ರಾಷ್ಟ್ರ ಮಟ್ಟದ ಕರಾಟೆ ಉದ್ಘಾಟನೆಗೆ ಮುಖ್ಯಮಂತ್ರಿಗೆ ಆಹ್ವಾನ
ನ. 4-5ರಂದು ನೆಹರೂ ಮೈದಾನದಲ್ಲಿ ಸ್ಪರ್ಧೆ
ಮಂಗಳೂರು, ಅ. 11: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ (ಎಸ್ಡಿಎಸ್ಐಕೆ) ಮಂಗಳೂರು ಡೊಜೊ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಇಂಡಿಯನ್ ಕರಾಟೆ ಚಾಂಪಿಯನ್ಶಿಪ್-2017 ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ನ. 4 ಮತ್ತು 5ರಂದು ಆಯೋಜಿಸಲಾಗಿದ್ದು, ಇದರ ಉದ್ಘಾಟನೆಗೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮಂಗಳೂರು ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ಕರಾಟೆ ಸಂಘಟಕರು ಬೆಂಗಳೂರಿನಲ್ಲಿ ಭೇಟಿಯಾಗಿ ಆಹ್ವಾನ ನೀಡಿದರು.
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಪಂದ್ಯಾಟ ಆಯೋಜಿಸಲಾಗಿದ್ದು, ತೆರೆದ ಕ್ರೀಡಾಂಗಣ(ಓನ್ ಗ್ರೌಂಡ್)ದಲ್ಲಿ ದೊಡ್ಡ ಮಟ್ಟದಲ್ಲಿ ಪಂದ್ಯಾಟ ಆಯೋಜನೆಗೊಳ್ಳುವುದು ಅಪರೂಪ. ಪಂದ್ಯಾಟದ ಕ್ಷಣ ಕ್ಷಣದ ಮಾಹಿತಿಗಾಗಿ ಎಲೆಕ್ಟ್ರಾನಿಕ್ಸ್ ಸ್ಕೋರ್ ಬೋರ್ಡ್ಗಳನ್ನು ಬಳಸಲಾಗುತ್ತಿದೆ. ಕರಾಟೆಗೆ ಮ್ಯಾಟ್ ಅಳವಡಿಸಿದ ಸ್ಟೇಜ್ ಲಭ್ಯವಾಗುತ್ತಿದ್ದು, ಇದರ ಮ್ಯಾಟನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜತೆಗೆ ವಾರ್ಮ್ಅಪ್ ಏರಿಯಾ, ಎನ್ಕ್ವೆರಿ ಸೆಂಕ್ಷನ್(ವಿಚಾರಣಾ ವಿಭಾಗ)ಗಳು ಜಾಗತಿಕ ಪಂದ್ಯಾಟಗಳನ್ನು ನೆನಪಿಸಲಿದೆ.
ಸಾವಿರಕ್ಕೂ ಅಧಿಕ ಕರಾಟೆ ಪಟುಗಳು ದೇಶದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿಗೆ ಸಂಘಟಕರು ವಿವರಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕರಾಟೆ ಸಂಘಟಕ ಪ್ರಮುಖರಾದ ಸುರೇಂದ್ರ, ಸುರೇಶ್ ಶೆಟ್ಟಿ, ಸುಧೀರ್, ಮನೀಶ್ ಮುಂತಾದವರು ಉಪಸ್ಥಿತರಿದ್ದರು.