'ರಾ. ಹೆದ್ದಾರಿ ದುರಸ್ತಿಗೆ ವಿಕೋಪ ನಿಧಿಯಿಂದ 50ಲಕ್ಷ ರೂ.'
ಉಡುಪಿ, ಅ.13: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣಿಪಾಲ-ಪರ್ಕಳ ನಡುವೆ ಹದಗೆಟ್ಟಿರುವ ಭಾಗದ ದುರಸ್ತಿಗೆ ಜಿಲ್ಲಾಧಿಕಾರಿ ಯವರು ಪ್ರಾಕೃತಿಕ ವಿಕೋಪ ನಿಧಿಯಿಂದ 50 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಇದಕ್ಕೆ ಕೇಂದ್ರದಿಂದ ಕೇವಲ 8 ಲಕ್ಷ ರೂ. ಮಂಜೂರಾಗಿದೆ ಎಂದು ರಾ.ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಇಂದು ಉಡುಪಿ ತಾಪಂ ಸಭಾಂಗಣದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಗಳಡಿ ನಿರ್ವಹಿಸಿದ ಕಾಮಗಾರಿಗಳ ಕುರಿತಂತೆ ಇಂಜಿನಿಯರ್ ಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಲ್ಪೆಯಿಂದ ಪರ್ಕಳದವರೆಗಿನ ರಸ್ತೆಯ ದುರಸ್ತಿ ಕುರಿತು ಮಾಹಿತಿಗಳನ್ನು ಹಂಚಿಕೊಂಡರು.
ರಸ್ತೆ ದುರಸ್ತಿಗೆ ಕೇಂದ್ರದಿಂದ 130 ಲಕ್ಷ ರೂ.ಗಳಿಗೆ ಪ್ರಸ್ತಾವನೆ ಕಳುಹಿಸಿದ್ದರೂ, ಎಂಟು ಲಕ್ಷ ರೂ.ಮಾತ್ರ ಮಂಜೂರಾಗಿದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಬರುವ 84 ಕಿ.ಮೀ.. ಉದ್ದದ ರಸ್ತೆಯ ಗುಂಡಿಗಳನ್ನು ಡಿಸೆಂಬರ್ ತಿಂಗಳ ಕೊನೆ ಯೊಳಗೆ ಮುಚ್ಚುವುದಾಗಿ ಇಲಾಖೆಯ ಇಂಜಿನಿಯರ್ಗಳು ಸಚಿವರಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ರಸ್ತೆ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ಎಲ್ಲಾ ಇಂಜಿನಿಯರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 5053 ಕಾಮಗಾರಿಗಳು ಒಟ್ಟು 711 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳ್ಳುತ್ತಿವೆ ಎಂದು ಸಚಿವರು ತಿಳಿಸಿದರು. ಇದರಲ್ಲಿ 446 ಕೋಟಿ ರೂ.ವೆಚ್ಚದ 4074 ಕಾಮಗಾರಿಗಳು ಪೂರ್ಣಗೊಂಡಿದ್ದರೆ, 121 ಕೋಟಿ ರೂ.ವೆಚ್ಚದ 439 ಕಾಮಗಾರಿಗಳು ಪ್ರಗತಿಯ ವಿವಿಧ ಹಂತಗಳಲ್ಲಿವೆ. 144 ಕೋಟಿ ರೂ.ವೆಚ್ಚದ 540 ಕಾಮಗಾರಿಗಳು ಮಂಜೂರಾತಿ ಪಡೆದಿದ್ದರೂ, ಇನ್ನಷ್ಟೇ ಪ್ರಾರಂಭಗೊಳ್ಳಬೇಕಿವೆ ಎಂದವರು ವಿವರಿಸಿದರು. ಅವುಗಳಲ್ಲಿ ರಸ್ತೆ(3125), ಸೇತುವೆ (22-10ಪೂರ್ಣ), ಕಟ್ಟಡ (165), ಕಿಂಡಿ ಅಣೆಕಟ್ಟು (31), ಕೆರೆ ಹೂಳೆತ್ತುವುದು (26), ಶಾಲಾ ಕಟ್ಟಡಗಳು, ನೀರು ಸರಬರಾಜು ಯೋಜನೆಗಳು, ನದಿದಂಡೆ ಸಂರಕ್ಷಣೆಗಳು, ಇತರೆ ಕಾರ್ಯಕ್ರಮ, ತಡೆಗೋಡೆ ನಿರ್ಮಾಣ, ಮಲ್ಪೆ ಬೀಚ್ಗೆ ಮೂಲಭೂತ ಸೌಕರ್ಯ, ಮೀನುಗಾರಿಕಾ ಜೆಟ್ಟಿ ಮತ್ತು ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಸೇರಿವೆ.
ಮಲ್ಪೆ, ಪರ್ಕಳ, ಬ್ರಹ್ಮಾವರ, ಬಾರ್ಕೂರು, ಉಡುಪಿ, ಮಣಿಪಾಲ ಮುಂತಾದ ಭಾಗದ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚುವ ಕೆಲಸ ಅತ್ಯಂತ ಶೀಘ್ರವಾಗಿ ನಡೆಯಬೇಕು. ವಿಶೇಷವಾಗಿ ಮಣಿಪಾಲ, ಉಡುಪಿ ರಸ್ತೆಗಳ ಕೆಲಸವನ್ನು ಆದಷ್ಟು ಬೇಗ ಮುಗಿಸಬೇಕು. ಉಡುಪಿ ವಿಧಾನಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳ ಅಗಲ 3.5ಮೀ.ನಿಂದ ಐದು ಮೀ.ಗೆ ಹೆಚ್ಚಲಿದೆ. ನಗರಸಭಾ ವ್ಯಾಪ್ತಿಯೊಳಗಿನ ಎಲ್ಲಾ ರಸ್ತೆ ದುರಸ್ತಿ ಕಾರ್ಯಗಳು ಡಿಸೆಂಬರ್ 15ರೊಳಗೆ ಮುಗಿದಿರಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿವಿಧ ಕಾಮಗಾರಿಗಳ ಕುರಿತು ವಿವಿಧ ವಿಭಾಗದ ಇಂಜಿನಿಯರ್ ಗಳು ಸಚಿವರಿಗೆ ಮಾಹಿತಿ ನೀಡಿದರು.