ಮೇರಿಹಿಲ್ನಲ್ಲಿರುವ ವಸತಿ ಸಮುಚ್ಚಯಕ್ಕೆ ಮೇಯರ್ ದಾಳಿ
ನೀರಿನ ಸಂಪರ್ಕ ಕಡಿತ
ಮಂಗಳೂರು, ಅ. 9: ಮೇರಿಹಿಲ್ನಲ್ಲಿರುವ ವಸತಿ ಸಮುಚ್ಚಯವೊಂದರಿಂದ ತ್ಯಾಜ್ಯ ನೀರು ಡ್ರೆನೇಜ್ ಮೂಲಕ ಹಾದುಹೋಗದೆ ಸ್ಥಳೀಯವಾಗಿ ಹೊರ ಸೂಸುತ್ತಿದೆ ಎಂದು ಆರೋಪಿಸಿ ಬಂದ ದೂರಿನ ಹಿನ್ನೆಲೆಯಲ್ಲಿ ಮೇಯರ್ ಕವಿತಾ ಸನಿಲ್ ಅವರು ಸೋಮವಾರ ಮನಪಾ ಅಧಿಕಾರಿಗಳೊಂದಿಗೆ ಕಟ್ಟಡಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಮೇರಿಹಿಲ್ನಲ್ಲಿರುವ ವೆಲೆಂಕಣಿ ವಸತಿ ಸಮುಚ್ಚಯಕ್ಕೆ ಈ ದಾಳಿ ನಡೆಸಿದ್ದಾರೆ. ಈ ವಸತಿ ಸಮುಚ್ಚಯದಲ್ಲಿ 24 ಫ್ಲಾಟ್ಗಳಿದ್ದು, ಈ ಫ್ಲಾಟ್ಗಳ ತ್ಯಾಜ್ಯ ನೀರು ಸಾರ್ವಜನಿಕವಾಗಿ ಬಿಡಲಾಗುತ್ತಿದೆ. ಈ ನೀರಿನಿಂದ ಹೊರಸೂಸುವ ಗಬ್ಬು ವಾಸನೆಯಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.
ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಕಟ್ಟಡ ಕಟ್ಟಲು ಮಾತ್ರ ಪರವಾನಿಗೆ ಪಡೆದಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಗ್ಗೆ ಪರವಾನಿಗೆ ಪಡೆದಿಲ್ಲ ಎಂಬುದು ಗೊತ್ತಾಗಿದೆ. ಕಟ್ಟಡದ ಕಂಪ್ಲಿಷನ್ ಸರ್ಟಿಫಿಕೇಟ್ ಇಲ್ಲದೆ ಆ ಕಟ್ಟಡದಲ್ಲಿರುವ ಯಾವ ಮನೆಗಳಿಗೂ ಪಾಲಿಕೆಯಿಂದ ಡೋರ್ ನಂಬರ್ ಲಭಿಸಿಲ್ಲ. ಇದೀಗ ಈ ಕಟ್ಟಡದಲ್ಲಿರುವ ಮನೆಗಳಿಗೆ ಅಕ್ರಮವಾಗಿ ನೀರು ಸಂಪರ್ಕ ಪಡೆಯಲಾಗಿದ್ದು, ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಕವಿತಾ ಸನಿಲ್ ಹೇಳಿದರು.