ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಜನವರಿ 1ರಿಂದ ‘ಇಂದಿರಾ ಕ್ಯಾಂಟೀನ್’ ಆರಂಭ
ಸಚಿವ ಸಂಪುಟ ನಿರ್ಧಾರ

ಬೆಂಗಳೂರು, ಅ. 11: ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳು ಮಾತ್ರವಲ್ಲದೆ, 1ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣ ಪ್ರದೇಶಗಳಲ್ಲೂ ಬೆಂಗಳೂರು ಮಾದರಿಯಲ್ಲಿಯೇ 2018ರ ಜ.1ರಿಂದ ‘ಇಂದಿರಾ ಕ್ಯಾಂಟೀನ್’ ಪ್ರಾರಂಭಿಸಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಬುಧವಾರ ವಿಧಾನಸೌಧದ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿ, ಬಡ-ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಮಹತ್ವದ ಈ ಯೋಜನೆಯ ಅನುಷ್ಠಾನಕ್ಕೆ ನವೆಂಬರ್ ಅಂತ್ಯದೊಳಗೆ ಸ್ಥಳ ಗುರುತಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚಿಸಿದೆ ಎಂದು ಅವರು ತಿಳಿಸಿದರು.
ಸರಕಾರಿ ಆಸ್ಪತ್ರೆಗಳ ಆವರಣ, ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ‘ಇಂದಿರಾ ಕ್ಯಾಂಟೀನ್’ ಪ್ರಾರಂಭಿಸಲು ಸೂಚಿಸಲಾಗಿದೆ. ರಾಜ್ಯದ 171 ಸ್ಥಳಗಳಲ್ಲಿನ ಒಟ್ಟು 246 ಕೇಂದ್ರಗಳಲ್ಲಿ 2018ರ ಜನವರಿ 1ರಿಂದ ‘ಇಂದಿರಾ ಕ್ಯಾಂಟೀನ್’ ಪ್ರಾರಂಭವಾಗಲಿವೆ ಎಂದರು.
185 ಕೋಟಿ ರೂ.ಅಗತ್ಯ: ಉದ್ದೇಶಿತ ಇಂದಿರಾ ಕ್ಯಾಂಟೀನ್ ಯೋಜನೆಗೆ ಒಟ್ಟು 185 ಕೋಟಿ ರೂ. ಅಗತ್ಯವಿದ್ದು, ಪ್ರತಿನಿತ್ಯ 29 ಲಕ್ಷ ರೂ.ನಂತೆ ತಿಂಗಳಿಗೆ ಅಂದಾಜು 9 ಕೋಟಿ ರೂ.ಗಳಷ್ಟು ಸಹಾಯಧನ ಅಗತ್ಯವಿದೆ. ಅದನ್ನು ಬಿಡುಗಡೆ ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
-ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿಯೂ ಇಂದಿರಾ ಕ್ಯಾಂಟೀನ್
-ಜ.1ರಿಂದ ಬಡವರಿಗೆ ಅಗ್ಗದ ದರದಲ್ಲಿ ಉಪಾಹಾರ-ಊಟ
-1ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪಟ್ಟಣ ಪ್ರದೇಶಗಳಲ್ಲೂ ಕ್ಯಾಂಟೀನ್
-ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಕ್ಯಾಂಟೀನ್







