ನೀರು ಪೂರೈಕೆಯಲ್ಲಿ ವ್ಯತ್ಯಯ : ಪುರಸಭಾ ಕಚೇರಿಯ ಬಾಗಿಲು ಮುಚ್ಚಿ ಸದಸ್ಯರ ಪ್ರತಿಭಟನೆ
ಕಾರ್ಕಳ, ಅ.10: ಕಳೆದ ಐದು ದಿನಗಳಿಂದ ಬಂಗ್ಲೆಗುಡ್ಡೆ 1ನೆ ವಾರ್ಡ್ಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಆದ್ದರಿಂದ ನೀರು ಬಿಡುವ ಸಿಬ್ಬಂದಿಯನ್ನು ಬದಲಾಯಿಸುವಂತೆ ಪುರಸಭಾ ಸದಸ್ಯ ಮುಹಮ್ಮದ್ ಶರೀಫ್ ಮಂಗಳವಾರ ಕಾರ್ಕಳ ಪುರಸಭಾ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಒಂದು ವಾರದಿಂದ ಪುರಸಭೆ ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲಸದ ಅವಧಿಯಲ್ಲಿ ಮದ್ಯಪಾನಿಯಾಗಿ ಸುತ್ತಾಡುತ್ತಿರುತ್ತಾರೆ. ಇದರಿಂದ ವಾರ್ಡ್ನ ಜನತೆಗೆ ತೊಂದರೆಯಾಗಿದೆ ಎಂದು ಶರೀಫ್ ದೂರಿದರು.
ನೀರು ಬಿಡುವ ಸಿಬ್ಬಂದಿಯನ್ನು ಬದಲಾಯಿಸಲು ಆಗ್ರಹಿಸಿ ಶರೀಫ್ ಅವರು ಪುರಸಭಾ ಕಚೇರಿಯ ಮುಂಬಾಗಿಲು ಮುಚ್ಚಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಪುರಸಭೆಯ ಸಿಬ್ಬಂದಿ ಕಚೇರಿಯೊಳಗೆ ಸಿಲುಕಿಕೊಳ್ಳುವಂತಾಗಿತ್ತು.
ನೀರು ಪೂರೈಸಲು ಕ್ರಮ: ನೀರು ಪೂರೈಕೆ ಸಿಬ್ಬಂದಿ ಮದ್ಯ ಸೇವಿಸುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಮುಖ್ಯಾಧಿಕಾರಿಯ ಗಮನಕ್ಕೆ ತಂದಿದ್ದೇನೆ. ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾಧ್ಯಕ್ಷೆ ಅನಿತಾ ಅಂಚನ್ ತಿಳಿಸಿದ್ದಾರೆ.