ಭ್ರಷ್ಟಾಚಾರ ಮುಕ್ತ ರಾಜ್ಯ ಸಮಾಜಕ್ಕೆ ಪ್ರಾಮಾಣಿಕ ನಾಯಕರು ಅವಶ್ಯ
ಸಂವಾದದಲ್ಲಿ ನ್ಯಾ.ಅರಳಿ ನಾಗರಾಜ ಅಭಿಪ್ರಾಯ
ಮಂಡ್ಯ, ಅ.16: ಭ್ರಷ್ಟಾಚಾರ, ಜಾತಿ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾದರೆ, ಪ್ರಾಮಾಣಿಕ ನಾಯಕರ ಅವಶ್ಯಕತೆ ಇದೆ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಅಭಿಪ್ರಾಯಪಟ್ಟಿದ್ದಾರೆ.
`ಭ್ರಷ್ಟಾಚಾರ ಮುಕ್ತ ರಾಜ್ಯದೆಡೆಗೆ ನಮ್ಮ ನಡಿಗೆ' ಆಂದೋಲನ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರು ಪ್ರಾಮಾಣಿಕ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದರು.
ಚುನಾವಣೆಗಳ ಸಂದರ್ಭದಲ್ಲಿ ಹಣ, ಆಮಿಷ ತೋರಿ ಮತಗಳನ್ನು ಸೆಳೆಯಲಾಗುತ್ತಿದೆ. ದಿನೇ ದಿನೇ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆಯುತ್ತಿದೆ. ಇದರಿಂದ ಇಡೀ ವ್ಯವಸ್ಥೆ ಭ್ರಷ್ಟಗೊಳ್ಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಚುನಾವಣೆಯ ಸಂದರ್ಭದಲ್ಲಿ ದೈತ್ಯಾಕಾರವಾಗಿ ಬೆಳೆದು ಮತದಾರರನ್ನೊಳಗೊಂಡಂತೆ ಇಡೀ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಿದೆ. ಇದನ್ನು ನಿಯಂತ್ರಿಸುವ ಅತ್ಯಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಜಾಗೃತಗೊಳ್ಳಬೇಕಾಗಿದೆ ಎಂದರು.
ರಾಜಕೀಯ ಪಕ್ಷಗಳ ವರಿಷ್ಠರೂ ಪ್ರಾಮಾಣಿಕರಿಗೆ ಟಿಕೆಟ್ ನೀಡಬೇಕು. ಈ ಸಂಬಂಧ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಇತರ ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ಯಾವ ಪಕ್ಷಗಳಿಂದಲೂ ಸಾಮಾಜಿಕ ನ್ಯಾಯ ಸಾಕಾರಗೊಳ್ಳುತ್ತಿಲ್ಲ. ಅಧಿಕಾರಕ್ಕೆ ಒಡೆದಾಳುವ ನೀತಿ ಅನುಸರಿಸುತ್ತಿವೆ. ಇದರಿಂದಾಗಿ ದೇಶದ ಪರಿಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ. ಈ ಬಗ್ಗೆ ಪ್ರಜ್ಞಾವಂತ ಜನರು ಎಚ್ಚರಿಕೆವಹಿಸಬೇಕಾಗಿದೆ ಎಂದು ಹೇಳಿದರು.
ದೇಶದ ಧರ್ಮಗ್ರಂಥ ಸಂವಿಧಾನವೆಂದು ಪ್ರತಿಪಾದಿಸಿದ ಅವರು, ರಾಜ್ಯದ ನ್ಯಾಯಾಲಗಳ ತೀರ್ಪು ಕನ್ನಡದಲ್ಲೇ ಬಂದರೆ ಕನ್ನಡದ ಬೆಳವಣಿಗೆಗೆ ಅನುಕೂಲವಾಗುತ್ತದೆ. ಆದರೆ, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಹೋಗುವ ಸಂಭವವಿರುವುದರಿಂದ ತೀರ್ಪಿನ ಆಂಗ್ಲಪ್ರತಿಯೂ ಬೇಕು ಎಂದರು.
ಜಾತಿಯತೆ, ಭ್ರಷ್ಟಾಚಾರ, ಅಸಮಾನತೆ ಹೋಗಲಾಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ಶಕ್ತಿ ಮತದಾರರಿಗೆ ಇದೆ. ಆ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಆರಂಭಿಸಲಾಗಿದೆ ಎಂದು ಅವರು ನುಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಕೆರೆಗೋಡು, ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಂಜುನಾಥ್, ಹಿರಿಯ ಪತ್ರಕರ್ತ ಡಿ.ಎಲ್.ಲಿಂಗರಾಜು, ಬಿ.ಪಿ.ಪ್ರಕಾಶ್, ವಕೀಲ ಎಂ.ಗುರುಪ್ರಸಾದ್, ಬಿ.ಪಿ.ಪ್ರಕಾಶ್ ಉಪಸ್ಥಿತರಿದ್ದರು.