇವಾ ಯೋಜನೆಯು ಅಪೂರ್ವ ಕಾರ್ಯಕ್ರಮವಾಗಿದ್ದು, ಇಡೀ ದೇಶದಲ್ಲಿಯೆ ಪ್ರಪ್ರಥಮವಾಗಿದೆ. ಇಂತಹ ಸಂದರ್ಭದಲ್ಲಿ ಪೂರೈಕೆದಾರರು ಮತ್ತು ವ್ಯಾಪಾರಿಗಳು ಈ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದಾರೆ. ಈ ಕಾರಣಗಳಿಂದ ನಿರಾಸೆಗೊಂಡ ವ್ಯಾಪಾರಿಗಳು ವಿಶಾಲ ಹೃದಯವಿಲ್ಲದೆ ಪ್ರಸ್ತಾವನೆಯನ್ನು ಪ್ರಶಂಸಿಸಿರುವುದಿಲ್ಲ. ಅಲ್ಲದೆ, ಕಾರ್ಯಕ್ರಮ ಅನುಷ್ಠಾನಗೊಳಿಸುವಿಕೆಯಲ್ಲಿ ತಪ್ಪುಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಗಮನಕ್ಕೆ ತರದೆ ಪ್ರಸ್ತಾವನೆಯ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾಗಿದೆ. ಈ ರೀತಿ ಯಾವತ್ತೂ ಆಗಿಲ್ಲ ಹಾಗೂ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಆರೋಗ್ಯ ಸಚಿವರು ಕಾನೂನಿನ ಪರಿಮಿತಿಯಲ್ಲಿ ಸಂಪೂರ್ಣ ನ್ಯಾಯಯುತವಾಗಿ ಕೆಲಸ ನಿರ್ವಹಿಸುತ್ತಿದ್ದು, ಯಾವುದೇ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಈಗ ಪ್ರಾರಂಭಿಸಿರುವ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಇದ್ದಲ್ಲಿ, ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದ್ದರೆ ನಾನು ಅದನ್ನು ಸರಿಪಡಿಸಿಕೊಳ್ಳಲು ಸದಾ ತೆರೆದ ಮನಸ್ಸಿನಿಂದ ಸಿದ್ಧನಿರುತ್ತೇನೆ. ರಾಜ್ಯ ಸರಕಾರವು ಪ್ರಾಮಾಣಿಕವಾಗಿ ಮಾಡುತ್ತಿರುವ ಕೆಲಸಕ್ಕೆ ಸಂಕುಚಿತ ಮನೋಭಾವವನ್ನು ತೊರೆದು ನಾವು ಕೈಗೊಂಡಿರುವ ಪ್ರಾಮಾಣಿಕ ಕೆಲಸಕ್ಕೆ ಸಹಕಾರ ನೀಡಬೇಕೆಂದು ರಮೇಶ್ಕುಮಾರ್ ಮನವಿ ಮಾಡಿದ್ದಾರೆ.
39 ಹಿಂದುಳಿದ ತಾಲೂಕುಗಳಲ್ಲಿ ಮಾತೃ ಪುಷ್ಠಿವರ್ಧಿನಿ ಯೋಜನೆಗೆ ಚಾಲನೆ: ಮಾತೃ ಪುಷ್ಠಿವರ್ಧಿನಿ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯವರು ಪ್ರಧಾನವಾಗಿ ವಾಸಿಸುತ್ತಿರುವ 39 ಹಿಂದುಳಿದ ತಾಲೂಕುಗಳಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪ್ರತಿದಿನ 5 ಗ್ರಾಂ ಮೈಕ್ರೋ ನ್ಯೂಟ್ರಿಯೆಂಟ್ ಗ್ರಾನ್ಯೂಲ್ಸ್ಗಳನ್ನು ನೀಡುವ ಯೋಜನೆಯಾಗಿದ್ದು, ಈ ಯೋಜನೆಗೆ 10 ಕೋಟಿ ರೂ.ಹಣವನ್ನು ನಿಗದಿಪಡಿಸಲಾಗಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಮೊದಲನೆ ಸುತ್ತಿನ ಟೆಂಡರ್ನಲ್ಲಿ 4 ಬಿಡ್ಗಳನ್ನು ಸ್ವೀಕರಿಸಲಾಗಿದ್ದು, ಯಾರೊಬ್ಬರು ಟೆಂಡರ್ ಷರತ್ತುಗಳನ್ನು ಪೂರೈಸದೆ ಇರುವುದರಿಂದ ಈ ಎಲ್ಲ 4 ಬಿಡ್ಗಳನ್ನು ತಿರಸ್ಕರಿಸಲಾಗಿದೆ. ಎರಡನೆ ಸುತ್ತಿನ ಟೆಂಡರ್ನಲ್ಲಿ 4 ಬಿಡ್ಗಳನ್ನು ಸ್ವೀಕರಿಸಿದ್ದು, ಟೆಂಡರ್ ಷರತ್ತುಗಳನ್ನು ಪೂರೈಸದ ಎರಡು ಬಿಡ್ಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.
ಯುನಿಸೆಫ್ ಷರತ್ತುಗಳ ಪ್ರಕಾರ ವಿಶೇಷ ಬಳಕೆಯ ಆಹಾರ ಧಾನ್ಯಗಳನ್ನು ಉತ್ಪಾದಿಸಲು ಸಂಬಂಧಿಸಿದ ಸಂಸ್ಥೆಯವರು ಎಫ್ಎಸ್ಎಸ್ಎಐ (F.S.S.A.I) ನಿಂದ ಪರವಾನಿಗೆ ಪಡೆಯಬೇಕಾಗಿದೆ. ಮೆಹೆಕ್ಸಗಾನ್ ಸಂಸ್ಥೆಯವರು ಪರವಾನಿಗೆಯನ್ನು ಸಲ್ಲಿಸಲು ವಿಫಲರಾಗಿರುವ ಕಾರಣ ಈ ಬಿಡ್ನ್ನು ತಿರಸ್ಕರಿಸಲಾಗಿದೆ ಎಂದಿದ್ದಾರೆ.
ಅಂತಿಮವಾಗಿ ತಾಂತ್ರಿಕ ಪರಿಶೀಲನೆಯಲ್ಲಿ ಮೆ:ಫಾರ್ಮಾವೇದ ಸಂಸ್ಥೆಯ ಬಿಡ್ಡರ್ ಒಬ್ಬರೆ ಅರ್ಹರಾಗಿರುತ್ತಾರೆ. 2015-16ರಲ್ಲಿ ಈ ಸಂಸ್ಥೆಯು ಮಹಾರಾಷ್ಟ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಇದೇ ಉತ್ಪನ್ನಗಳನ್ನು 187.75 ರೂ.ಗಳಿಗೆ ಸರಬರಾಜು ಮಾಡಿದ್ದಾರೆ. ಆ ವೇಳೆಯಲ್ಲಿ ಶೇ.5ರಷ್ಟು ವ್ಯಾಟ್ ದರ ಇತ್ತು. ಈಗ ಪ್ರಸ್ತುತ ಶೇ.18ರಷ್ಟು ಜಿ.ಎಸ್.ಟಿ. ತೆರಿಗೆಯನ್ನು ಬಿಡ್ಡರ್ ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಇಲಾಖೆಯು ಈ ಉತ್ಪನ್ನಗಳನ್ನು 130 ರೂ.ಹಾಗೂ ಜಿಎಸ್ ಟಿ ಸೇರಿ ಸುಮಾರು 153 ರೂ.ಗಳಿಗೆ ಸರಬರಾಜು ಮಾಡಲು ಮೆ:ಫಾರ್ಮಾವೇದ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದೆ. ಇಲಾಖೆಯು ಸೂಚಿಸಿರುವ 153 ರೂ.ಗಳನ್ನು ಬಿಡ್ದಾರ ಸಂಸ್ಥೆಯವರು ಇನ್ನೂ ಅಂತಿಮ ಒಪ್ಪಿಗೆ ಸೂಚಿಸದಿರುವ ಕಾರಣ ಈ ಗುತ್ತಿಗೆಯನ್ನು ನೀಡಿಲ್ಲ. ಆದಕಾರಣ, ಅರೆಬರೆ ತಿಳುವಳಿಕೆಯಿಂದ ಮಿಥ್ಯಾರೋಪಮಾಡಿ ತೇಜೋವಧೆ ಮಾಡುವುದು ಸಂಸ್ಕಾರವಂತರ ಲಕ್ಷಣವಲ್ಲ ಎಂದು ರಮೇಶ್ಕುಮಾರ್ ಹೇಳಿದ್ದಾರೆ.







