ಪ್ರೀತಿ ವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಹುದು: ಸಚಿವ ರಮಾನಾಥ ರೈ
ಸುಳ್ಯ: ಅನ್ಸಾರ್ ಸುವರ್ಣ ಸಂಭ್ರಮದ ಲಾಂಛನ ಅನಾವರಣ
ಸುಳ್ಯ, ಅ.9: ಪ್ರೀತಿ ವಿಶ್ವಾಸದಿಂದ ಇಡೀ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಈ ಪ್ರಪಂಚದಲ್ಲಿ ಧರ್ಮವನ್ನು ಸ್ಥಾಪಿಸಿದ ಪುಣ್ಯಪುರುಷರು ತೋರಿಸಿಕೊಟ್ಟಿದ್ದಾರೆ. ದ್ವೇಷದಿಂದ ಒಬ್ಬನನ್ನೂ ಸೋಲಿಸಲು ಸಾಧ್ಯವಿಲ್ಲ. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಾನವೀಯತೆ, ಪರಸ್ಪರ ಸಹಕಾರ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ದಿಸೆಯಲ್ಲಿ ಅನ್ಸಾರ್ ಮುಸ್ಲಿಮೀನ್ ಅಸೋಸಿಯೆಶನ್ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಕರ್ನಾಟಕ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಶುಭ ಹಾರೈಸಿದರು.
ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ನ 50ನೆ ವರ್ಷಾಚರಣೆ ಪ್ರಯುಕ್ತ ಗೋಲ್ಡನ್ ಜುಬಿಲಿ ಲಾಂಛನವನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಕೆ.ಎಂ.ಮುಸ್ತಫ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಗೇರು ನಿಗಮ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್.ಸಂಶುದ್ದೀನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಕರೀಂ, ರಾಜ್ಯ ಕೆಪೆಕ್ ನಿರ್ದೇಶಕ ಪಿ.ಎ. ಮಹಮ್ಮದ್ ಮೊದಲಾದವರು ಭಾಗವಹಿಸಿದ್ದರು.
ಗಾಂಧಿನಗರ ಜುಮಾ ಮಸೀದಿ ಸಹಾಯಕ ಖತೀಬರಾದ ಅಲ್ಹಾಜ್ ಶೌಖತ್ ಅಲಿ ಅಮಾನಿ ದುವಾ ನೆರವೇರಿಸಿದರು. ಸಂಸ್ಥೆಯ ಪೂರ್ವಾಧ್ಯಕ್ಷರುಗಳಾದ ಹಾಜಿ ಅಬ್ಬಾಸ್ ಕಟ್ಟೆಕ್ಕಾರ್ಸ್, ಹಾಜಿ ಮಹಮ್ಮದ್ ಬುಶ್ರಾ, ಹಾಜಿ ಹಮೀದ್ ಜನತಾ, ಹಾಜಿ ಐ.ಇಸ್ಮಾಯಿಲ್, ಪದಾಧಿಕಾರಿಗಳಾದ ಲತೀಫ್ ಹರ್ಲಡ್ಕ, ಮಜೀದ್ ಜನತಾ, ಟಿ.ಎಂ. ಖಾಲಿದ್, ಎಸ್.ಎಂ.ಎ. ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಇಬ್ರಾಹಿಂ ಸಖಾಫಿ ಪುಂಡೂರು ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಕೆ.ಎಂ. ಮುಸ್ತಫಾ ಸ್ವಾಗತಿಸಿ, ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಸ್ತಾವನೆಗೈದರು.