ಕಸಾಪದಿಂದ ಮಹಾದೇವಯ್ಯರ ಕಡೆಗಣನೆ: ಡಾ.ಚಿದಾನಂದಮೂರ್ತಿ ಬೇಸರ

ಬೆಂಗಳೂರು, ಅ.8: ಕನ್ನಡ ನಿಘಂಟು ತಜ್ಞ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಪ್ರೊ.ಟಿ.ಆರ್.ಮಹಾದೇವಯ್ಯ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕಡೆಗಣಿಸಿರುವುದು ಸರಿಯಾದುದಲ್ಲ ಎಂದು ಹಿರಿಯ ಸಂಶೋಧಕ ಡಾ. ಚಿದಾನಂದಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ವಚನ ಜ್ಯೋತಿ ಬಳಗದಿಂದ ಆಯೋಜಿಸಿದ್ದ ನಿಘಂಟು ತಜ್ಞ, ಹಿರಿಯ ವಿದ್ವಾಂಸ ಪ್ರೊ.ಟಿ.ಆರ್.ಮಹಾದೇವಯ್ಯ ಅವರಿಗೆ ವಚನ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಿಘಂಟು ರಚನೆಯಲ್ಲಿ ಸೇವೆ ಸಲ್ಲಿಸಿರುವ ಮಹಾದೇವರಯ್ಯ ನಿಧನರಾದ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ಕನಿಷ್ಠ ಪಕ್ಷ ಸಂತಾಪವನ್ನು ಸೂಚಿಸಲಿಲ್ಲ. ಇದು ಸಾಹಿತ್ಯ ಕ್ಷೇತ್ರಕ್ಕೆ ಮಾಡಿದ ಅಪಮಾನ ಎಂದು ದೂರಿದರು.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ತಪ್ಪನ್ನು ಅರಿತುಕೊಂಡು ಸಣ್ಣ ಮಟ್ಟದ ಸಂತಾಪ ಸಮಾರಂಭ ನಡೆಸುವುದರ ಬದಲಿಗೆ, ಅರ್ಥ ಪೂರ್ಣವಾದ ವಿಚಾರಗೋಷ್ಠಿ ನಡೆಸಬೇಕು. ಈ ಮೂಲಕ ಮಹಾದೇವಯ್ಯರ ವಿಚಾರಧಾರೆಗಳನ್ನು, ಅವರ ಕೊಡುಗೆಗಳನ್ನು ಸಮಾಜಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಮಹಾದೇವಯ್ಯ ಬರೆದ ಚಿಂತನಾ-76 ಕೃತಿಯಲ್ಲಿ ಧರ್ಮದ ಪರಿಕಲ್ಪನೆ, ಆಧುನಿಕ ಕಾಲದ ಮದುವೆ ಸ್ಥಿತಿ-ಗತಿ, ತಾಯಿಯ ಮಮತೆ ಕುರಿತು ಅತ್ಯಂತ ಸರಳವಾದ ಭಾಷೆಯಲ್ಲಿ ಸಾಹಿತ್ಯ ರಚಿಸಿರುವುದು ಅವರ ಬರವಣಿಗೆ ಶೈಲಿಯನ್ನು ತಿಳಿಸುತ್ತದೆ. ಎಲ್ಲರಿಗೂ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ನಿನ್ನೆ, ಇಂದು-ನಾಳೆ ಪರಿಕಲ್ಪನೆಯನ್ನು ಅವರ ಬರಹದ ಮೂಲಕ ತಿಳಿಸಿದ್ದಾರೆ ಎಂದರು.
ಬೇಲಿಮಠದ ಶಿವರುದ್ರಸ್ವಾಮಿ ಮಾತನಾಡಿ, ನಾವು ಬದುಕುತ್ತಿರುವ ವ್ಯವಸ್ಥೆ ಹೇಗಿದೆ, ಅದು ಹೇಗಿರಬೇಕು ಎಂಬ ಅಂತರ್ ಲಕ್ಷವನ್ನಿಟ್ಟುಕೊಂಡು ಬದುಕುವುದು ಸಾರ್ಥಕ ಜೀವನ. ಅದೇ ರೀತಿ ಪ್ರೊ.ಟಿ.ಆರ್.ಮಹಾದೇವಯ್ಯ ಒಂದು ಗುರಿಯನ್ನಿಟ್ಟುಕೊಂಡು ಅದಕ್ಕಾಗಿ ದುಡಿದ ವ್ಯಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಜೀವನ ಒಂದು ಶಾಲೆಯಿದ್ದಂತೆ. ನಾವಿಲ್ಲಿ ಹಲವು ಪಾಠಗಳನ್ನು ಕಲಿಯುತ್ತೇವೆ, ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸುತ್ತೇವೆ. ಆದರೆ, ಬದುಕಿನ ಪರೀಕ್ಷೆಯಲ್ಲಿ ನಾವು ಹೇಗೆ ಮುಂದುವರಿಯುತ್ತವೆ ಎನ್ನುವುದರ ಮೇಲೆ ನಮ್ಮ ಫಲಿತಾಂಶ ನಿರ್ಧಾರವಾಗಿರುತ್ತದೆ ಎಂದ ಅವರು, ಅಕ್ಷರ ಎಂಬುದು ಕಲಿಕೆಯಷ್ಟೇ ಅಲ್ಲ. ಬದುಕಿನಲ್ಲಿ ಯಾವುದು ನಶ್ವರ ಮತ್ತು ಶಾಶ್ವತ ಎಂದೆನಿಸುತ್ತದೆಯೋ ಅದನ್ನು ತಿಳಿಸುತ್ತದೆ ಎಂದು ಹೇಳಿದರು.
ನಮ್ಮ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ, ಅವಮಾನ, ನೋವು, ಸಂತೋಷ ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ, ನಿಷ್ಕಲ್ಮಷವಾದ ಮನಸ್ಸಿನಿಂದ ಜೀವನ ನಡೆಸುವವರು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರೊ.ಟಿ.ಆರ್.ಮಹಾದೇವಯ್ಯ ನಡೆದುಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಸರಕಾರಿ ಅಧಿಕಾರಿ ಜಯವಿಭವಸ್ವಾಮಿ, ತುಮಕೂರು ವಿವಿ ಕುಲಸಚಿವ(ವೌಲ್ಯಮಾಪನ) ಡಾ.ಡಿ.ವಿ.ಪರಶಿವಮೂರ್ತಿ, ಕಿರುತೆರೆ ನಟ ಶಿವಕುಮಾರಾರಾಧ್ಯ, ಬಸವ ವಿದ್ಯಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಎಚ್.ವಿ.ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.







