ಉಡುಪಿ: ಸಾಣೂರು ಯುವಕ ಮಂಡಲ ಅತ್ಯುತ್ತಮ ಯುವಮಂಡಳ ಪ್ರಶಸ್ತಿಗೆ ಆಯ್ಕೆ
ಉಡುಪಿ, ಅ.12: ಕೇಂದ್ರ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ, ಉಡುಪಿ ಜಿಲ್ಲೆ ಪ್ರತಿ ವರ್ಷ ನೀಡುತ್ತಾ ಬಂದಿರುವ ಜಿಲ್ಲೆಯ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಈ ಬಾರಿ ‘ಯುವಕ ಮಂಡಲ ಸಾಣೂರು, ಕಾರ್ಕಳ’ ಆಯ್ಕೆಯಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಹಾಗೂ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ವಿಲ್ಪ್ರೆಡ್ ಡಿಸೋಜ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿಗಳನ್ನು ಕರೆಯಲಾಗಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಅಂತಿಮ ಸುತ್ತಿನ ಆಯ್ಕೆಯಲ್ಲಿ ಸಾಣೂರು ಯುವಕ ಮಂಡಲ ಜಿಲ್ಲೆಯ ಅತ್ಯುತ್ತಮ ಯುವ ಮಂಡಳವೆಂದು ಜಿಲ್ಲಾ ಪ್ರಶಸ್ತಿಗೆ ಆಯ್ಕೆ ವರದಿ ತಿಳಿಸಿದೆ. ಕಳೆದ 64 ವರ್ಷಗಳಿಂದ ಯುವಕ ಮಂಡಲ ಸಾಣೂರು ಸಮಾಜ ಸೇವೆ ಹಾಗೂ ಸಮಾಜದ ಸರ್ವತೋಮುಖ ಏಳಿಗೆಗಾಗಿ, ಸ್ವಯಂಸೇವೆಯನ್ನೊಳ ಗೊಂಡ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಸಮಾಜದ ಎಲ್ಲ ವಿಧದ ಜನರೊಡನೆ ಬೆರೆತು ಸ್ವಚ್ಚತೆ, ಆರೋಗ್ಯಕ್ಕೆ ಸಂಬಂದಿಸಿದ ಹಲವಾರು ಉಚಿತ ಶಿಬಿರಗಳ ಆಯೋಜನೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ಧನ ಸಹಾಯ, ಪರಿಸರ ಕಾಳಜಿ ಮೂಡಿಸುವಿಕೆ ಹಾಗೂ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಸಾಮಾಜಿಕ ಪಿಡುಗನ್ನು ನಿವಾರಿಸಲು ಕಾರ್ಯಗಾರಗಳ ಆಯೋಜನೆ, ವನಮಹೋತ್ಸವ ಆಚರಣೆ, ಹಲವಾರು ರಾಷ್ಟ್ರೀಯ ಹಬ್ಬಗಳ ಆಚರಣೆ, ಸರಕಾರದ ಹಲವು ಜನೋಪಯೋಗಿ ಯೋಜನೆ / ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸುವಿಕೆ, ಭ್ರಷ್ಟಾಚಾರ ನಿರ್ಮೂಲನೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ನಡೆಸಿ ಗಮನ ಸೆಳೆದಿದೆ ಎಂದು ಅವರು ವಿವರಿಸಿದರು.
ಸಾಣೂರು ಯುವಕ ಮಂಡಲ ಪ್ರಶಸ್ತಿಯೊಂದಿಗೆ 25,000ರೂ.ನಗದು ಹಾಗೂ ಪ್ರಶಂಸ ಪತ್ರವನ್ನು ಡಿಸೆಂಬರ ತಿಂಗಳಲ್ಲಿ ನಡೆಯುವ ಜಿಲ್ಲಾ ಯುವ ಸಮಾವೇಶದಲ್ಲಿ ಸ್ವೀಕರಿಸಲಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.