ಅ.17: ದ.ಕ. ಜಿಲ್ಲೆಯಾದ್ಯಂತ ಉಚಿತ ಆಯುರ್ವೇದ ಚಿಕಿತ್ಸೆ
ಮಂಗಳೂರು, ಅ. 16: ಭಾರತೀಯ ಚಿಕಿತ್ಸಾ ಪದ್ಧತಿಯಾದ ಆಯುರ್ವೇದವನ್ನು ಜನಪ್ರಿಯಗೊಳಿಸಿ ಜನರಿಗೆ ತಲುಪಿಸುವ ಉದ್ದೇಶದಿಂದ ದೇಶಾದ್ಯಂತ ಅ.17 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉಚಿತ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೋವು ನಿರ್ವಹಣೆಗಾಗಿ ಆಯುರ್ವೇದ ಎಂಬ ಘೋಷ ವಾಕ್ಯದೊಂದಿಗೆ ಉಚಿತ ಚಿಕಿತ್ಸಾ ಶಿಬಿರ, ಉಪನ್ಯಾಸ, ಜಾಗೃತಿ ಶಿಬಿರ, ಕಾರ್ಯಾಗಾರ, ಜಾಥಾ ಮುಂತಾದ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದ್ದು, ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸಲಿದ್ದಾರೆ.
ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಶ್ರೀನಿವಾಸ್ ಹೆಜಮಾಡಿ, ವರ್ತಮಾನದ ಅರೋಗ್ಯ ಸಮಸ್ಯೆಗಳು ಮತ್ತು ಆಯುರ್ವೇದ ಚಿಕಿತ್ಸೆಯ ಯಶಸ್ಸು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಆಯುಷ್ ಪೌಂಡೇಷನ್ ವತಿಯಿಂದ ನೋವು ನಿರ್ವಹಣೆಗಾಗಿ ಮೊದಲ ಬಾರಿಗೆ ಏಕಕಾಲದಲ್ಲಿ ಸಾಮೂಹಿಕ ಕಟಿಬಸ್ತಿ ಚಿಕಿತ್ಸೆ ನಡೆಯಲಿದೆ. ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಆಯುರ್ವೇದ ಔಷಧ ಪ್ರದರ್ಶನ ಏರ್ಪಡಿಸಲಾಗಿದೆ.ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿ ಎಸ್.ಜಿ.ಎಸ್.ವೈ ಸಭಾಂಗಣ, ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ಸುಳ್ಯ ಕೆ.ವಿ.ಜೆ.ಆಯುರ್ವೇದ ವೈದ್ಯಕೀಯ ಕಾಲೇಜು, ಪುತ್ತೂರು ಮನೀಷಾ ರೋಟರಿ ಸಭಾಂಗಣ, ಕೋರ್ಟ್ ರೋಡ್ ಹಾಗೂ ಮೂಡಬಿದ್ರೆ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯತನಕ ಉಚಿತ ಆಯುರ್ವೇದ ಚಿಕಿತ್ಸೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯುರ್ವೇದದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.