ಉಪ್ಪಿನಂಗಡಿ : ವಿವಾಹ ಸಮಾರಂಭದಲ್ಲಿ ಸಾಹಿತ್ಯ ಸಂಭ್ರಮ
ಉಪ್ಪಿನಂಗಡಿ, ಅ. 14: 'ಯಂಶ ಬೇಂಗಿಲ' ಕಾವ್ಯನಾಮದಲ್ಲಿ ಗುರುತಿಸಲ್ಪಡುವ ಯುವ ಕವಿ ಮುಹಮ್ಮದ್ ಶಮೀರ್ ಅವರ ವಿವಾಹ ಸಮಾರಂಭವು ಸಾಹಿತ್ಯ ಸಂಭ್ರಮದೊಂದಿಗೆ ನಡೆಯಲಿದೆ.
ಅ.15 ರವಿವಾರ ಪೂ.10.30ಕ್ಕೆ ಉಪ್ಪಿನಂಗಡಿ ಸಮೀಪದ ಬೇಂಗಿಲ ಮನೆಯಲ್ಲಿ ನಿಕಾಹ್ ನಡೆಯಲಿದ್ದು , ಬಳಿಕ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ನೆರವೇರಲಿದೆ.
ಪೆನ್ ಫ್ರೆಂಡ್ಸ್ ಮಂಗಳೂರು ಅಧ್ಯಕ್ಷ ಕೆ.ಎಂ. ಅಬೂಬಕರ್ ಸಿದ್ದೀಖ್ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಶ್ರೀ ಉದಯ ಕುಮಾರ್ ಹಬ್ಬು ಕವಿ ಗೋಷ್ಠಿ ಉದ್ಘಾಟಿಸುವರು. ಆಹ್ವಾನಿತ ಕವಿಗಳು ವೈವಾಹಿಕ, ಕೌಟುಂಬಿಕ ಸಂಬಂಧಿತ ಕವನಗಳನ್ನು ವಾಚಿಸುವರು. ಖ್ಯಾತ ಕವಿ, ವಿಮರ್ಶಕ ಶ್ರೀ ಬೇಲೂರು ರಘುನಂದನ್ ಅವಲೋಕನ ಮಾಡುವರು.
ಯಂಶ ರವರ 'ಕವಿತೆ ಎಂದರೆ ಉಮ್ಮ' ಕವನ ಸಂಕಲನವನ್ನು ಸೈಯದ್ ಹಂಝ ತಂಙಳ್ ಕರ್ಪಾಡಿ ಹಾಗೂ ಸ್ನೇಹಜೀವಿ ಅಡ್ಕ ಅವರ 'ಸ್ನೇಹ ನುಡಿ' ಬರಹ ಸಂಕಲನವನ್ನು ಮೊಯ್ಲಾಂಜಿ ಪತ್ರಿಕೆಯ ಸಂಪಾದಕ ಎಸ್. ಪಿ. ಹಂಝ ಸಖಾಫಿ ಬಿಡುಗಡೆ ಮಾಡುವರು. ಅಲ್ ಅನ್ಸಾರ್ ಪತ್ರಿಕೆಯ ವ್ಯವಸ್ಥಾಪಕ ಜಿ.ಎಂ. ಕಾಮಿಲ್ ಸಖಾಫಿ, ಇಶಾರ ಪತ್ರಿಕೆಯ ಸಂಪಾದಕ ಹಮೀದ್ ಬಜ್ಪೆ ಹಾಗೂ ಇತರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.