ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಉಡುಪಿ, ಅ.12: ಜಿಲ್ಲೆಯ ಕೆಲವು ಪ್ರದೇಶಗಳ ಮದ್ಯ ಮಾರಾಟ ಸನ್ನದು ಆವರಣಗಳಲ್ಲಿ ಗೂಂಡಾ ಪ್ರವೃತ್ತಿ ತೋರುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸನ್ನದುದಾರರಿಗೆ ರಕ್ಷಣೆ ನೀಡುವಂತೆ ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ನ ಪದಾಧಿಕಾರಿಗಳು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಗಂಗೊಳ್ಳಿ, ಉಡುಪಿ, ಮಣಿಪಾಲ, ಕಾರ್ಕಳ ಮತ್ತಿತರ ಪ್ರದೇಶಗಳಲ್ಲಿ ಗೂಂಡಾ ಪ್ರವೃತ್ತಿಯ ಗ್ರಾಹಕರು ಬಂದು ಮದ್ಯಪಾನ ಮತ್ತು ಆಹಾರ ಸೇವಿಸಿದ ಬಳಿಕ ಬಿಲ್ ವಿಷಯದಲ್ಲಿ ತಕರಾರು ತೆಗೆದು ಮಾಲಕರು ಹಾಗೂ ನೌಕರರ ಮೇಲೆ ಹಲ್ಲೆ ನಡೆಸುವ, ಹಾಗೂ ವಸ್ತುಗಳಿಗೆ ಹಾನಿಯುಂಟು ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಆದುದರಿಂದ ಜಿಲ್ಲೆಯ ಸನ್ನದುಗಳಲ್ಲಿ ನಡೆಯುವ ಈ ರೀತಿಯ ಪ್ರಕರಣಗಳಲ್ಲಿ ನೀಡುವ ದೂರಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾ ಸಂಘ ಹಾಗೂ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ಸಂಘಗಳ ಪರವಾಗಿ ಮನವಿಯಲ್ಲಿ ವಿನಂತಿಸಲಾಗಿದೆ.