ಮರಳು ವ್ಯವಸ್ಥೆ ಸೂಕ್ತ ಕ್ರಮಕ್ಕೆ ಕಟ್ಟಡ ಕಾರ್ಮಿಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
ಪುತ್ತೂರು, ಅ.8: ಮರಳು ಅಭಾವದಿಂದಾಗಿ ಕಟ್ಟಡ ಕಾರ್ಮಿಕರಿಗೆ ತೊಂದರೆಯಾಗಿದ್ದು, ದ.ಕ. ಜಿಲ್ಲೆಯಲ್ಲಿ ಮರಳು ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕಳೆದ 6 ತಿಂಗಳಿನಿಂದ ಮರಳು ಅಭಾವದಿಂದಾಗಿ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಪ್ರಕೃತಿದತ್ತವಾಗಿ ಸಿಗುತ್ತಿದ್ದ ಮರಳು ಪಡೆಯಲು ಸರಕಾರ ವಿಧಿಸಿರುವ ಕಾನೂನುಗಳಿಂದಾಗಿ ಮರಳಿನ ಕೃತಕ ಅಭಾವ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮರಳಿಗೆ ಸಂಬಂಧಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಮರ್ಪಕವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಸಂತ್ರಸ್ತರು ಮರಳಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗಿರುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯ ಪ್ರತಿಯನ್ನು ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೂ ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ನಿಯೋಗದಲ್ಲಿ ಸಂಘದ ಗೌರವ ಅಧ್ಯಕ್ಷ ಬಿ. ಪುರಂದರ ಭಟ್, ಅಧ್ಯಕ್ಷ ಅಶ್ರಫ್ ಪಡ್ಡಾಯೂರು, ಗೌರವ ಸಲಹೆಗಾರ ಕೆ.ಜಯರಾಮ ಕುಲಾಲ್, ಸಲಹೆಗಾರರಾದ ರವೀಂದ್ರ ಪೂಜಾರಿ ಸಂಪ್ಯ, ಶೇಷಪ್ಪಕುಲಾಲ್, ಉಪಾಧ್ಯಕ್ಷ ವಿಶ್ವನಾಥ ಬೆಳ್ಳಿಪ್ಪಾಡಿ, ಚೆನ್ನಪ್ಪ ಮೂಲ್ಯ ಮಚ್ಚಿಮಲೆ, ಕೋಶಾಧಿಕಾರಿ ರಾಜೇಶ್ ಮುಕ್ವೆ ಮತ್ತಿತರರು ಉಪಸ್ಥಿತರಿದ್ದರು.