ಕೊಡಿಪ್ಪಾಡಿ ಪಡ್ಪು ಡಿಸಿ ಮನ್ನಾ ಭೂಮಿ ದಲಿತರಿಗೆ ಹಂಚಲು ಆಗ್ರಹ
ಪುತ್ತೂರು, ಅ. 14: ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಪಡ್ಪು ಎಂಬಲ್ಲಿ ಬ್ರಿಟಿಷ್ ಆಡಳಿತಾವಧಿಯಲ್ಲಿ ಡಿ.ಸಿ. ಮನ್ನಾ ಭೂಮಿ ಎಂಬ ಹೆಸರಿನಲ್ಲಿ ಮೀಸಲಿಟ್ಟ 5.90 ಎಕ್ರೆ ಜಾಗದಲ್ಲಿ ಇದೀಗ 42 ದಲಿತ ಕುಟುಂಬಗಳು ಟರ್ಪಾಲ್ ಅಳವಡಿಸಿ ತಾತ್ಕಾಲಿಕ ಗುಡಿಸಲು ನಿರ್ಮಿಸಿದ್ದಾರೆ. ತಕ್ಷಣ ಕಂದಾಯ ಇಲಾಖೆಯವರು ಕಾನೂನು ತೊಡಕುಗಳನ್ನು ನಿವಾರಿಸಿ ಈ ಭೂಮಿಯನ್ನು ಪ್ರತೀ ಕುಟುಂಬಕ್ಕೆ ಕನಿಷ್ಠ ನಿವೇಶನವಾಗಿ ಹಂಚಿಕೆ ಮಾಡಬೇಕು. ತಪ್ಪಿದಲ್ಲಿ ಈಗ ತಾತ್ಕಾಲಿಕ ಗುಡಿಸಲಿರುವ ಜಾಗದಲ್ಲಿ ಶಾಶ್ವತ ಗುಡಿಸಲು ನಿರ್ಮಿಸಲು ದಲಿತ ಕುಟುಂಬಗಳು ಹಿಂಜರಿಯುವುದಿಲ್ಲ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಾಲಚಂದ್ರ ಸೊರಕೆ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಜಮೀನು ದಲಿತರ ಹಕ್ಕು. ಈಗ ಅಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಿಸಿದವರು ಯಾರೂ ಸ್ವಂತ ಜಮೀನು, ಸ್ವಂತ ಮನೆ ಹೊಂದಿದವರಲ್ಲ. ಎಲ್ಲರೂ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಬಡವರಾಗಿದ್ದಾರೆ. ಸ್ವಾತಂತ್ರ್ಯ ಲಭಿಸಿ 71 ವರ್ಷಗಳಾದರೂ ಇಂದಿಗೂ ಇವರಿಗೆ ಸರ್ಕಾರದಿಂದ ನಿವೇಶನ ಸಿಕ್ಕಿಲ್ಲ ಎಂದರು.
ಸ್ವಂತ ಮನೆಯಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವ ಬಡ ದಲಿತರ ಸಂಕಷ್ಟವನ್ನು ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರ ಅರ್ಥಮಾಡಿಕೊಳ್ಳದೇ ಇರುವುದರಿಂದ ಅವರಾಗಿಯೇ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯಲ್ಲಿ ಮನೆ ನಿರ್ಮಿಸಲು ಮುಂದಾಗಬೇಕಾಗಿ ಬಂದಿದೆ ಎಂದರು.
ಕೊಡಿಪ್ಪಾಡಿ ಗ್ರಾಮದ ಪಡ್ಪು ಎಂಬಲ್ಲಿರುವ ಜಮೀನು ಡಿ.ಸಿ. ಮನ್ನಾ ಭೂಮಿಯಾಗಿದೆ. 1939ರಲ್ಲಿ ಬ್ರಿಟಿಷ್ ಸರ್ಕಾರ ಇಲ್ಲಿ ಸುಮಾರು 9 ಎಕರೆ ಜಮೀನನ್ನು ದಲಿತರಿಗೆ ಹಂಚಲೆಂದು ಕಾದಿರಿಸಿದೆ. ಸ್ವಾತಂತ್ರ್ಯಾನಂತರ ಇದಲ್ಲಿ ಕೇವಲ ಮೂರು ದಲಿತ ಕುಟುಂಬಗಳಿಗೆ ಮಾತ್ರ ಜಮೀನು ಹಂಚಲಾಗಿದ್ದು, 5.90 ಎಕರೆ ಜಮೀನು ಹಾಗೆಯೇ ಇದೆ. ಆದರೆ ಇದನ್ನು 1985ರಲ್ಲಿ ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದೆ. ಈಗ ಜಮೀನಿನ ಆರ್ಟಿಸಿ ಅರಣ್ಯ ಇಲಾಖೆ ಹೆಸರಿನಲ್ಲಿದೆ. ಡಿ.ಸಿ. ಮನ್ನಾ ಭೂಮಿಯನ್ನು ಅರಣ್ಯ ಇಲಾಖೆಗೆ ಕೊಟ್ಟಿದ್ದು ತಪ್ಪು. ಈಗ ಅದು ಅರಣ್ಯ ಇಲಾಖೆಯ ಸೊತ್ತಾದರೂ ಮೂಲದಲ್ಲಿ ಅದು ಡಿ.ಸಿ. ಮನ್ನಾ ಭೂಮಿಯಾಗಿರುವುದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಡಿನೋಟಿಫಿಕೇಶನ್ ಮಾಡಬೇಕು. ಅರಣ್ಯ ಇಲಾಖೆ ಹೆಸರಿನಲ್ಲಿರುವ ಜಮೀನನ್ನು ಮತ್ತೆ ಕಂದಾಯ ಇಲಾಖೆಗೆ ಪಡೆದುಕೊಂಡು ಡಿ.ಸಿ. ಮನ್ನಾ ಭೂಮಿ ಎಂದೇ ನಮೂದಿಸಬೇಕು ಎಂದು ಆಗ್ರಹಿಸಿದರು.
ಪುತ್ತೂರು ನಗರದ ಹೃದಯ ಭಾಗದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯ ಜಮೀನನ್ನು ಹಿಂದಿನ ಜಿಲ್ಲಾಧಿಕಾರಿಗಳು ಕೇವಲ ಒಂದೇ ಒಂದು ದಿನದಲ್ಲಿ ಸರ್ಕಾರಿ ಆಸ್ಪತ್ರೆಯ ಹೆಸರಿನಲ್ಲಿ ಮಾಡಿದ್ದಾರೆ. ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಹೀಗಿರುವಾಗ ಮೂಲತಃ ಡಿ.ಸಿ. ಮನ್ನಾ ಭೂಮಿ ಆಗಿರುವ ಇಲ್ಲಿನ ಜಮೀನನ್ನು ಕಂದಾಯ ಇಲಾಖೆಯವರಿಗೆ ಯಾಕೆ ಅದೇ ಮೂಲ ಸ್ವರೂಪಕ್ಕೆ ತರಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.
ಹಿಂದಿನ ಬ್ರಿಟಿಷ್ ಸರ್ಕಾರ ಕರಾವಳಿ ಜಿಲ್ಲೆಗಳ ದಲಿತರ ಸ್ಥಿತಿಗತಿ ಅರ್ಥಮಾಡಿಕೊಂಡು ಅವರಿಗೆಂದೇ ಒಂದಿಷ್ಟು ಜಮೀನನ್ನು ಅಲ್ಲಲ್ಲಿ ಮೀಸಲಿಟ್ಟು ಅದಕ್ಕೆ ಡಿ.ಸಿ.(ಡಿಪ್ರೆಸ್ಡ್ ಕ್ಲಾಸ್) ಮನ್ನಾ ಭೂಮಿ ಎಂದು ಹೆಸರಿಟ್ಟಿತು. ಜಿಲ್ಲೆಯಲ್ಲಿ ಇಂಥ ಸುಮಾರು ಎರಡು ಸಾವಿರ ಎಕರೆ ಜಮೀನು ಇದೆ. ಪುತ್ತೂರು ತಾಲ್ಲೂಕು ಒಂದರಲ್ಲಿಯೇ 118 ಎಕರೆ ಡಿಸಿ ಮನ್ನಾ ಜಮೀನಿದೆ. ಕೆಲವೊಂದು ಕಡೆಗಳಲ್ಲಿ ದಲಿತರಿಗೆ ಡಿ.ಸಿ. ಮನ್ನಾ ಭೂಮಿ ಹಂಚಿಕೆ ಮಾಡಲಾಗಿದ್ದರೂ ಹೆಚ್ಚಿನ ಕಡೆ ಈ ಕೆಲಸ ಸಂಬಂಧಪಟ್ಟ ಇಲಾಖೆಗಳಿಂದ ನಡೆದಿಲ್ಲ. ಕೆಲವು ಕಡೆ ಡಿ.ಸಿ. ಮನ್ನಾ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದಾರೆ ಎಂದರು.
ಅರಣ್ಯ ಇಲಾಖೆಯ ಹೆಸರಿನಲ್ಲಿರುವ ಇತರ ಜಮೀನನ್ನು ದಲಿತರಿಗೆ ಹಂಚಿ ಎಂದು ನಾವು ಕೇಳುತ್ತಿಲ್ಲ. ಮೂಲದಲ್ಲಿ ಯಾವ ಹೆಸರಿನ ದಾಖಲೆ ಇತ್ತೋ ಅದೇ ದಾಖಲೆಗೆ ಪರಿವರ್ತಿಸಿ ಮತ್ತೆ ನಿವೇಶನ ರಹಿತ ದಲಿತರಿಗೆ ಅವರ ಕನಿಷ್ಠ ಅವಶ್ಯಕತೆಗೆ ಎಷ್ಟು ಬೇಕೊ ಅಷ್ಟು ಪ್ರಮಾಣದಲ್ಲಿ ಹಂಚಿ ಎಂದು ಹೇಳುತ್ತಿದ್ದೇವೆ. ಬಡವರು ತಮ್ಮ ಕನಿಷ್ಠ ಆವಶ್ಯಕತೆಗಾಗಿ ಡಿಸಿ ಮನ್ನಾ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಿ ನಮಗೆ ಕೊಡಿ ಎಂದು ನಾವು ಕೇಳುತ್ತಿಲ್ಲ. ಸ್ವಂತ ಜಮೀನು ಇದ್ದವರು ಅತಿಕ್ರಮಣ ಮಾಡಿಕೊಂಡಿದ್ದರೆ ಅದನ್ನು ನಿಸ್ಸಂಶಯವಾಗಿಯೂ ತೆರವು ಮಾಡಿ ದಲಿತರಿಗೆ ಹಂಚಬೇಕು ಎಂದವರು ನಮ್ಮ ಆಗ್ರಹ ಎಂದು ಅವರು ಸ್ಪಷ್ಟಪಡಿಸಿದರು.
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಗಿರಿಧರ್ ನಾಯ್ಕ , ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಅದ್ದಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ತ್ಯಾಗರಾಜನಗರ, ಸಂಘಟನೆಯ ಮುಖಂಡೆ ಅನಿತಾ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಳೆದ ವಾರ ದಲಿತ ಕುಟುಂಬಗಳು ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡಿರುವ ಪಡ್ಪುವಿನ ಜಾಗಕ್ಕೆ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಈ ಜಾಗದಲ್ಲಿ ಒಂದಿಂಚನ್ನೂ ದಲಿತರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಅವರು ಅಲ್ಲಿ ಹೇಳಿಕೆ ನೀಡಿದ್ದಾರೆ. ನಾವು ಕೇಳುತ್ತಿರುವುದು ಅಧ್ಯಕ್ಷರ ಸ್ವಂತ ಆಸ್ತಿಯನ್ನಲ್ಲ, ಅಥವಾ ಅವರ ಪಿತ್ರಾರ್ಜಿತ ಆಸ್ತಿಯನ್ನೂ ಅಲ್ಲ. ನಾವು ಕೇಳುತ್ತಿರುವುದು ನಮ್ಮ ಸಮುದಾಯದ ಹಕ್ಕಿನ ಜಮೀನು. ಅರಣ್ಯ ಇಲಾಖೆ ಆ ಜಮೀನನ್ನು ಪಡೆದುಕೊಂಡ ಮೇಲೆ ಗೇರು ಅಭಿವೃದ್ಧಿ ನಿಗಮಕ್ಕೆ ಗೇರುತೋಪು ಬೆಳೆಸಲು ಬಿಟ್ಟುಕೊಟ್ಟಿದೆ. ಅದು ನಿಜ. ಹಾಗೆಂದ ಮಾತ್ರಕ್ಕೆ ದಲಿತರಿಗೆ ಒಂದಿಂಚೂ ಇದರಲ್ಲಿ ಕೊಡುವುದಿಲ್ಲ ಎಂದು ಹೇಳಲು ಕೆಸಿಡಿಸಿ ಅಧ್ಯಕ್ಷರಿಗೆ ಏನು ಹಕ್ಕಿದೆ -ಗಿರಿಧರ ನಾಯ್ಕ, ರಾಜ್ಯಾಧ್ಯಕ್ಷರು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ







