ಪ್ರಸ್ತಾವನೆ ಕುರಿತು ಸೂಕ್ತ ಆದೇಶ ಹೊರಡಿಸಲು ರೈಲ್ವೆ ಮಂಡಳಿಗೆ ಹೈಕೋರ್ಟ್ ನಿರ್ದೇಶನ
ಶ್ರವಣಬೆಳಗೊಳ, ಕಂಕನಾಡಿ ಜಂಕ್ಷನ್ ಮೂಲಕ ಪ್ರತ್ಯೇಕ ರೈಲು ಓಡಿಸುವ ವಿಚಾರ
ಬೆಂಗಳೂರು, ಅ.13: ಬೆಂಗಳೂರಿಂದ ಕಾರವಾರಕ್ಕೆ ನಡುವೆ ಹೊಸದಾಗಿ ನಿರ್ಮಾಣಗೊಂಡಿರುವ ಶ್ರವಣಬೆಳಗೊಳ, ಕಂಕನಾಡಿ ಜಂಕ್ಷನ್ ಮೂಲಕ ಪ್ರತ್ಯೇಕ ರೈಲು ಓಡಿಸುವ ಪ್ರಸ್ತಾವನೆ ಕುರಿತು ಮೂರು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ರೈಲ್ವೆ ಮಂಡಳಿಗೆ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಬೆಂಗಳೂರು-ಕಾರವಾರ ನಡುವೆ ಪ್ರತಿನಿತ್ಯ ಸಂಚರಿಸುವ ಎಕ್ಸ್ಪ್ರೆಸ್ ರೈಲನ್ನು ಹೊಸದಾಗಿ ನಿರ್ಮಾಣಗೊಂಡಿರುವ ಕುಣಿಗಲ್ ರೈಲು ಮಾರ್ಗಕ್ಕೆ ಬದಲಿಸಲು ನೈರುತ್ಯ ರೈಲ್ವೆ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಸಂಜಯ್ ರೇವಣಕರ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಹಾಸನ-ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಮಾರ್ಗದಲ್ಲಿ ಘಟ್ಟಗಳು ಹೆಚ್ಚಿವೆ. ಇನ್ನು ಈ ಮಾರ್ಗವು ಪೂರಕ ಸಾಮರ್ಥ್ಯ ಹೊಂದಿಲ್ಲ. ಒಂದೊಮ್ಮೆ ಮಾರ್ಗ ಬದಲಿಸಿದರೆ ಮಂಡ್ಯ, ರಾಮನಗರ ಮತ್ತು ಮೈಸೂರು ಜಿಲ್ಲೆಯ ನಿವಾಸಿಗಳು ಮಂಗಳೂರಿನ ಸಂಪರ್ಕ ಹೊಂದುವುದಕ್ಕೆ ಕಷ್ಟವಾಗುತ್ತದೆ. ಹೀಗಾಗಿ, ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲನ್ನು ಕುಣಿಗಲ್ ಮಾರ್ಗಕ್ಕೆ ಬದಲಿಸಲು ಸಾಧ್ಯವಿಲ್ಲ ಎಂದು ನೈರುತ್ಯ ರೈಲ್ವೆ ಇಲಾಖೆ ಕಳೆದ ಆ.11ರಂದು ಹೈಕೋರ್ಟ್ಗೆ ತಿಳಿಸಿತ್ತು.
ಇದನ್ನು ಒಪ್ಪದಿದ್ದ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಂತರ ನಿಲುವು ತಿಳಿಸುವಂತೆ ರೈಲ್ವೆ ಇಲಾಖೆಗೆ ಸೂಚಿಸಿ ವಿಚಾರಣೆ ಮುಂದೂಡಿತ್ತು. ಅರ್ಜಿ ಶುಕ್ರವಾರ ಮತ್ತೆ ವಿಚಾರಣೆಗೆ ಬಂದಿತ್ತು. ಈ ವೇಳೆ ಬೆಂಗಳೂರು-ಕಾರವಾರ, ಕಣ್ಣೂರು ನಡುವೆ ಪ್ರತಿನಿತ್ಯ ಸಂಚರಿಸುವ ರೈಲನ್ನು ಕುಣಿಗಲ್ ಮಾರ್ಗವಾಗಿ ವಾರಕ್ಕೆ ನಾಲ್ಕು ದಿನ ಓಡಿಸಲು ನೈರುತ್ಯ ರೈಲ್ವೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿ ಅ.11ರಂದು ಒಪ್ಪಿತ್ತು. ಈ ವಿಚಾರವನ್ನು ಶುಕ್ರವಾರ ವಿಚಾರಣೆ ವೇಳೆ ಹೈಕೋರ್ಟ್ ಗಮನಕ್ಕೆ ತರಲಾಯಿತು.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ಕುಣಿಗಲ್ ಮಾರ್ಗವಾಗಿ ಬೆಂಗಳೂರು-ಮಂಗಳೂರಿಗೆ ಪ್ರತ್ಯೇಕ ರೈಲು ಓಡಿಸುವ ವಿಚಾರದಲ್ಲಿ ಮಾರ್ಗ ನಕ್ಷೆಯೊಂದನ್ನು ಸಿದ್ಧಪಡಿಸಬೇಕು. ಅದರೊಂದಿಗೆ ಈ ವಿಚಾರದಲ್ಲಿ ಇಲ್ಲಿಯವರೆಗೂ ನಡೆದ ಎಲ್ಲ ಬೆಳವಣಿಗಳ ಮಾಹಿತಿ ಹಾಗೂ ದಾಖಲೆಗಳನ್ನು ರೈಲ್ವೆ ಮಂಡಳಿಗೆ ಮನವಿ ಪತ್ರ ಸಲ್ಲಿಸಬೇಕು. ರೈಲ್ವೆ ಮಂಡಳಿ ಆ ಮನವಿ ಸ್ವೀಕರಿಸಿ ಮೂರು ತಿಂಗಳಲ್ಲಿ ಅರ್ಜಿದಾರರ ಅಹವಾಲು ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರವೀಂದ್ರ ಜಿ.ಕೊಳ್ಳೆ ವಾದಿಸಿ, ಕುಣಿಗಲ್ ಮಾರ್ಗದ ಮೂಲಕ ಕಾರವಾರಕ್ಕೆ ರೈಲು ಸೇವೆ ಆರಂಭಿಸಿದರೆ ಬೆಂಗಳೂರಿನಿಂದ ಕಾರವಾರ ತಲುಪುವ ಸಮಯ 4 ತಾಸು ಕಡಿತವಾಗಲಿದೆ. ಮೈಸೂರು ಮಾರ್ಗದಲ್ಲಿ ರೈಲು ಸಂಚಾರ ಮಾಡಬೇಕು ಎಂದು ಹೇಳುವುದಾದರೆ, ಆ ಮಾರ್ಗದಲ್ಲೂ ರೈಲು ಓಡಿಸಿ, ಕುಣಿಗಲ್ ಮಾರ್ಗದಲ್ಲಿಯೂ ಪ್ರತ್ಯೇಕ ರೈಲು ಸಂಚಾರ ಆರಂಭಿಸಬಹುದು ಎಂದು ಕೋರ್ಟ್ ಗಮನಕ್ಕೆ ತಂದರು.







