ಟಿ.ವಿ. ಚಾನೆಲ್ಗಳಿಂದಾಗಿ ಬದುಕಿನ ಸೂಕ್ಷ್ಮ ಸಂವೇದನೆ ಕಳೆದುಕೊಳ್ಳಬೇಕಾದೀತು: ಡಾ.ನಿಸಾರ್ ಅಹಮದ್
ಮಂಗಳೂರು, ಅ.11: ಕೆಲವು ಟಿ.ವಿ. ಚಾನೆಲ್ಗಳು ಟಿ.ಆರ್.ಪಿ.ಗಾಗಿ ಹಲವು ದೃಶ್ಯಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತವೆ. ಇಂತಹ ಚಾನೆಲ್ಗಳ ವೀಕ್ಷಣೆಯಿಂದ ನಮ್ಮ ಬದುಕಿನ ಸೂಕ್ಷ್ಮ ಸಂವೇದನೆಗಳೇ ನಮ್ಮಿಂದ ದೂರವಾಗುವ ದಿನಗಳು ಎದುರಾಗಬಹುದು ಎಂದು ಕವಿ, ಸಾಹಿತಿ ನಾಡೋಜ ಡಾ.ನಿಸಾರ್ ಅಹಮದ್ ಎಚ್ಚರಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿಂದು ವಿದ್ಯಾರ್ಥಿಗಳೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಔದಾರ್ಯ, ಸಾಮಾಜಿಕ ಕಳಕಳಿ, ನೈತಿಕ ಮಟ್ಟವನ್ನು ವೃದ್ಧಿಪಡಿಸುವ ಆಚಾರ-ವಿಚಾರಗಳು ನಮ್ಮ ದೇಶಕ್ಕೆ ಅಗತ್ಯವಿದೆ. ಮನಸ್ಸು ಮನಸ್ಸುಗಳ ನಡುವೆ ಅಕ್ಕರೆಯ ಸೇತುವೆ ಬೆಸೆಯುವ ಕೆಲಸ ಆಗಬೇಕಾಗಿದೆ. ಧರ್ಮ, ಜಾತಿ, ಮಣ್ಣು ನಮ್ಮ ಸಂಬಂಧಗಳಿಗೆ ಅಡ್ಡಿಯಾಗಬಾರದು. ಕುವೆಂಪುರವರ ವಿಶ್ವ ಮಾನವ ಸಂದೇಶ ನಮಗೆ ಅಗತ್ಯವಾಗಿದೆ. ಮನುಷ್ಯ ಪ್ರಾಣಿಯಾಗದೆ ನರೋತ್ತಮನಾಗಬೇಕು ಎಂದು ನಿಸಾರ್ ಅಹಮ್ಮದ್ ನುಡಿದರು.
ಒಬ್ಬ ಶಿಕ್ಷಕ ಉತ್ತಮ ಶಿಕ್ಷಕನಾಗಬೇಕಾದರೆ ಆತನಿಗೆ ಓದು ಮುಖ್ಯ. ಜ್ಞಾನ ಭಂಡಾರ ಹೆಚ್ಚಿದ್ದಷ್ಟುಆತ ಇತರರಿಗೆ ಮಾದರಿ ಶಿಕ್ಷಕನಾಗಬಹುದು. ವಿದ್ಯಾರ್ಥಿಗಳಲ್ಲಿ ನೈತಿಕ ವೌಲ್ಯಗಳನ್ನು ಬೆಳೆಸುವ ಮುಖ್ಯ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಆ ವೌಲ್ಯಗಳನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ರಂತಹ ಶಿಕ್ಷಕರ ಅಗತ್ಯ ಈ ದೇಶಕ್ಕಿದೆ. ನಾನು 35 ವರ್ಷ ಭೂವಿಜ್ಞಾನದ ಪಾಠ ಮಾಡಿದ್ದೇನೆ. ಈ ನಡುವೆ ಸಾಹಿತ್ಯದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಈ ವೇಳೆ ವೃತ್ತಿ ಮತ್ತು ಪ್ರವೃತ್ತಿ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ನನಗೆ ಸಾಧ್ಯವಾಗಿದೆ ಎಂದು ಅವರು ನುಡಿದರು.
ಮಾಲ್ ಬಜಾರ್ಗಳಲ್ಲಿ ತಿರುಗುವ ಯುವಕರು:
ಈಗಿನ ತಲೆಮಾರಿನವರು ತಮ್ಮ ಹೆಚ್ಚಿನ ಸಮಯವನ್ನು ಮಾಲ್ಗಳಲ್ಲಿ, ಬಝಾರ್ಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ನಾನು ಬೆಳೆದ ವಾತವರಣ ಭಿನ್ನವಾಗಿತ್ತು. ಲಾಲ್ ಭಾಗ್ ಬಳಿಯ ಪಾಕೃತಿಕ ವಾತವರಣದಲ್ಲಿ ಹೆಚ್ಚು ಕಾಲ ಕಳೆಯಲು ಅವಕಾಶ ಇತ್ತು.ಅದು ನನ್ನಲ್ಲಿ ಹೊಸ ಚಿಂತನೆಗೆ ಸ್ಫೂರ್ತಿ ನೀಡುತ್ತಿತ್ತು. ನಮಗೆ ಸಾಧ್ಯವಾಗುವಷ್ಟು ಹೊತ್ತು ಪ್ರಾಕೃತಿಕ ಸಂಪರ್ಕ ಹೆಚ್ಚು ಹೊಂದಿದಷ್ಟು ಅಲ್ಲಿ ನಮ್ಮ ಸಮಯ ಕಳೆದಷ್ಟು , ನಮ್ಮನ್ನು ಈ ರೀತಿಯ ವಾತವರಣಕ್ಕೆ ಒಡ್ಡಿಕೊಂಡರೆ ಏಕಾಂತತೆ, ಚಿಂತನೆಗೆ ಸಹಕಾರಿ ಎಂದು ನಿಸಾರ ಅಹಮ್ಮದ್ ನುಡಿದರು.
ಕಾವ್ಯ ಹೆಚ್ಚು ತೃಪ್ತಿ ನೀಡಿದೆ:
ನಾನು ಸಾಹಿತ್ಯದ ವಿವಿಧ ಪ್ರಕಾರದಲ್ಲಿ 33 ಕೃತಿಗಳನ್ನು ರಚಿಸಿದ್ದರೂ ಕಾವ್ಯ ರಚನೆ ಹೆಚ್ಚು ಸಂತಸ ನೀಡಿದೆ. ಸರಳತೆ ಕವಿಗೆ ಮುಖ್ಯ ಸರಳತೆಯಿಲ್ಲದ ವ್ಯಕ್ತಿ ದೊಡ್ಡ ಕವಿಯಾಗಲಾರ ಎಂದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ದಿವಾಕರ ಶೆಟ್ಟಿ, ಉಪನ್ಯಾಸಕ ಡಾ.ಕುಮಾರಸ್ವಾಮಿ, ಮಂಜುಳಾ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.