‘ಆರೋಗ್ಯಪೂರ್ಣ ಬದುಕಿಗೆ ಸಾವಯವ ಉತ್ಪನ್ನಗಳನ್ನ ಬಳಸಿ’
ಮೊದಲ ಸಾವಯವ ಸಂತೆ ಉದ್ಘಾಟಿಸಿ ಸಚಿವ ಪ್ರಮೋದ್
ಉಡುಪಿ, ಅ.15: ನಮ್ಮ ಇಂದಿನ ಹೆಚ್ಚಿನ ಅನಾರೋಗ್ಯಗಳಿಗೆ, ಕಾಯಿಲೆಗಳಿಗೆ ಪ್ರಮುಖ ಕಾರಣ ನಾವು ಸೇವಿಸುವ ಆಹಾರ ಪದಾರ್ಥಗಳು. ರಾಸಾಯನಿಕ ಹಾಗೂ ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸಿ ಬೆಳೆಸುವ ತರಕಾರಿ, ಹಣ್ಣುಹಂಪಲು, ದವಸಧಾನ್ಯಗಳಿಂದ ಈ ಅನಾರೋಗ್ಯ ಮನುಷ್ಯನನ್ನು ಕಾಡುತ್ತಿದೆ. ಆದುದರಿಂದ ಆರೋಗ್ಯಪೂರ್ಣ ಬದುಕಿಗೆ ಸಾವಯವ ಉತ್ಪನ್ನಗಳನ್ನೇ ಬಳಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಇಲ್ಲಿನ ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿರುವ ರೈತ ಸೇವಾ (ಪುಷ್ಪ ಹರಾಜು) ಕೇಂದ್ರದಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಯೋಜಿಸ ಲಾದ ಸಾವಯವ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಈ ಸಂತೆ ಇನ್ನು ಪ್ರತಿ ರವಿವಾರ ಬೆಳಗ್ಗೆ 8:30ರಿಂದ ಅಪರಾಹ್ನ 12:30 ರವರೆಗೆ ನಡೆಯಲಿದ್ದು, ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳು ಇಲ್ಲಿ ಲಭ್ಯವಿರಲಿವೆ.
ಜಿಲ್ಲಾಡಳಿತ, ಜಿಲ್ಲಾ ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಮಂಗಳೂರು ಇವುಗಳ ಸಹಯೋಗದಲ್ಲಿ ಕರಾವಳಿಯಲ್ಲೇ ಮೊತ್ತಮೊದಲನೆಯದಾದ ಈ ವಿಶಿಷ್ಟ ವಾರದ ಸಂತೆಯನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಕೇವಲ ಸಾವಯವ ಬಳಸಿ ಬೆಳೆಸಿದ ಉತ್ಪನ್ನಗಳು ಮಾತ್ರ ಮಾರಲ್ಪಡುತ್ತವೆ.
ದೀಪವನ್ನು ಬೆಳಗಿಸಿ, ಸಾವಯವ ತರಕಾರಿ ಬೆಳೆಸಿದ ರೈತನಿಂದ ನೇರವಾಗಿ ತರಕಾರಿಯನ್ನು ಖರೀದಿಸುವ ಮೂಲಕ ಸಂತೆಯನ್ನು ಉದ್ಘಾಟಿಸಿದ ರಾಜ್ಯ ಮೀನುಗಾರಿಕಾ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವರೂ ಆದ ಪ್ರಮೋದ್ ಮಧ್ವರಾಜ್, ಇಂದು ಮನುಷ್ಯ ಆರೋಗ್ಯದ ಕುರಿತಂತೆ ಹೆಚ್ಚು ಹೆಚ್ಚು ಜಾಗೃತನಾಗುತಿದ್ದಾನೆ. ಹೀಗಾಗಿ ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಕುರಿತು ಹೆಚ್ಚು ಒಲವು ತೋರಿಸುತಿದ್ದಾನೆ ಎಂದರು.
ಸಾವಯವ ಉತ್ಪನ್ನಗಳ ಕುರಿತಂತೆ ಜನರ ಒಲವನ್ನು ರೈತರು ದುರುಪಯೋಗ ಪಡಿಸಿಕೊಳ್ಳಬಾರದು. ಅವರು ಪ್ರಾಮಾಣಿಕತೆಯನ್ನು ಬೆಳೆಸಿಕೊಂಡು, ಇಲ್ಲಿ ಕೇವಲ ಸಾವಯವದಿಂದ ಬೆಳೆಸಿದ ತರಕಾರಿ, ಹಣ್ಣುಹಂಪಲು ಹಾಗೂ ಇತರ ಉತ್ಪನ್ನಗಳು ತಂದು ಮಾರಬೇಕು ಎಂದು ಕಿವಿಮಾತು ಹೇಳಿದರು.
ಸಾವಯವ ಕೃಷಿಗೆ ರಾಜ್ಯ ಸರಕಾರವೂ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಿದೆ. ಇಲ್ಲಿಂದ ರೈತರಿಂದ ನೇರವಾಗಿ ಖರೀದಿಸುವುದರಿಂದ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಇದು ಕೃಷಿಯ ಮೇಲೆ ರೈತರ ವಿಶ್ವಾಸವನ್ನು ಹೆಚ್ಚಿಸಲು ಸಹಾಯಕವಾಗಬಹುದು ಎಂದರು.
ಸಾವಯವ ಸಂತೆಯ ಆರಂಭಕ್ಕೆ ಕಾರಣರಾದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ, ದೊಡ್ಡಣಗುಡ್ಡೆ ತೋಟಗಾರಿಕಾ ಕ್ಷೇತ್ರದಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ನಿರ್ಮಿಸಿದ ಪುಷ್ಪ ಹರಾಜು ಕೇಂದ್ರ ನಿಷ್ಪ್ರಯೋಜಕವಾದಾಗ ಅದರ ಸದ್ಭಳಕೆಗೆ ಸಾವಯವ ಸಂತೆ ಆರಂಭಿಸಲಾಗಿದೆ. ಇಂದು ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಆದರೆ ರೈತರು ಸಾವಯವ ಉತ್ಪನ್ನಗಳನ್ನೇ ಇಲ್ಲಿಗೆ ತಂದು ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ನಗರಸಭಾ ಸದಸ್ಯ ಚಂದ್ರಕಾಂತ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕಕುಮಾರ್ ಕೊಡ್ಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಂಥೋನಿ ಮರಿಯಾ ಇಮ್ಯಾನುವೆಲ್, ಚಂದ್ರಶೇಖರ್, ತೋಟಗಾರಿಕಾ ಉಪನಿರ್ದೇಶಕಿ ಭುವನೇಶ್ವರಿ, ಪ್ರಾಂತೀಯ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ, ನಿರ್ದೇಶಕ ತಿಮ್ಮಣ್ಣ ಹೆಗಡೆ ಉಪಸ್ಥಿತರಿದ್ದರು.
ಸಾವಯವ ಕೃಷಿಕರ ಪ್ರಾಂತೀಯ ಒಕ್ಕೂಟ ಮಂಗಳೂರು ಇದರ ನಿರ್ದೇಶಕ ದೇವದಾಸ್ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.