ತಾಜ್ ಮಹಲ್ ಶಿವ ದೇವಾಲಯವಾಗಿತ್ತು
ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರಪ್ರದೇಶ ಬಿಜೆಪಿ ಸಂಸದ
ಹೊಸದಿಲ್ಲಿ, ಅ.18: ತಾಜ್ ಮಹಲ್ ಬಗ್ಗೆ ಬಿಜೆಪಿ ಶಾಸಕರೊಬ್ಬರು ನೀಡಿದ ಹೇಳಿಕೆ ವಿವಾದಕ್ಕೀಡಾದ ನಡುವೆಯೇ ಪಕ್ಷದ ಸಂಸದರೊಬ್ಬರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ತಾಜ್ ಮಹಲ್ ಶಿವ ದೇವಾಲಯವಾಗಿದ್ದು, ಅದನ್ನು ಮೊಗಲರು ಧ್ವಂಸಗೈದಿದ್ದರು” ಎಂದು ಉತ್ತರಪ್ರದೇಶ ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ.
ಶಿವಲಿಂಗವಿದ್ದ ಸ್ಥಳದಲ್ಲಿ ತಾಜ್ ಮಹಲನ್ನು ಕಟ್ಟಲಾಗಿದೆ. ಹಿಂದೂಗಳ ಎಲ್ಲಾ ದೇವಾಲಯಗಳನ್ನು ಮೊಗಲರು ಧ್ವಂಸಗೈದಿದ್ದಾರೆ.. ತಾಜ್ ಮಹಲ್ ನಿಜವಾಗಿಯೂ ಹಿಂದೂ ದೇವಾಲಯವಾಗಿದ್ದು, ಹಿಂದೂ ದೇವ-ದೇವತೆಗಳ ಕುರುಹುಗಳಿವೆ. ಅಲ್ಲಿದ್ದ ಶಿವಲಿಂಗವನ್ನು ತೆರವುಗೊಳಿಸಿ ತಾಜ್ ಮಹಲನ್ನು ನಿರ್ಮಿಸಲಾಗಿದೆ” ಎಂದವರು ಹೇಳಿದ್ದಾರೆ.
ತಾಜ್ ಮಹಲ್ ಬಗ್ಗೆ ಬಿಜೆಪಿ ಶಾಸಕ ಸಂಗೀತ್ ಸೋಮ್ ನೀಡಿದ್ದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, “ಯಾವ ಕಾರಣಕ್ಕಾಗಿ ಹಾಗು ಯಾರು ತಾಜ್ ಮಹಲನ್ನು ನಿರ್ಮಿಸಿದ್ದಾರೆ ಎನ್ನುವುದು ಮುಖ್ಯವಲ್ಲ. ಭಾರತೀಯ ಕಾರ್ಮಿಕರ ಬೆವರು ಮತ್ತು ರಕ್ತದಿಂದ ತಾಜ್ ಮಹಲನ್ನು ನಿರ್ಮಿಸಲಾಗಿದೆ” ಎಂದಿದ್ದರು.