ಪ್ರತಿಭಾಕಾರಂಜಿ, ಕಲೋತ್ಸವ ಕಾರ್ಯಕ್ರಮ: ಮಕ್ಕಳ ಕೈಯಲ್ಲಿ ಅರಳಿದ ಕಲೆ

ಮಡಿಕೇರಿ, ಅ.8: ಅಲ್ಲಿ ನವಿಲು, ಆಮೆ, ಮೊಸಳೆ, ಚಿಟ್ಟೆ, ತಾಜ್ಮಹಲ್, ಆನೆ, ಮನೆ, ಗಣಪತಿ, ಮೊಸಳೆ, ಚಿಟ್ಟೆ, ತಾಜ್ಮಹಲ್, ಆನೆ, ಮನೆ, ಗಣಪತಿ.ಹೀಗೆ ಹತ್ತಾರು ಕಲಾಕೃತಿಗಳು ಮಣ್ಣಿನಲ್ಲಿ ಅರಳಿದ್ದವು. ಜತೆಗೆ, ಛದ್ಮವೇಷದಲ್ಲಿ ಮಕ್ಕಳು ಸಂಭ್ರಮಿಸಿದರು.
ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಕಂಡುಬಂದವು.
ಪುಟ್ಟ ಮಕ್ಕಳಿಂದ ದೊಡ್ಡ ಮಕ್ಕಳವರೆಗೂ ಕೃಷ್ಣನ ವೇಷ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಜೋಕರ್, ರಾವಣ, ವೆಂಕಟರಮಣ, ಭೂತದ ಕೋಲ, ಶಿಲಾಬಾಲಿಕೆ, ಏಕಲವ್ಯ ವೇಷಗಳನ್ನು ತೊಟ್ಟು ಅಲ್ಲಿ ನೆರೆದಿದ್ದವರನ್ನು ರಂಜಿಸಿದರು.
ಹಿಂದಿ, ಇಂಗ್ಲಿಷ್, ಕನ್ನಡ ಕಂಠಪಾಠ, ಕೋಲಾಟ, ರಂಗೋಲಿ ಸ್ಪರ್ಧೆ, ಜಾನಪದ ನೃತ್ಯ, ಛದ್ಮವೇಷ, ನಾಟಕ, ದೃಶ್ಯ ಕಲೆ, ಆಶುಭಾಷಣ ಸ್ಪರ್ಧೆಮುಂತಾದ ಸ್ಪರ್ಧೆಗಳು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮೀ, ಬಹುಮಾನ ಬರಲಿ, ಬಾರದಿರಲಿ ವೇದಿಕೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೊರಹಾಕುವಲ್ಲಿ ಅವಕಾಶಗಳನ್ನು ಪಡೆಯುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘದ ಅಧ್ಯಕ್ಷ ಪಿ.ಎಸ್. ಜರ್ನಾದನ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಕೆ. ಮೆಹಬೂಬ್ ಸಾಬ್, ಪ್ರಮುಖರಾದ ಮೃತ್ಯುಂಜಯ, ನಾಗಯ್ಯಶೆಟ್ಟಿ, ಮಹದೇವ್ ಉಪಸ್ಥಿತರಿದ್ದರು.







